ಯುದ್ಧದ ಲಾಭ ಪಡೆಯಲು ಗ್ಯಾಸ್ ಮಾಫಿಯಾ ಸಕ್ರಿಯವಾಗಿದೆ – ಬಿ.ಕೆ ಇಮ್ತಿಯಾಜ್
ಮಂಗಳೂರು : ಗ್ಯಾಸ್ ವಿತರಣೆ ವಿಳಂಬ ಮಾಡಿ ಗ್ಯಾಸ್ ಏಜನ್ಸಿಗಳು ಅಕ್ರಮ ದಂಧೆಗಿಳಿದಿದೆ ಅಮೇರಿಕಾ-ಇರಾನ್ ಯುದ್ಧದ ಲಾಭ ಪಡೆಯಲು ಗ್ಯಾಸ್ ಮಾಫಿಯಾಗಳು ಸಕ್ರಿಯವಾಗಿದ್ದು ಅಕ್ರಮ ದಂಧೆ ತಡೆಯಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಹೇಳಿದರು.
ಅವರು ನಗರದ ಮಿನಿ ವಿಧಾನಸೌಧದ ಎದುರು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಮರ್ಪಕ ಗ್ಯಾಸ್ ವಿತರಣೆ ಮಾಡದ ಸಮರ್ಪಕ ಗ್ಯಾಸ್ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಗ್ಯಾಸ್ ಅಭಾವ ಇದ್ದರೂ ಮಂಗಳೂರಿನ HPCL ಗ್ಯಾಸ್ ಸ್ಥಾವರಗಳಿಂದ ಮಹಾರಾಷ್ಟ್ರಕ್ಕೆ ಪ್ರತಿನಿತ್ಯ 300ರಷ್ಟು ಹೆಚ್ಚುವರಿ ಬುಲೆಟ್ ಟ್ಯಾಂಕರ್ ಗಳು ಗ್ಯಾಸ್ ತುಂಬಿಸಿ ಹೋಗುತ್ತಿವೆ ಎಂದು ಆರೋಪಿಸಿದ ಅವರು ದೇಶ ವಿಷಮ ಪರಿಸ್ಥಿತಿಯಲ್ಲಿರುವಾಗ ದೇಶದಲ್ಲಿ ಗ್ಯಾಸ್ ಅಭಾವ ಸೃಷ್ಟಿಸಿ ಅಧಿಕ ಲಾಭ ಗಳಿಸುವ ಹುನ್ನಾರಗಳು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಜನರು ಗ್ಯಾಸ್ ಪಡೆಯಲು ಏಜನ್ಸಿ ಮುಂದೆ ಸಾಲು ನಿಂತಿದ್ದರೂ ಕೇಂದ್ರ ಸರಕಾರದ ಮಂತ್ರಿಗಳು ದೇಶದಲ್ಲಿ ಗ್ಯಾಸ್ ಕೊರತೆ ಇಲ್ಲ ಎಂದು ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ ಇನ್ನೊಂದೆಡೆ ರಾಜ್ಯ ಸರಕಾರ ನಾಗರಿಕರ ಸರಬರಾಜು ವ್ಯವಸ್ಥೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು ಅಡುಗೆ ಅನಿಲದ ಅಕ್ರಮ ದಂಧೆಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು
ಡಿವೈಎಫ್ಐ ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗ್ರೆ,ಜಗದೀಶ್ ಬಜಾಲ್ ಖಾಲಿದ್ ಹರೇಕಳ,ತೌಸೀಫ್ ಬೈಕಂಪಾಡಿ, ಪ್ರವೀಣ್ ಕೊಂಚಾಡಿ,ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಭಾರತಿ ಬೋಳಾರ, ಯೋಗೀತಾ ಸುವರ್ಣ, ಸಾಮಾಜಿಕ ಮುಂದಾಳುಗಳಾದ ಮಹಾಬಲ ದೆಪ್ಪೆಲಿಮಾರ್,ಜೆರಾಲ್ಡ್ ಟವರ್ಸ್, ರವಿಚಂದ್ರ ಕೊಂಚಾಡಿ, ಅಬೂಬಕ್ಕರ್ ಜಲ್ಲಿ, ಉಮರಬ್ಬ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಹ ಕಾರ್ಯದರ್ಶಿ ರಿಜ್ವಾನ್ ಖಂಡಿಗ ಸ್ವಾಗತಿಸಿ, ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರ್ ವಂದಿಸಿದರು













