ನನಗೆ ಬಡವರಿಂದ ಹಣ ಪಡೆಯುವ ದಾರಿದ್ರ್ಯ ಬಂದಿಲ್ಲ: ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಚಿವ ಝಮೀರ್ ಅಹ್ಮದ್  

Spread the love

ನನಗೆ ಬಡವರಿಂದ ಹಣ ಪಡೆಯುವ ದಾರಿದ್ರ್ಯ ಬಂದಿಲ್ಲ: ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಚಿವ ಝಮೀರ್ ಅಹ್ಮದ್  

ಬೆಂಗಳೂರು: ಬಡವರಿಂದ ದುಡ್ಡು ಪಡೆದವರು ಹುಳ ಬಿದ್ದು ಸಾಯ್ತಾರೆ. ನನಗೇನೂ ಬಡವರಿಂದ ಹಣ ಪಡೆಯುವಷ್ಟು ದರಿದ್ರತೆ ಬಂದಿಲ್ಲ ಎಂದು ವಸತಿ ಯೋಜನೆಗಳ ಮನೆಗಳಿಗೆ ಲಂಚ ಪಡೆದಿರುವ ಆರೋಪವನ್ನು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ನಿರಾಕರಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿ ಆರ್ ಪಾಟೀಲ್ ತುಂಬಾ ಹಿರಿಯರು. ಬಡವರ ಬಗ್ಗೆ ಕಾಳಜಿ ಇರುವವರು. ಯಾವ ತರಹ ಹೇಳಿದ್ದಾರೆ ಎಂದು ನನಗೂ ಅರ್ಥ ಆಗಿಲ್ಲ. ಪಾಟೀಲ್ ಅವರು ನನ್ನ ಬಗ್ಗೆ ಹೇಳಿದ್ದಾರಾ? ಮಿನಿಸ್ಟರ್ ಅಂತ ಹೇಳಿದ್ದಾರಾ? ಯಾವ ಇಲಾಖೆ ಅಂತಾನೂ ಅವರು ಹೇಳಿಲ್ಲ. ಯಾರು ಅಂತ ಅವರು ಹೇಳಬೇಕು ತಾನೇ? ಏನಾದ್ರೂ ಇದರಲ್ಲಿ ಕ್ಲಾರಿಟಿ ಇದೆಯಾ? ನಾನೊಬ್ಬ ಮಿನಿಸ್ಟರ್ ಆಗಿ ಹೇಳ್ತೇನೆ ಇದರ ಬಗ್ಗೆ ತನಿಖೆಯಾಗಲಿ. ಸಿಬಿಐಗೆ ಕೊಡಲಿ ಎಂದು ಹೇಳಿದರು.

ನಾನು ಮಂತ್ರಿ ಆದಮೇಲೆ 36 ಸಾವಿರ ಮನೆ ಕೊಟ್ಟಿದ್ದೇನೆ. ಬಿಜೆಪಿ, ಜೆಡಿಎಸ್ ನವರು ಒಂದು ಮನೆ ಕೊಟ್ಟಿದ್ದಾರಾ? ಕೊಟ್ಟಿದ್ದರೆ ಅವರು ಹೇಳಲಿ. ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದರು.

ಮೂರು ಹಂತಗಳಲ್ಲಿ ನಾವು ಮನೆಗಳನ್ನು ನೀಡುತ್ತೇವೆ. ಈಗ ನಾವು ಯಾವುದೇ ಹೊಸ ಗುರಿ ನೀಡಿಲ್ಲ. ಶಾಸಕರ ಬಹಳ ಒತ್ತಡ ಇತ್ತು ಅಂತ ಸಿಎಂ ಗಮನಕ್ಕೆ ತಂದೆ. 1.20 ಲಕ್ಷದ ಅನುದಾನದ ಬದಲು 3.5 ಲಕ್ಷ ಹಣ ನೀಡಲು ಸಿಎಂ ಕೂಡ ಒಪ್ಪಿದ್ದರು ಎಂದರು.

ಶಾಸಕರ ಪತ್ರದ ಮೇಲೆಯೇ ನಾವು ಮನೆ ಕೊಟ್ಟಿದ್ದು. 42,300 ಮನೆಗಳನ್ನು ಕೊಡಲು ನಾವು ಮುಂದಾಗಿದ್ದೆವು. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 14 ಲಕ್ಷ ಮನೆ ಕೊಟ್ಟಿದ್ದರು. ನಂತರ ಬಂದ ಸರ್ಕಾರ 5.8 ಲಕ್ಷ ಮನೆಗಳನ್ನು ನೀಡಿದೆ. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ವಾ? ಬರೀ ಸಿದ್ದರಾಮಯ್ಯ ಸರ್ಕಾರಕ್ಕೆ ಮಾತ್ರ ಕಾಳಜಿ ಇರೋದಾ? ಎಂದು ಪ್ರಶ್ನಿಸಿದರು.

9 ಲಕ್ಷ ಕೆಲಸಗಳು ನಡೆಯುತ್ತಿವೆ. ಸ್ಲಂ ಬೋರ್ಡ್ ಮನೆಗಳೂ ಕೂಡ ಬಾಕಿ ಇವೆ. ರಾಜೀವ್ ಗಾಂಧಿ ಹೌಸಿಂಗ್ ಯೋಜನೆ ಕೂಡ ಸಂಪೂರ್ಣ ಆಗಿಲ್ಲ. ಒಂದು ಮನೆ ಕಟ್ಟಬೇಕಾದರೆ 7.5 ಲಕ್ಷ ಆಗುತ್ತದೆ. 1.5 ಲಕ್ಷ ಕೇಂದ್ರದಿಂದ ಬರುತ್ತದೆ, ಅದಕ್ಕೆ ಜಿಎಸ್ಟಿ ಹಾಕಿ ಮತ್ತೆ 1.3 ವಾಪಸ್ ಪಡೆಯುತ್ತಾರೆ ಎಂದು ತಿಳಿಸಿದರು.


Spread the love
Subscribe
Notify of

0 Comments
Inline Feedbacks
View all comments