ಮಂಗಳೂರು: ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಮಂಗಳೂರು: ಖ್ಯಾತ ಕೊಂಕಣಿ ಸಾಹಿತಿ/ಪತ್ರಕರ್ತ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇದು ಅವರ ಪ್ರಶಂಸಿತ ಸಾಹಿತ್ಯ ವಿಮರ್ಶೆ ಕೃತಿಯಾದ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ (2021)ಗೆ ನೀಡಲಾಗಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಭಾರತ ಸರ್ಕಾರ ಸಾಹಿತ್ಯಕ್ಕಾಗಿ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಪ್ರತೀ ವರ್ಷ 22 ಅನುಸೂಚಿತ ಭಾಷೆಗಳ ಜೊತೆಗೆ ಇಂಗ್ಲಿಷ್ ಮತ್ತು ರಾಜಸ್ಥಾನಿ ಸೇರಿ ಒಟ್ಟು 24 ಭಾಷೆಗಳ ಉತ್ಕೃಷ್ಟ ಕೃತಿಗಳನ್ನು ಆಯ್ದು ಈ ಪುರಸ್ಕಾರ ನೀಡಲಾಗುತ್ತದೆ.
ಕೊಂಕಣಿ ಭಾಷೆಯು 1992ರಿಂದ ಅನುಸೂಚಿತ ಭಾಷೆಯಾಗಿದ್ದು, ಗೋವಾ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿದಂತೆ ಐದು ರಾಜ್ಯಗಳಲ್ಲಿ ಪ್ರಚಲಿತದಲ್ಲಿದೆ. ಕೊಂಕಣಿ ಭಾಷೆಗೆ 1975ರಲ್ಲಿ ಸಾಹಿತ್ಯ ಅಕಾಡೆಮಿಯಿಂದ ಮಾನ್ಯತೆ ದೊರಕಿತ್ತು. 1977ರಿಂದ ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷೆಯ ಕೃತಿಗಳಿಗೂ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ಹಿಂದೆ ಮಂಗಳೂರಿನ ಚಾ. ಫ್ರಾ. ದೆಕೊಸ್ತಾ (1992) ಮತ್ತು ಮೆಲ್ವಿನ್ ರೊಡ್ರಿಗಸ್ (2011) ಕವನ ಸಂಕಲನಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರು. 2016ರಲ್ಲಿ ಎಡ್ವಿನ್ ಜೆ.ಎಫ್.ಡಿ. ಸೊಜಾ ಅವರು ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಎಚ್.ಎಂ. ಪೆರ್ನಾಲ್ ಅವರು ಈ ಪರಂಪರೆಯನ್ನು ಮುಂದುವರೆಸುತ್ತಿರುವ ಕರ್ನಾಟಕದ ನಾಲ್ಕನೇ ಕೊಂಕಣಿ ಸಾಹಿತಿಯಾಗಿದ್ದಾರೆ.
ಪೆರ್ನಾಲ್ ಅವರ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ ಕೃತಿಯು ಸಾಹಿತ್ಯ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮೊದಲ ಕೊಂಕಣಿ ಕೃತಿ ಎಂಬ ಐತಿಹಾಸಿಕ ಮೈಲುಗಲ್ಲನ್ನು ನಿರ್ಮಿಸಿದೆ. ಈ ಕೃತಿಗೆ ಮೊದಲು 2021ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಹಾಗೂ 2023ರಲ್ಲಿ ಗೋವಾ ಕೊಂಕಣಿ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಲಭಿಸಿತ್ತು. ಈ ಪುಸ್ತಕಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕೊಂಕಣಿ ಸಾಹಿತಿ ದಾಮೋದರ್ ಮೌಜೋ ಅವರು ವಿಸ್ತೃತ ಮುನ್ನುಡಿ ಬರೆದಿದ್ದು, ಮಂಗಳೂರಿನ ಕವಿತಾ ಪಬ್ಲಿಕೇಷನ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ.
ಉಡುಪಿ ಜಿಲ್ಲೆಯ ಪೆರ್ನಾಲ್ನಲ್ಲಿ ಹುಟ್ಟಿ, ಶಿರ್ವದ ಹಿಂದೂ ಜೂನಿಯರ್ ಕಾಲೇಜು ಹಾಗೂ ಎಂ.ಎಸ್.ಆರ್.ಎಸ್. ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು, ಮುಂಬೈಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ಹೆನ್ರಿ ಮೆಂಡೋನ್ಸಾ ವೃತ್ತಿಯಲ್ಲಿ ಕಮರ್ಷಿಯಲ್ ಅಕೌಂಟೆಂಟ್ ಆಗಿದ್ದಾರೆ. ಕನ್ನಡದಲ್ಲಿ ತರಂಗ, ಸಂಕ್ರಮಣ, ಶೂದ್ರ ಮುಂತಾದ ಪತ್ರಿಕೆಗಳ ಮೂಲಕ ಬರವಣಿಗೆ ಆರಂಭಿಸಿದ ಅವರು 1980ರ ದಶಕದ ಆರಂಭದಲ್ಲಿ ಯುವಕ್ ಮಾಸಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಪ್ರಸ್ತುತ ಕಥೆಗಾರ, ಕವಿ, ವಿಮರ್ಶಕ, ಸಂಪಾದಕ ಹಾಗೂ ಪ್ರಕಾಶಕರಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.
2011ರಲ್ಲಿ ಅವರು ಸ್ಥಾಪಿಸಿದ ಕಿಟಾಳ್ ಸಾಹಿತ್ಯಿಕ ಅಂತರ್ಜಾಲ ಪತ್ರಿಕೆ ಹಿರಿ–ಕಿರಿಯ ಲೇಖಕರನ್ನು ಒಳಗೊಂಡು ಸತತ ಹದಿನಾಲ್ಕನೇ ವರ್ಷದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದು, ಡಿಜಿಟಲ್ ಕೊಂಕಣಿ ಸಾಹಿತ್ಯ ನಿರ್ಮಿತಿಯಲ್ಲಿ ಮುಂಚೂಣಿಯಲ್ಲಿದೆ. 2013ರಲ್ಲಿ ಪಾಕ್ಷಿಕವಾಗಿ ಆರಂಭಿಸಿದ ಆರ್ಸೊ ಸಾಹಿತ್ಯ ಪತ್ರಿಕೆ ಪ್ರಸ್ತುತ ಕವಿ ವಿಲ್ಸನ್ ಕಟೀಲ್ ಸಂಪಾದಕತ್ವದಲ್ಲಿ ಮಾಸಪತ್ರಿಕೆಯಾಗಿ ಹನ್ನೆರಡನೇ ವರ್ಷದಲ್ಲಿ ಪ್ರಕಟವಾಗುತ್ತಿದ್ದು, ಆರ್ಸೊ ವಾರ್ಷಿಕ ವಿಶೇಷಾಂಕಗಳಿಗೆ ಸಾಹಿತ್ಯ ಲೋಕದಲ್ಲಿ ವಿಶೇಷ ಮಾನ್ಯತೆಯಿದೆ. ತಮ್ಮದೇ ಕಿಟಾಳ್ ಪ್ರಕಾಶನದ ಮೂಲಕ ಈವರೆಗೆ 15ಕ್ಕೂ ಹೆಚ್ಚು ಮೌಲಿಕ ಸಾಹಿತ್ಯ ಕೃತಿಗಳನ್ನು ಪೆರ್ನಾಲ್ ಪ್ರಕಟಿಸಿದ್ದಾರೆ.
ಈವರೆಗೆ ಪೆರ್ನಾಲ್ ಅವರ ನಾಲ್ಕು ಕವನ ಸಂಕಲನಗಳು — ಚಲ್ಯಾಂಕ್ ಚತ್ರಾಯ್ (1999), ಕಯ್ದ್ಯಾಚ್ಯೊ ಕವಿತಾ (2004), ಭಾಮುಣಾಂಚೆಂ ಚೆಡುಂ (2006) ಮತ್ತು ಜನೆಲ್ (2025), ಎರಡು ಕಥಾ ಸಂಕಲನಗಳು — ದೆವಾಕ್ ಸೊಡುಲ್ಲೊ ಪಾಡೊ (2002) ಮತ್ತು ಬೀಗ್ ಆನಿ ಬಿಗಾತ್ (2016), ಹಾಗೂ ಪ್ರಶಸ್ತಿ ವಿಜೇತ ಸಾಹಿತ್ಯ ವಿಮರ್ಶೆಯ ಕೃತಿ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ (2021) ಪ್ರಕಟವಾಗಿವೆ.
ಅವರ ಬೀಗ್ ಆನಿ ಬಿಗಾತ್ ಕಥಾ ಸಂಕಲನಕ್ಕೆ ವಿಶ್ವ ಕೊಂಕಣಿ ಕೇಂದ್ರದ ಖ್ಯಾತ ಉದ್ಯಮಿ ಟಿ.ವಿ. ಮೋಹನದಾಸ ಪೈ ಅವರ ತಾಯಿಯ ಹೆಸರಿನಲ್ಲಿ ಕೊಡಮಾಡುವ ಶ್ರೀಮತಿ ವಿಮಲಾ ವಿ. ಪೈ ಅತ್ಯುತ್ತಮ ಸಾಹಿತ್ಯ ಕೃತಿ ಪ್ರಶಸ್ತಿ (2017), ಕೊಂಕಣಿ ಕಾವ್ಯಕ್ಕೆ ನೀಡಿರುವ ಕೊಡುಗೆಗೆ ಕವಿತಾ ಟ್ರಸ್ಟ್ ನೀಡುವ ಮಥಾಯಸ್ ಕುಟುಂಬ ದತ್ತಿ ಕಾವ್ಯ ಪ್ರಶಸ್ತಿ (2018), ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ ಪುಸ್ತಕಕ್ಕೆ ಅತ್ಯುತ್ತಮ ಪುಸ್ತಕ ಪ್ರಶಸ್ತಿ (2021), ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ಸಾಹಿತ್ಯ ಗೌರವ ಪ್ರಶಸ್ತಿ (2022), ಕೊಂಕಣಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2023) ಹಾಗೂ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ ಪುಸ್ತಕಕ್ಕೆ ಗೋವಾ ಕೊಂಕಣಿ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ (2023) ಲಭಿಸಿವೆ.
850ಕ್ಕೂ ಹೆಚ್ಚು ಕವಿತೆಗಳು, 100ಕ್ಕೂ ಹೆಚ್ಚು ಕಥೆಗಳು ಹಾಗೂ 2,000ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಪೆರ್ನಾಲ್ ಅವರು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕೊಂಕಣಿ ಸಾಹಿತ್ಯವನ್ನು ಪೋಷಿಸುತ್ತಾ ಬಂದಿದ್ದಾರೆ. 2012ರಿಂದ ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರತೀ ವರ್ಷ ಅಬುಧಾಬಿಯ ಉದ್ಯಮಿ ಹಾಗೂ ದಾನಿ ಲಿಯೋ ರೊಡ್ರಿಗಸ್ ಕುಟುಂಬದ ದತ್ತಿಯಾಗಿ ಕಿಟಾಳ್ ಯುವ ಪುರಸ್ಕಾರವನ್ನು ನೀಡುತ್ತಿದ್ದಾರೆ. ಈ ಪ್ರಶಸ್ತಿಯು ಸನ್ಮಾನ ಪತ್ರ ಹಾಗೂ ರೂ.25,000 ನಗದು ಬಹುಮಾನವನ್ನು ಒಳಗೊಂಡಿದೆ.
ಪ್ರಸ್ತುತ ಮೈಕಲ್ ಡಿಸೋಜಾ ವಿಷನ್ ಕೊಂಕಣಿ ಪುಸ್ತಕ ಅನುದಾನ ಯೋಜನೆಯ ಪ್ರಧಾನ ಸಂಪಾದಕರಾಗಿದ್ದು, ಕೊಂಕಣಿ ಲೇಖಕ/ಲೇಖಕಿಯರಿಗೆ ತಮ್ಮ ಕೃತಿಯ ಮುದ್ರಣಕ್ಕಾಗಿ ಒಂದು ಪುಸ್ತಕಕ್ಕೆ ರೂ.40,000ವರೆಗೆ ಅನುದಾನ ನೀಡಲಾಗುತ್ತಿದೆ. ರೂ.40 ಲಕ್ಷ ವೆಚ್ಚದ ಈ ಯೋಜನೆಯ ಸಂಪೂರ್ಣ ಖರ್ಚನ್ನು ಅನಿವಾಸಿ ಉದ್ಯಮಿ ಮತ್ತು ಕೊಂಕಣಿ ಭಾಷಾಭಿಮಾನಿ ಮಹಾದಾನಿ ಶ್ರೀ ಮೈಕಲ್ ಡಿಸೋಜಾ ಪ್ರಾಯೋಜಿಸಿದ್ದು, ವಿಶ್ವ ಕೊಂಕಣಿ ಕೇಂದ್ರದ ಉಸ್ತುವಾರಿಯಲ್ಲಿ ಐದು ವರ್ಷಗಳ ಅವಧಿಗೆ 100 ಪುಸ್ತಕಗಳ ಪ್ರಕಟಣೆಯ ಗುರಿಯನ್ನು ಹೊಂದಿದೆ.
ಕೊಂಕಣಿ ಸಾಹಿತ್ಯ ಸಮುದಾಯದಲ್ಲಿ ಸಮರ್ಪಿತ ನಾಯಕರಾಗಿರುವ ಪೆರ್ನಾಲ್ ಅವರು 2023ರಲ್ಲಿ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ರಜತ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅಖಿಲ ಭಾರತ ಕೊಂಕಣಿ ಪರಿಷತ್ನಲ್ಲಿ ಕೋಶಾಧಿಕಾರಿಯಾಗಿದ್ದಾರೆ. ಅವರು ಕೊಂಕಣಿ ಲೇಖಕರ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಪ್ರಸ್ತುತ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ.












