ಸಂಚಾರ ನಿಯಮ ಉಲ್ಲಂಘಿಸಿದವನಿಗೆ ನ್ಯಾಯಾಲಯದಿಂದ ವಿನೂತನ ಶಿಕ್ಷೆ – 15 ದಿನಗಳ ಕಾಲ ‘ಸಮುದಾಯ ಸೇವೆ’ಗೆ ಆದೇಶ

Spread the love

ಸಂಚಾರ ನಿಯಮ ಉಲ್ಲಂಘಿಸಿದವನಿಗೆ ನ್ಯಾಯಾಲಯದಿಂದ ವಿನೂತನ ಶಿಕ್ಷೆ – 15 ದಿನಗಳ ಕಾಲ ‘ಸಮುದಾಯ ಸೇವೆ’ಗೆ ಆದೇಶ

ಮಂಗಳೂರು: ಪದೇ ಪದೇ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿದ್ದ ಸವಾರನೊಬ್ಬನಿಗೆ ಸುಳ್ಯದ ನ್ಯಾಯಾಲಯವು ದಂಡದ ಜೊತೆಗೆ ಸಾರ್ವಜನಿಕವಾಗಿ ಸಂಚಾರ ನಿಯಮಗಳ ಅರಿವು ಮೂಡಿಸುವ ವಿಶಿಷ್ಟ ಶಿಕ್ಷೆಯನ್ನು ವಿಧಿಸಿದೆ.

ದಿನಾಂಕ 12/03/2026 ರಂದು ಸುಳ್ಯ ನಿವಾಸಿ ರಕ್ಷಿತ್ ಜಿ. ಎಂಬುವವರು ಸುಳ್ಯ ಪೇಟೆಯಲ್ಲಿ ಸಂಚಾರ ನಿಯಮಗಳನ್ನು ಸತತವಾಗಿ ಉಲ್ಲಂಘಿಸಿದ್ದರು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಬಿ.ಪಿ. ಅವರು ಐಎಂವಿ ಕಾಯ್ದೆಯಡಿ (IMV Act) ವಿವಿಧ ಕಲಂಗಳಡಿ (119 R/w 177, 184, 194(C)) ಮೂರು ಪ್ರತ್ಯೇಕ ಲಘು ಪ್ರಕರಣಗಳನ್ನು ದಾಖಲಿಸಿದ್ದರು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಳ್ಯದ ಮಾನ್ಯ ಎಸ್.ಸಿ.ಜೆ. ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಈ ಕೆಳಗಿನ ಶಿಕ್ಷೆಗಳನ್ನು ವಿಧಿಸಿ ಆದೇಶ ಹೊರಡಿಸಿದೆ: ನಗದು ದಂಡ: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಟ್ಟು 3,000 ರೂಪಾಯಿ ದಂಡ ವಿಧಿಸಲಾಗಿದೆ.

ಸಮುದಾಯ ಸೇವೆ (Community Service): ಇದು ಈ ತೀರ್ಪಿನ ವಿಶೇಷತೆಯಾಗಿದ್ದು, ಆರೋಪಿಯು ಒಟ್ಟು ಮೂರು ಪ್ರಕರಣಗಳಲ್ಲಿ ತಲಾ 5 ದಿನಗಳಂತೆ (ದಿನಾಂಕ 15/03/2026 ರಿಂದ 29/03/2026 ರವರೆಗೆ) ಒಟ್ಟು 15 ದಿನಗಳ ಕಾಲ ಸುಳ್ಯ ಪೇಟೆಯ ಪ್ರಮುಖ ಜಂಕ್ಷನ್‌ಗಳಲ್ಲಿ ನಿಂತು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು. ‘ಜಾಗೃತಿ ಫಲಕ ಹಿಡಿಯಬೇಕು: ಶಿಕ್ಷೆಯ ಅವಧಿಯಲ್ಲಿ ಸಂಚಾರ ನಿಯಮಗಳ ಅರಿವು ಮೂಡಿಸುವ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ನ್ಯಾಯಾಲಯ ಸೂಚಿಸಿದೆ.

ಪರವಾನಗಿ ಅಮಾನತು: ಆರೋಪಿತನ ಚಾಲನಾ ಪರವಾನಗಿಯನ್ನು (Driving License) ಮೂರು ತಿಂಗಳ ಕಾಲ ಅಮಾನತಿನಲ್ಲಿಡಲು ಆದೇಶಿಸಲಾಗಿದೆ.

ಸಂಚಾರ ನಿಯಮಗಳನ್ನು ಮೀರುವವರಿಗೆ ಈ ತೀರ್ಪು ಒಂದು ಎಚ್ಚರಿಕೆಯ ಸಂದೇಶವಾಗಿದ್ದು, ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.


Spread the love
Subscribe
Notify of

0 Comments
Inline Feedbacks
View all comments