ಮೂಲಗೇಣಿ ಒಕ್ಕಲುಗಳಿಗೆ ಮಾಲೀಕತ್ವ ನೀಡುವ ಕಾಯಿದೆ ಶೀಘ್ರ ಜಾರಿಗೆ : ಐವನ್ ಡಿಸೋಜಾ
ಮಂಗಳೂರು: ಮೂಲಗೇಣಿ ಒಕ್ಕಲುಗಳಿಗೆ ಮಾಲೀಕತ್ವ ನೀಡುವ ಕಾಯಿದೆ ಶೀಘ್ರದಲ್ಲಿಯೇ ಶೆ.100ರಷ್ಟು ಜಾರಿಗೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದ್ದಾರೆ.

ರವಿವಾರದಂದು ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆದ ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಮಂಗಳೂರು-ಉಡುಪಿ ಇದರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸರಕಾರವೇ ತೀರ್ಮಾನ ತೆಗೆದುಕೊಳ್ಳಲಿ ಎಂದು ಈ ಹಿಂದೆ ನ್ಯಾಯಾಲಯ ಹೇಳಿತ್ತು. ಇದರ ಜಾರಿ ಸಂಬಂಧ ಜನವರಿಯಲ್ಲಿ ಮುಖ್ಯಮಂತ್ರಿಯವರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗುವುದು. ನ್ಯಾಯಾಲಯದಲ್ಲಿ ಶೀಘ್ರ ಆದೇಶ ಹೊರಬೀಳುವುದಕ್ಕೆ ಪೂರಕವಾಗಿ ಸರಕಾರ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಿಸಿದೆ. ಮೂಲಗೇಣಿಗೆ ಸಂಬಂಧಿಸಿದಂತೆ ಕಾನೂನು ಮತ್ತು ಸರಕಾರದ ನಿಲುವು ಸ್ಪಷ್ಟವಿದೆ. ದುರ್ಬಲರಾಗಿರುವ ಮೂಲಗೇಣಿ ಒಕ್ಕಲುಗಳು ಸುದೀರ್ಘ ಕಾಲದಿಂದ ಪ್ರಬಲರ ವಿರುದ್ದ ನಡೆಸಿಕೊಂಡು ಬಂದಿರುವ ಹೋರಾಟಕ್ಕೆ ಶೀಘ್ರ ಜಯ ಲಭಿಸುವ ವಿಶ್ವಾಸವಿದೆ ಎಂದು ಐವನ್ ತಿಳಿಸಿದರು.
ವೇದಿಕೆಯ ಅಧ್ಯಕ್ಷ ಯಶೋಧರ ಎಂ.ಕೆ, ಸ್ಥಾಪಕಾಧ್ಯಕ್ಷ ಮ್ಯಾಕ್ಸಿಂ ಡಿಸಿಲ್ವಾ, ಕಾರ್ಯದರ್ಶಿ ಸಂದೇಶ್ ಪ್ರಭು, ಖಜಾಂಚಿ ಪ್ರತಾಪಚಂದ್ರ ಶೆಟ್ಟಿ ಉಪಸ್ಥಿತರಿದ್ದರು:ಉಡುಪಿ ವಿಭಾಗದ ಪ್ರತಿನಿಧಿ ಎಸ್.ಎಸ್.ಶೇಟ್ ವಾಷಿ೯ಕ ವರದಿ ಮಂಡಿಸಿದರು. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.












