ವಿದ್ಯಾರ್ಥಿಗಳು, ವಿಪಕ್ಷ ನಾಯಕನ ಮೇಲಿನ ದೌರ್ಜನ್ಯ ಖಂಡನೀಯ: ರಮಾನಾಥ ರೈ
ಮಂಗಳೂರು: ನೀಟ್ ಪರೀಕ್ಷೆಯಲ್ಲಿನ ಅಕ್ರಮವನ್ನು ಪ್ರಶ್ನಿಸುವ ಹಕ್ಕು ವಿಪಕ್ಷಕ್ಕಿದೆ. ವಿದ್ಯಾರ್ಥಿಗಳ ಬೇಡಿಕೆ ವಿಪಕ್ಷದ ಬೇಡಿಕೆಯೂ ಆಗಿದ್ದು, ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಹಾಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆ ಆಡಳಿತ ಪಕ್ಷ ನಡೆಸಿಕೊಂಡ ರೀತಿ ಖಂಡನೀಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಅಕ್ರಮ ಪ್ರಶ್ನಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಸಹಾನುಭೂತಿ ವ್ಯಕ್ತಪಡಿಸಿ ಧರಣಿ ಕೂತವರನ್ನು ಅಪಹಾಸ್ಯ ಮಾಡುವುದು ಅವರನ್ನು ದೇಶದ್ರೋಹಿಗಳೆಂದು ಬಿಂಬಿಸುವುದು ಆಡಳಿತ ಪಕ್ಷಕ್ಕೆ ಶೋಭೆ ತರುವಂಥದ್ದು ಅಲ್ಲ ಎಂದರು.

ನೀಟ್ ಪರೀಕ್ಷೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ 21 ಮಕ್ಕಳಲ್ಲಿ ಅಪಹಾಸ್ಯ ಮಾಡುತ್ತಿರುವವರ ಮಕ್ಕಳಿದ್ದರೆ ಏನು ಮಾಡುತ್ತಿದ್ದರು ಎಂಬುದನ್ನು ಅರಿತುಕೊಳ್ಳಬೇಕಿದೆ. ವಿದ್ಯಾರ್ಥಿಗಳ ಜೊತೆ ಮನ್ ಕೀ ಬಾತ್ ಮಾತನಾಡುತ್ತಾರೆ. ನೀಟ್ ಹಗರಣ, ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಪ್ರತಿಯೊಬ್ಬ ನಾಗರಿಕರು ಚಹಾ ಅಂಗಡಿಗಳಲ್ಲೂ ಚರ್ಚೆ ಮಾಡಬೇಕು. ಈ ಸರಕಾರ ಏನು ತಪ್ಪು ಮಾಡುತ್ತಿದೆ ಎಂಬುದನ್ನು ಪ್ರತಿಯೊಬ್ಬರು ಚರ್ಚೆ ಮಾಡಬೇಕಾದ ಅಗತ್ಯ ಇದೆ ಎಂದವರು ಹೇಳಿದರು.
ಬೋಫೋರ್ಸ್ ಪ್ರಕರಣದ ಆರೋಪ ಬಂದಾಗ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸರಕಾರ ಜಂಟಿ ಸಂಸದೀಯ ಸಮಿತಿ ಮಾಡಿ ತನಿಖೆಗೆ ಕ್ರಮ ವಹಿಸಿತ್ತು. ಆದರೆ ಯುದ್ಧ ವಿಮಾಗಳ ಹಗರಣ ಬಂದಾಗ ಪ್ರಸಕ್ತ ಸರಕಾರ ಜಂಟಿ ಸಂಸದೀಯ ಸಮಿತಿಯನ್ನು ಒಪ್ಪಿಲ್ಲ. ಇವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲ ಎಂದು ಅವರು ಬಿಜೆಪಿ ವಿರುದ್ಧ ಟೀಕೆ ವ್ಯಕ್ತಪಡಿಸಿದರು.
ರೈತರ ಚಳವಳಿ ಸಂದರ್ಭ ರಾಜೀನಾಮೆಯ ಪ್ರಶ್ನೆ ಬಂದಾಗ ಬಿಜೆಪಿಯ ರಾಜನಾಥ್ ಸಿಂಗ್, ರಾಜೀನಾಮೆ ನೀಡಲು ನಮ್ಮ ಪಕ್ಷ ಕಾಂಗ್ರೆಸ್ ಅಲ್ಲ ಎಂಬ ತಾತ್ಸಾರದ ಮಾತನ್ನು ಹೇಳಿದ್ದರು. ದೇಶದಲ್ಲಿ ದೊಡ್ಡ ಹಗರಣ ಆಗಿರುವುದನ್ನು ಎಲ್ಲರೂ ಒಪ್ಪಬೇಕಾದ ವಿಚಾರ. ವಿದ್ಯಾರ್ಥಿಗಳ ಭವಿಷ್ಯವವನ್ನು ಮೊಟಕುಗೊಳಿಸುವ ರೀತಿಯಲ್ಲಿ ನಡೆದಿದೆ. ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದಾಗ ಅವರ ಮೇಲೆಯೂ ದಬ್ಬಾಳಿಕೆ ನಡೆದಿದೆ ಇದು, ಖಂಡನೀಯ ಎಂದರು.
ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ ಕೇವಲ ನೀಟ್ ಪತ್ರಿಕೆ ಸೋರಿಕೆ ಮಾತ್ರವಲ್ಲ. 21 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದು ಅರಾಜಕತೆಯ ಪ್ರಶ್ನೆ ಹೇಗಾಗುತ್ತದೆ. ಅಣ್ಣ ಹಝಾರೆ ಪ್ರತಿಭಟನೆ ಕುಳಿತಾಗ ಅರಾಜಕತೆ ಎಂದು ಹೇಳಿದ್ದೀರಾ? ವಿಪಕ್ಷಗಳು ಹಿಂದೆ ಮಾಡಿದಾಗ ಇದನ್ನು ಹೇಳಿದ್ದೀರಾ, ಈ ಇದನ್ನು ಅರಾಜಕತೆ ಎಂದು ಹೇಗೆ ಹೇಳುತ್ತೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು













