ಫರಂಗಿಪೇಟೆ: ಗಣೇಶೋತ್ಸವದ ಬ್ಯಾನರ್ ಹರಿದ ಆರೋಪ, ಪ್ರಕರಣ ದಾಖಲು
ಬಂಟ್ವಾಳ: ಅನುಮತಿ ಪಡೆದು ಹಾಕಿದ್ದ ಬ್ಯಾನರ್ ಅನ್ನು ಅಕ್ರಮವಾಗಿ ಹರಿದು ಹಾಕಿ, ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಫರಂಗಿಪೇಟೆಯ ಮದ್ಯಪಾನ ವ್ಯಸನಿ ಎನ್ನಲಾದ ವ್ಯಕ್ತಿಯೊಬ್ಬನ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ನಿತ್ಯ ಮದ್ಯ ವ್ಯಸನಿ ಎನ್ನಲಾಗುತ್ತಿರುವ ಹೈದರ್ ಎಂಬಾತ ಬ್ಯಾನರ್ ಹರಿದ ಆರೋಪಿ ಎಂದು ಗುರುತಿಸಲಾಗಿದೆ. ಫರಂಗಿಪೇಟೆ ನಿವಾಸಿ ಚಂದ್ರಶೇಖರ್ ಆಳ್ವ ಅವರು, ಸೇವಾಂಜಲಿ ಭವನದಲ್ಲಿ ನಡೆಯುತ್ತಿರುವ ಗಣೇಶೋತ್ಸವಕ್ಕೆ ಶುಭ ಕೋರುವ ಬ್ಯಾನರ್ ಅನ್ನು ಪೂರ್ವಾನುಮತಿ ಪಡೆದು ಕುಂಪನಮಜಲು ಕ್ರಾಸ್ ಬಳಿ ಅಳವಡಿಸಿದ್ದರು. ಬುಧವಾರ ರಾತ್ರಿ ಈ ಬ್ಯಾನರ್ ಅನ್ನು ಹರಿದು ಹಾಕಿ, ₹3,500 ನಷ್ಟ ಮಾಡಿದ್ದಲ್ಲದೆ, ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಸಾರ್ವಜನಿಕರು ಪ್ರಚೋದನೆಗೊಂಡು ಗಲಭೆ ಏಳಬಹುದೆಂದು ತಿಳಿದಿದ್ದರೂ, ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿ ಸಾರ್ವಜನಿಕ ವಲಯದಲ್ಲಿ ಅಶಂತಿಯುಂಟುಮಾಡಿದ ಕಾರಣಕ್ಕೆ ಹೈದರ್ ವಿರುದ್ಧ ಬಿಎನ್ ಎಸ್ ಕಾಯ್ದೆಯ ಕಲಂ 299, 191, 353 (1), 57, 324 (4) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾನರ್ ಹರಿದ ಸಂದರ್ಭದಲ್ಲಿ ಆರೋಪಿಯು ಪಾನಮತ್ತನಾಗಿದ್ದಾನೆಯೇ ಎಂಬುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.