ಬೆಳ್ತಂಗಡಿ: ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ: ಪ್ರಕರಣ ದಾಖಲು
ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ 17 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಜಾತ್ರಾ ಸ್ಥಳದಲ್ಲಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಿನಾಂಕ 11.03.2026ರಂದು ಸಂಜೆ, ಬಾಲಕನು ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿದ್ದಾನೆ. ಈ ವೇಳೆ ಜಾತ್ರಾ ಸ್ಥಳದಲ್ಲಿದ್ದ ಕೆಲವರು, ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕನು ಜಾತ್ರೆಗೆ ಬಂದಿರುವುದಾಗಿ ಅಕ್ಷೇಪಿಸಿ, ಬಾಲಕನಿಗೆ ಹಲ್ಲೆ ನಡೆಸಿ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ, ಆರೋಪಿಗಳು ಬಾಲಕನನ್ನು ಬೈಕಿನಲ್ಲಿ ದೂರಕ್ಕೆ ಕರೆದುಕೊಂಡು ಹೋಗಿ ಮತ್ತೆ ಹಲ್ಲೆ ನಡೆಸಿದ್ದು, ಜಾತ್ರಾ ಸ್ಥಳದಲ್ಲಿ ತಾನೇ ತಪ್ಪು ಮಾಡಿರುವುದಾಗಿ ಬಾಲಕನಿಂದ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಬಳಿಕ ಅವನನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಬಳಿಕ ಬಾಲಕನು ಭಯಭೀತನಾಗಿ ಕೆಲ ದಿನಗಳಿಂದ ಆತಂಕದಲ್ಲಿದ್ದಾನೆ ಎಂದು ಬಾಲಕನ ತಂದೆ ದಿನಾಂಕ 18.03.2026ರಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ 30/2026ರಡಿ, ಕಲಂ 137(2), 115(2), 351(2), 352, 353(2) ಜೊತೆಗೆ 190 ಬಿಎನ್ಎಸ್ 2023ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.













