ಬಂಟ್ವಾಳ: ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ದಾಸ್ತಾನು: ಇಬ್ಬರ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ: ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖಾಸಗಿ ಕಟ್ಟಡದಲ್ಲಿ ಅಕ್ರಮ ದಾಸ್ತಾನಿರಿಸಲಾಗಿದ್ದ ಸ್ಥಳಕ್ಕೆ ಆಹಾರ ಇಲಾಖಾಧಿಕಾರಿಗಳು ದಾಳಿ ನಡೆಸಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಪಟ್ಟೆಕೋಡಿ ಎಂಬಲ್ಲಿ ಶನಿವಾರ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಕಲ್ಲಡ್ಕ ನಿವಾಸಿಗಳಾದ ಗೋಡೌನ್ ನಿರ್ವಾಹಕ ಉಮ್ಮರಬ್ಬ ಯಾನೆ ಪುತ್ತುಮೋನು (47) ಹಾಗೂ ಕೆಲಸಗಾರ ರಫೀಕ್ (42) ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಖಚಿತ ವರ್ತಮಾನದ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಬಂಟ್ವಾಳ ನಗರ ಪೊಲೀಸರ ಜೊತೆಗೋಡಿ ಈ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಸುಮಾರು 25 ಕ್ವಿಂಟಾಲ್ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಗೋಡೌನಿನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಅನ್ನಭಾಗ್ಯ ಯೋಜನೆಯ 21.4 ಕ್ವಿಂಟಾಲ್ ಬೆಳ್ತಿಗೆ ಅಕ್ಕಿ ಹಾಗೂ 4.67 ಕ್ವಿಂಟಾಲ್ ಕುಚ್ಚಲು ಅಕ್ಕಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸುತ್ತಿದ್ದ ತೂಕದ ಮಾಪನ, ಮತ್ತು ಅಕ್ಕಿ ಸಾಗಾಟಕ್ಕೆಂದು ತಂದ ಅಟೋ ರಿಕ್ಷಾವನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.