ಕ್ರಿಸ್ಮಸ್ ಹಬ್ಬದ ವೇಳೆ ಕ್ರೈಸ್ತ ಸಂಪ್ರದಾಯದ ಮೇಲೆ ನಡೆದ ದಾಳಿ ಖಂಡನೀಯ- ಮಂಗಳೂರು ಧರ್ಮಪ್ರಾಂತ್ಯ
ಮಂಗಳೂರು: ಕ್ರಿಸ್ಮಸ್ ಹಬ್ಬವನ್ನು ಗುರಿಯಾಗಿಸಿಕೊಂಡು ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ಹಲ್ಲೆಗಳು ಖಂಡನೀಯ ಮತ್ತು ಸಂಬಂಧಪಟ್ಟ ಸರಕಾರಗಳು ಸಮುದಾಯದ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯ ಆಗ್ರಹಿಸಿದೆ
ಕೇರಳದ ಪಾಲಕ್ಕಾಡ್ ನಲ್ಲಿ ಕ್ರಿಸ್ಮಸ್ ಕ್ಯಾರಲ್ಸ್ ತಂಡದ ಮೇಲೆ ಮತಿಯವಾದಿಗಳು ಹಲ್ಲೆ ನಡೆಸಿದ್ದು, ಇನ್ನು ಕೆಲವೆಡೆ ಕ್ರಿಸ್ಮಸ್ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರಿಗೆ ತಡೆಯೊಡ್ಡಿ ಹಿಂಸೆ ನೀಡಲಾಗಿದೆ. ನವದೆಹಲಿಯಲ್ಲಿ ಸಾಂತಾಕ್ಲಾಸ್ ಟೋಪಿ ಧರಿಸಿದ್ದ ಕ್ರಿಶ್ಚಿಯನ್ ಮಹಿಳೆಯರು ಮತ್ತು ಮಕ್ಕಳ ಗುಂಪಿನ ವಿರುದ್ದ ಮತಾಂತರದ ಆರೋಪ ಹೊರಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಅನುಚಿತವಾಗಿ ವರ್ತನೆ ನಡೆಸಿದ್ದಾರೆ. ಬೆಂಗಳೂರಿನ ಕಾರ್ಯಕ್ರಮವೊಂದಕ್ಕೆ ಉದ್ದೇಶಪೂರ್ವಕವಾಗಿ ಪ್ರವೇಶ ಮಾಡಿ ಸತ್ಯ ನಿಷ್ಠ ಆರ್ಯ ಮತ್ತು ಆತನ ಬೆಂಬಲಿಗರು ಚರ್ಚಿನ ಪಾದ್ರಿಯೋರ್ವರಿಗೆ ಬೆದರಿಕೆ ಹಾಕಿರುವುದು ಸಂವಿಧಾನದ ಆಶಯಗಳ ವಿರುದ್ದ ನಡೆಯುತ್ತಿರುವ ಹಲ್ಲೆಯಾಗಿದೆ.
ದೇಶದ ಪ್ರಧಾನಿಗಳು ದೆಹಲಿ ಚರ್ಚಿಗೆ ಹೋಗಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದರೆ ಅದೇ ಸಮಯದಲ್ಲಿ ಹೊರಗಡೆ ದೇಶದ ವಿವಿಧ ರಾಜ್ಯಗಳಲ್ಲಿ ಮತಾಂಧ ಶಕ್ತಿಗಳು ಕ್ರಿಸ್ಮಸ್ ಆಚರಣೆಯನ್ನು ಧ್ವಂಸಗೊಳಿಸುತ್ತಿರುವುದು ಖಂಡನೀಯ. ಇತ್ತೀಚಿನ ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಕೇರಳ, ನವದೆಹಲಿ, ಉತ್ತರಪ್ರದೇಶ, ರಾಜಸ್ಥಾನ, ಉತ್ತರಾಖಂಡ ಹಾಗೂ ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತಾಂಧ ಶಕ್ತಿಗಳಿಂದ ಹಲ್ಲೆ, ಗಲಾಟೆ ಹಾಗೂ ಹಬ್ಬದ ಸಂಭ್ರಮವನ್ನು ಹಾಳು ಮಾಡುವ ಘಟನೆಗಳು ನಡೆದಿರುವುದು ಸಂವಿಧಾನಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇಟ್ಟು ಬದುಕುತ್ತಿರುವ ಕ್ರೈಸ್ತ ಸಮುದಾಯಕ್ಕೆ ತೀವ್ರ ನೋವು ತಂದಿದೆ. ಕ್ರೈಸ್ತರ ಸಂಪ್ರದಾಯಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳು ಕೇವಲ ಒಂದು ಸಮುದಾಯದ ಮೇಲಿನ ಹಲ್ಲೆಯಲ್ಲ, ಬದಲಾಗಿ ಭಾರತದ ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿಗಳಾಗಿವೆ ಆರಾಧನೆಯ ಸ್ವಾತಂತ್ರ್ಯಕ್ಕೆ ಬೆದರಿಕೆ ಹಾಕುವುದು ಸಂವಿಧಾನ ವಿರೋಧಿ ಕೃತ್ಯವಾಗಿದ್ದು, ಇದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ತರುವಂತಹದ್ದು
ಈ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಪಾಲನೆ ಮಾಡಲು ಸಂವಿಧಾನ ಸೂಕ್ತ ಅವಕಾಶ ನೀಡಿದ್ದು ಜಾತ್ಯಾತೀತ ರಾಷ್ಟ್ರದಲ್ಲಿ ನಡೆಯುತ್ತಿರುವ ಇಂತಹ ದೌರ್ಜನ್ಯಗಳು ಖಂಡನೀಯವಾಗಿದೆ. ಹಬ್ಬದ ಆಚರಣೆಯ ಸಂದರ್ಭದಲ್ಲಿ ಅಶಾಂತಿಯನ್ನು ಸೃಷ್ಠಿಸುವ ಹುನ್ನಾರ ಮೂಲಭೂತವಾದಿ ಗುಂಪುಗಳು ಹೊಂದಿದ್ದು ಇಂತಹವರ ವಿರುದ್ದ ಸರಕಾರಗಳು ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಮೂಲಕ ದೇಶದಲ್ಲಿ ಕ್ರೈಸ್ತ ಬಾಂಧವರು ಶಾಂತಿಯುತವಾಗಿ ನೆಮ್ಮದಿಯಿಂದ ಬದುಕು ಸಾಗಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮವಹಿಸಬೇಕು ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ. ಜೆ. ಬಿ. ಸಲ್ಡಾನಾ ಮತ್ತು ರೋಯ್ ಕ್ಯಾಸ್ತಲಿನೋ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.













