ಬಿಜೆಪಿ ಪ್ರತಿಭಟನೆ: ಹತಾಶೆಯ ಪ್ರತೀಕ – ಗೀತಾ ವಾಗ್ಳೆ

Spread the love

ಬಿಜೆಪಿ ಪ್ರತಿಭಟನೆ: ಹತಾಶೆಯ ಪ್ರತೀಕ – ಗೀತಾ ವಾಗ್ಳೆ

ಬಿಜೆಪಿಗರು ಎಲ್ಲಾ ಗ್ರಾಮಗಳಲ್ಲೂ ಹಮ್ಮಿಕೊಳ್ಳಲು ಯೋಜಿಸಿರುವ ರಾಜ್ಯ ಸರಕಾರದ ಜನ ವಿರೋಧಿ ನೀತಿಯ ವಿರುದ್ಧ ಪ್ರತಿಭಟನೆಯು ಅವರ ಹತಾಶೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳನ್ನು ಘೋಷಿಸಿದಾಗ ಇದು ಮತದಾರರನ್ನು ವಂಚಿಸುವ ತಂತ್ರ,ಗ್ಯಾರಂಟಿಗಳನ್ನು ಅನುಷ್ಠಾನ ಗೊಳಿಸುವುದು,ಅವುಗಳಿಗೆ ದುಡ್ಡನ್ನು ಹೊಂದಿಸುವುದು ಕಾಂಗ್ರೆಸ್ ಗೆ ಅಸಾಧ್ಯವಾದ ಮಾತು.ಹಾಗಾಗಿ ಇದನ್ನು ನಂಬಿ ಕಾಂಗ್ರೆಸ್ ಗೆ ಮತ ನೀಡಬೇಡಿ ಎಂದು ಬೊಬ್ಬಿರಿದ ಇದೇ ಬಿಜೆಪಿಗರು ಕಾಂಗ್ರೆಸ್ ಪಕ್ಷದ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಒಂದೇ ತಿಂಗಳಲ್ಲಿ ಪಂಚ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಅನುಷ್ಠಾನ ಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎನ್ನುವ ನಾಟಕ ಆರಂಭಿಸಿದರು.ಇದ್ಯಾವುದನ್ನೂ ಲೆಕ್ಕಿಸದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರವು ಮತದಾರರಿಗೆ ನೀಡಿದ್ದ ಆಶ್ವಾಸನೆಯಂತೆ ಒಂದೊಂದಾಗಿ ಐದೂ ಗ್ಯಾರಂಟಿಗಳನ್ನು ಜಾರಿಗೆ ತರುವುದರ ಮೂಲಕ ನುಡಿದಂತೆ ನಡೆದ ಸರಕಾರವೆನ್ನುವುದನ್ನು ಸಾಬೀತು ಪಡಿಸುವುದರೊಂದಿಗೇ ಬಿಜೆಪಿಗರ ತಂತ್ರಗಳನ್ನು ಬಗ್ಗು ಬಡಿಯುವ ನಿಟ್ಟಿನಲ್ಲಿ ಸಫಲವಾಗಿದೆ ಎಂದವರು ಹೇಳಿದ್ದಾರೆ.

ಈ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿರುವ ಸಾಮಾನ್ಯ ಮತದಾರರು ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಪ್ರಶಂಸೆ ಮಾಡುತ್ತಿರುವುದು ಬಿಜೆಪಿಗರಿಗೆ ನುಂಗಲಾರದ ಬಿಸಿ ತುಪ್ಪ ವಾಗಿದೆ.ಹೇಗಾದರೂ ಮಾಡಿ ಮತದಾರರನ್ನು ಇದರಿಂದ ದಾರಿ ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಯೋಜನೆ ರೂಪಿಸಿರುವ ಬಿಜೆಪಿ ಇದೀಗ ಗ್ರಾಮಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.ಬಿಜೆಪಿಗರೇ, ನಿಮ್ಮ ಪ್ರತಿಭಟನೆ ಯಾರ ವಿರುದ್ಧ?ನೀವು ಮಾಡಿರುವ ಜನ ವಿರೋಧಿ ಕೆಲಸಗಳ ಪಟ್ಟಿಯನ್ನು ಗಮನಿಸಿದರೆ ಅವೆಲ್ಲವೂ ನಿಮ್ಮ ಬಿಜೆಪಿ ಆಡಳಿತದ ಅವಧಿಯಲ್ಲಿ ಹೊರತಂದಿರುವ ಆದೇಶಗಳು.ಅವೆಲ್ಲವೂ ನಿಮ್ಮ ನಾಯಕರು ಮಾಡಿರುವ ತಪ್ಪುಗಳು.ಅವೆಲ್ಲವನ್ನೂ ಇದೀಗ ಕಾಂಗ್ರೆಸ್ ಸರಕಾರದ ಮೇಲೆ ಹೊರುವ ನಿಮ್ಮ ಕುತಂತ್ರ ಎಂದಿಗೂ ಫಲಿಸಲಾರದು.ಯಾಕೆಂದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದ ಬಡ ಕುಟುಂಬಗಳ ಬದುಕನ್ನು ಹಸನು ಮಾಡುವಲ್ಲಿ ಮಹತ್ತರವಾದ ಹೆಜ್ಜೆಯನ್ನು ಇಟ್ಟಿದೆ.ಅದನ್ನು ಮತದಾರರು ಚೆನ್ನಾಗಿ ಅರಿತಿದ್ದಾರೆ.ನಿಮ್ಮ ಬೀದಿ ನಾಟಕದ ಬಗ್ಗೆಯೂ ತಿಳಿಯದಷ್ಟು ಮೂರ್ಖರೂ ಅವರಲ್ಲ.ಈಗ ನೀವು ಮಾಡಲು ಹೊರಟಿರುವ ಪ್ರತಿಭಟನೆ ನಿಮ್ಮ ಪಕ್ಷದ ವಿರುದ್ಧವೇ ಆಗಿದೆ.ಕೈಲಾಗದವ ಮೈಯೆಲ್ಲಾ ಪರಚಿಕೊಂಡ ಎಂಬಂತೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಜನಪರ ಕೆಲಸಗಳನ್ನು ನೋಡಲಾಗದೇ ಬಿಜೆಪಿ ಏನೇನೋ ನಾಟಕಗಳನ್ನು ಮಾಡಲು ಹೊರಟಿದೆ.ಇದು ಸೋಲಿನಿಂದ ಉಂಟಾಗಿರುವ ಹತಾಶೆಯೇ ಹೊರತು ಇನ್ನೇನೂ ಅಲ್ಲ.ಮತದಾರರು ಬಿಜೆಪಿಗರ ಈ ನಾಟಕವನ್ನು ಎಂದೂ ನಂಬಬಾರದು ಎಂದು ಗೀತಾ ವಾಗ್ಳೆ ಅವರು ಹೇಳಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments