
ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಆರ್ ಜೈನ್ ಅಧಿಕಾರ ಸ್ವೀಕಾರ
ಮಂಗಳೂರು: ಮಂಗಳೂರು ನೂತನ ನಗರ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಆರ್ ಜೈನ್ ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು.
ನಿರ್ಗಮನ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ನೂತನ ಆಯುಕ್ತರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿದರು.
ರಾಜಸ್ಥಾನದಲ್ಲಿ ಹುಟ್ಟಿದ ಕುಲದೀಪ್ ಅವರು ಬೆಳೆದಿದ್ದು ಚೆನ್ನೈನಲ್ಲಿ. 2011ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಕುಲದೀಪ್ ಅವರು , ದ.ಕ ಜಿಲ್ಲೆಯಲ್ಲಿ ಪ್ರೊಬೆಷನರಿ ಸೇವೆಯನ್ನು ನಿರ್ವಹಿಸಿದ್ದಾರೆ. ಅಲ್ಲದೆ ಚನ್ನಪಟ್ಟಣದಲ್ಲಿ ಎಎಸ್ಪಿ, ಚಾಮರಾಜನಗರ ಎಸ್ಪಿ, ಬಿಜಾಪುರ ಎಸ್ಪಿ, ಬೆಂಗಳೂರು ಸಿಟಿ ಕ್ರೈಂ ಮತ್ತು ಟ್ರಾಫಿಕ್ ಡಿಸಿಪಿ, ಕೆಎಸ್ಆರ್ಪಿ ಹಾಗೂ ಎಸಿಬಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಭ್ರಷ್ಟಾಚಾರವನ್ನ ಸಹಿಸಲ್ಲ, ಯಾವುದೇ ಮಾಹಿತಿ ಇದ್ರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಎಲ್ಲರ ಸಹಯೋಗದೊಂದಿಗೆ ಒಳ್ಳೆಯ ರೀತಿ ಕೆಲಸ ಮಾಡುತ್ತೇನೆ ಎಂದ ಅವರು ಮಂಗಳೂರು ಬಹಳ ಚೆನ್ನಾಗಿದೆ, ನಿನ್ನೆ ರಾತ್ರಿಯೇ ನೋಡಿಕೊಂಡು ಬಂದಿದ್ದು, ಇಲ್ಲಿ ಚಾಲೆಂಜ್ ಅನ್ನೋದಕ್ಕಿಂದ ದಿನನಿತ್ಯ ಸರಿಯಾಗಿ ಕೆಲಸ ಮಾಡಬೇಕು. ಸೂಪರ್ ವಿಷನ್, ಸಂಪರ್ಕ ಚೆನ್ನಾಗಿದ್ದರೆ ಎಲ್ಲರಿಗೂ ಒಳ್ಳೆಯದಾಗುತ್ತೆ ಯಾವುದೇ ಥರದ ಅಕ್ರಮ ಚಟುವಟಿಕೆಗಳ ಮೇಲೆ ಕ್ರಮ ಕೈಗೊಳ್ತೀವಿ. ಅಕ್ರಮ ಚಟುವಟಿಕೆ ಮಾಹಿತಿ ಬಂದ್ರೆ ಕ್ರಮ ನಿಶ್ಚಿತ ಎಂದರು.
ಯಾರೇ ಅದರ ಜವಾಬ್ದಾರಿ ಇದ್ದರೂ ಕಠಿಣ ಕ್ರಮ ಆಗುತ್ತದೆ ಸೂಕ್ಷ್ಮವಾಗಿದ್ದ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತೇನೆ. ನನ್ನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗೆ ನಾನು ಕೇಳಿಕೊಳ್ಳುತ್ತೇನೆ ಯಾವುದಕ್ಕೂ ಅವಕಾಶ ಕೊಡದೇ ಕೆಲಸ ಸರಿಯಾಗಿ ಮಾಡಿ ಜನರಿಗೆ ಅನುಕೂಲವಾಗುವ ರೀತಿ ಕೆಲಸ ಮಾಡಿ. ಭ್ರಷ್ಟಾಚಾರದ ಬಗ್ಗೆ ಮೊದಲು ನಾನೇ ಕಣ್ಗಾವಲು ಇಡುತ್ತೇನೆ ಮತ್ತು ಟ್ರಾಫಿಕ್ ಜಾಗೃತಿ ಮತ್ತು ಕ್ರಮಗಳ ಬಗ್ಗೆ ವಿಶೇಷ ಗಮನ ಹರಿಸಲಿದ್ದು, ಮಂಗಳೂರಿನ ಜನರು ದಯವಿಟ್ಟು ಟ್ರಾಫಿಕ್ ರೂಲ್ಸ್ ಪಾಲಿಸಿ ಎಂದರು.