ಕಂಬಳದಿಂದ ವಿರಮಿಸಿದ ಜೋಡೆತ್ತುಗಳು ಮೊಯ್ಲಿ- ಪೂಜಾರಿ ವಿಶ್ರಾಂತದ ಭಾವಪೂರ್ಣ ಭೇಟಿ!

Spread the love

ಕಂಬಳದಿಂದ ವಿರಮಿಸಿದ ಜೋಡೆತ್ತುಗಳು ಮೊಯ್ಲಿ- ಪೂಜಾರಿ ವಿಶ್ರಾಂತದ ಭಾವಪೂರ್ಣ ಭೇಟಿ!

ಕರಾವಳಿಯ ರಾಜಕೀಯವೆಂದರೆ ಅದು ಕೆಸರು ಗದ್ದೆಯ ಕಂಬಳವಿದ್ದಂತೆ. ಇಲ್ಲಿ ಗೆಲುವಿನ ಓಟಕ್ಕೆ ಹುಮ್ಮಸ್ಸು ಬೇಕು, ಜೊತೆಗೆ ಪಕ್ಕದ ಜೋಡಿ ಕೋಣದ ಮೇಲೆ ಕಣ್ಣೂ ಇರಬೇಕು. ಮೊಯ್ಲಿ ಮತ್ತು ಪೂಜಾರಿ ಅವರ ಸಂಬಂಧವೂ ಅಷ್ಟೇ; ಅವರಿಬ್ಬರೂ ರಾಜಕೀಯ ಕಂಬಳದ ಕಣದಲ್ಲಿ ಒಟ್ಟಿಗೆ ಓಡಿದ ಚತುರ ಜೋಡಿಗಳು.

ವೀರಪ್ಪ ಮೊಯ್ಲಿ ಅವರು ಪೂಜಾರಿ ಅವರನ್ನು ದಿಲ್ಲಿಯ ಅಂಗಳಕ್ಕೆ ಕರೆದೊಯ್ದು ಇಂದಿರಾ ಗಾಂಧಿಯವರ ಕಣ್ಣಿಗೆ ಬೀಳಿಸಿ ರಾಜಕೀಯದ ಓಟಕ್ಕೆ ಹಸಿರು ನಿಶಾನೆ ತೋರಿದ್ದರು. ಅಲ್ಲಿಂದ ಶುರುವಾದ ಈ ಪಯಣದಲ್ಲಿ ರಮಾನಾಥ ರೈ ಮತ್ತು ಅಭಯಚಂದ್ರ ಜೈನ್ ಅವರಂತಹ ಅಪ್ಪಟ ಕಾಂಗ್ರೆಸ್ಸಿಗರು ಈ ಜೋಡಿ ಎತ್ತುಗಳ ಆರ್ಭಟದ ಬಳಿಕ ಭರವಸೆಯ ಜೋಡೆತ್ತುಗಳಾಗಿ ನಿಂತರು. ರೈ ಮತ್ತು ಜೈನ್ ಅವರದ್ದು ಯಾವತ್ತೂ ‘ಜೋಡಿ ಎತ್ತುಗಳ’ ಶೈಲಿ; ಒಬ್ಬರ ಹೆಜ್ಜೆಗೆ ಮತ್ತೊಬ್ಬರ ಲಯ ಬದ್ಧ ಸಾಥ್. ಆದರೆ ಇತ್ತೀಚಿಗೆ ಎತ್ತು ಏರಿಗೆ ಎಳೆಯಿತು ಕೋಣ ನೀರಿಗೆ ಎಂಬಂತಾಗಿದೆ

ಜನಾರ್ದನ ಪೂಜಾರಿ ಅಂದರೆ ಅದು ‘ಸಾಲ ಮೇಳ’ದ ಸಿಂಹಘರ್ಜನೆ. ದೇಶದ ಬಡವನ ಕೈಗೆ ಬ್ಯಾಂಕಿನ ಹಣ ಸಿಗಬೇಕೆಂದು ಅವರು ನಡೆಸಿದ ಹೋರಾಟ ಒಂದು ದೊಡ್ಡ ಸಾಂಸ್ಕೃತಿಕ ಸಂಗ್ರಾಮವೇ ಸರಿ. ಮೊಯ್ಲಿ ಅವರು ನೀತಿ ನಿಯಮಗಳ ಚೌಕಟ್ಟಿನಲ್ಲಿ ಆಡಳಿತ ನಡೆಸುವ ‘ತಂತ್ರಜ್ಞ’ ಜೊತೆಯಲ್ಲಿ ಸರಸ್ವತಿ ಸಮ್ಮಾನ ಪಡೆದುಕೊಂಡ ಲಕ್ಷ್ಮಿಪುತ್ರ. ಪೂಜಾರಿಯವರು ನೇರವಾಗಿ ಜನರ ನಾಡಿಮಿಡಿತ ಹಿಡಿಯುವ ‘ಜನನಾಯಕ’. ಈ ಇಬ್ಬರ ನಡುವೆ ಒಮ್ಮೊಮ್ಮೆ ಕಂಬಳದ ಕೋಣಗಳಂತೆ ಗುದ್ದಾಟವೂ ನಡೆಯುತ್ತಿತ್ತು. ಅದು ಅಸಹಿಷ್ಣುತೆಯೋ ಅಥವಾ ಅಧಿಕಾರದ ಆಕಾಂಕ್ಷೆಯೋ ಎಂಬ ಚರ್ಚೆ ತುಳುನಾಡಿನ ಹಳೆಯ ಹೋಟೆಲ್ ಬೆಂಚುಗಳಲ್ಲಿ ಈಗಲೂ ಹಸಿರಾಗಿದೆ.

ಪೂಜಾರಿಯವರು ಸಂಘಟನಾ ಚತುರರಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದರೆ, ಇತ್ತ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿ ರಾಜ್ಯವಾಳುತ್ತಿದ್ದರು. ಆಗಿನ ಕಾಲದ ರಾಜಕೀಯ ಬೆಳವಣಿಗೆಗಳು ಹೇಗಿದ್ದವೆಂದರೆ, ದಿಲ್ಲಿಯ ಹೈಕಮಾಂಡ್ ಕೂಡ ಈ ದಕ್ಷಿಣದ ಜೋಡಿಗಳ ಮಾತಿಗೆ ಕಿವಿಗೊಡುತ್ತಿತ್ತು.ಆದರೆ ಅದೆಲ್ಲೋ ಒಂದು ಕಡೆ ಇಬ್ಬರ ಅಹಂಗಳು ಅಡ್ಡ ಬಂದಾಗ, ಕರಾವಳಿಯ ಶಕ್ತಿ ಎರಡು ಹೋಳಾದಂತೆ ಭಾಸವಾಗುತ್ತಿತ್ತು. ರಮಾನಾಥ ರೈ ಅವರಂತಹ ನಾಯಕರು ಈ ಇಬ್ಬರ ನಡುವಿನ ಸೇತುವೆಯಾಗಲು ಪ್ರಯತ್ನಿಸಿ ಅಪಘಾತಗಳು ಆಗಿದ್ದವು. ರಾಜಕೀಯದ ವೇಗದಲ್ಲಿ ಎಷ್ಟೋ ಸಲ ಹಳೆ ಸ್ನೇಹದ ಗದ್ದೆ ಹಸಿಯಾಗುವುದಕ್ಕಿಂತ ಹೆಚ್ಚಾಗಿ ಕೆಸರಾಗಿದ್ದೇ ಜಾಸ್ತಿ. ಬಹಳ ವರ್ಷಗಳ ಮೌನದ ನಂತರ ಇತ್ತೀಚೆಗೆ ಈ ಇಬ್ಬರು ಧೀಮಂತರು ಇಂದು ಜನಾರ್ಧನ ಪೂಜಾರಿಯವರ ಮನೆಯಲ್ಲಿಯೇ ಅವರ ಅಪೇಕ್ಷೆಯಂತೆ ಮುಖಾಮುಖಿಯಾದಾಗ ಕಾಲ ಚಕ್ರ ಹಿಂದಕ್ಕೆ ತಿರುಗಿದಂತಿತ್ತು.

ಅಂದು ಮೊಯ್ಲಿ ಅವರು ಪೂಜಾರಿ ಅವರ ಕೈ ಹಿಡಿದು ಮಾತನಾಡಿಸಿದ ರೀತಿ, ಹಳೆ ನೆನಪುಗಳ ಬುತ್ತಿ ಬಿಚ್ಚಿದ ಪರಿಗೆ ಸಾಕ್ಷಿಯಾದವರಿಗೆ ಕಣ್ಣಾಲಿಗಳು ಒದ್ದೆಯಾಗಿದ್ದವು.

ಅಪ್ಪಟ ಪ್ರೀತಿ. ತಾವು ಮಾಡಿದ ತಪ್ಪುಗಳು, ಅಂದು ತೆಗೆದುಕೊಂಡ ಆತುರದ ನಿರ್ಧಾರಗಳ ಬಗ್ಗೆ ಮೆಲುಕು ಹಾಕುವಾಗ ಇಬ್ಬರಲ್ಲೂ ಮಾಗಿದ ಮೌನವಿತ್ತು. ಈ ವಿಶ್ರಾಂತ ಬದುಕಿನ ಸಂಧ್ಯಾಕಾಲದಲ್ಲಿ ನಿಂತು ನೋಡುವಾಗ, ಕೇಂದ್ರ ಸಚಿವರಾಗಿ ದಿಲ್ಲಿಯ ಗದ್ದುಗೆ ಏರಿದ ಸಡಗರಕ್ಕಿಂತಲೂ, ಕರಾವಳಿಯ ಮಣ್ಣಿನಲ್ಲಿ ಪರಸ್ಪರ ಬೆನ್ನಿಗೆ ಬೆನ್ನು ಕೊಟ್ಟು ನಿಂತಿದ್ದ ಆ ದಿನಗಳೇ ಹೆಚ್ಚು ಮೌಲ್ಯಯುತ ಎನಿಸುತ್ತಿವೆ. ಅಧಿಕಾರ ಎಂಬುದು ಹರಿಯುವ ನೀರು, ಆದರೆ ಮನುಷ್ಯ ಸಂಬಂಧಗಳು ಸ್ಥಿರವಾದ ಬಂಡೆಗಳು ಎಂಬ ಸತ್ಯ ಇಬ್ಬರಿಗೂ ಮನವರಿಕೆಯಾಗಿದೆ. ರಮಾನಾಥ ರೈ ಮತ್ತು ಅಭಯಚಂದ್ರ ಜೈನ್ ಅಂತಹವರು ಇಂದಿಗೂ ಇವರಿಬ್ಬರನ್ನು ನೋಡುವಾಗ ತಮ್ಮ ರಾಜಕೀಯದ ಬೇರುಗಳನ್ನು ಸ್ಮರಿಸಿಕೊಳ್ಳುತ್ತಾರೆ.

ಕಂಬಳದ ಓಟ ಮುಗಿದ ಮೇಲೆ ಕೋಣಗಳು ಮರದ ನೆರಳಿನಲ್ಲಿ ಹಾಯಾಗಿ ನಿಲ್ಲುವಂತೆ, ಅಥವಾ ಕಂಬಳದ ರೇಸಿನಲ್ಲಿ ಇನ್ನು ಮುಂದೆ ಪಾಲ್ಗೊಳ್ಳದೆ ಪಡೆದುಕೊಳ್ಳುವಂತೆ ..ಈ ಇಬ್ಬರೂ ನಾಯಕರು ಇಂದು ವಿಶ್ರಾಂತ ಜೀವನದಲ್ಲಿ ತಮ್ಮ ಪಯಣದ ಸುದೀರ್ಘ ಹಾದಿಯನ್ನು ಸಮಾಧಾನದಿಂದ ನೋಡುತ್ತಿದ್ದಾರೆ.

ಇತಿಹಾಸದ ಪುಟಗಳಲ್ಲಿ ಇವರಿಬ್ಬರ ಹೆಸರು ‘ಸ್ನೇಹ ಮತ್ತು ಸಂಘರ್ಷ’ದ ಅದ್ಭುತ ಸಂಗಮವಾಗಿ ಎಂದೆಂದಿಗೂ ಉಳಿಯಲಿದೆ.


Spread the love
Subscribe
Notify of

0 Comments
Inline Feedbacks
View all comments