ಶತಮಾನ ಕಂಡ ನೆಲಸಂತ ಮಿಜಾರುಗುತ್ತು ಆನಂದ ಆಳ್ವ ಕಾಲಾಧೀನ

Spread the love

ಶತಮಾನ ಕಂಡ ನೆಲಸಂತ ಮಿಜಾರುಗುತ್ತು ಆನಂದ ಆಳ್ವ ಕಾಲಾಧೀನ

ಮೂಡುಬಿದಿರೆ: ಕೃಷಿ, ಸಂಘಟನೆ, ಸಾಂಸ್ಕೃತಿಕ, ಧಾರ್ಮಿಕ, ವಿದ್ಯಾ ಕ್ಷೇತ್ರ ಹಾಗೂ ಸಮಾಜ ಸೇವೆಗಳಲ್ಲಿ ಸಕ್ರಿಯರಾಗಿದ್ದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಮಂಗಳವಾರ ನಿಧನರಾದರು. ಅವರಿಗೆ 107 ವರ್ಷ ವಯಸ್ಸಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಮಿಜಾರುಗುತ್ತು ಮನೆತನದಲ್ಲಿ 1916ರ ಆಗಸ್ಟ್ 15ರಂದು ಜನಿಸಿದ ಅವರು, ಆದರ್ಶ ಕೃಷಿಕರಾಗಿ ಬದುಕು ಕಂಡವರು. ದಕ್ಷಿಣ ಕನ್ನಡದಲ್ಲಿ ಯಶಸ್ವಿಯಾಗಿ ಅಡಿಕೆ, ತೆಂಗು ಹಾಗೂ ಕ್ಯಾವೆಂಡಿಸ್ ಬಾಳೆ ಕೃಷಿಯನ್ನು ಪರಿಚಯಿಸಿದವರಲ್ಲಿ ಪ್ರಮುಖರಾಗಿದ್ದಾರೆ.

ಮಿಜಾರು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಡಪದವು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಸ್ಥಾಪಕರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಅವರು, ಮೂಡುಬಿದಿರೆ ಶೈಕ್ಷಣಿಕ ಕ್ರಾಂತಿಗೆ ಅರಿವಿನ ಸ್ಫೂರ್ತಿಯ ಸೆಲೆಯಾಗಿದ್ದರು.

ಕೃಷಿ ಕ್ರೀಡೆಯ ಹಿರಿಯ ಪ್ರೋತ್ಸಾಹಕರಾಗಿದ್ದ ಅವರು, ಮಿಜಾರು ಕೋಟಿ ಚೆನ್ನಯ ಜೋಡುಕೆರೆ ಕಂಬಳವನ್ನು ಪರಿಚಯಿಸಿದ ಕೀರ್ತೀ ಇವರಿಗೆ ಸಲ್ಲುತ್ತದೆ.

ಬದುಕಿನ ಸಂಧ್ಯಾಕಾಲದವರೆಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ನಿಕಟವರ್ತಿಯಾಗಿದ್ದ ಆನಂದ ಆಳ್ವರು, ನಾಗಮಂಡಲ, ಬ್ರಹ್ಮಕಲಶ, ದೈವಾರಾಧನೆ ಸೇರಿದಂತೆ ಧರ್ಮ ಮತ್ತು ಸಂಸ್ಕೃತಿಯ ಕೈಂಕರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು.

ಮೀನಾಕ್ಷಿ ಬೀಡಿ ಉದ್ಯಮ ಹಾಗೂ ಅಬಕಾರಿ ಗುತ್ತಿಗೆಯನ್ನು ಉದ್ಯಮವಾಗಿ ಕೆಲಕಾಲ ನಿರ್ವಹಿಸಿದ್ದರೂ, ವ್ಯಸನ ಮುಕ್ತ ಸಮಾಜ ನಿರ್ಮಾಣದ ಇಚ್ಛಾಶಕ್ತಿಗೆ ಪ್ರೇರಣೆಯಾಗಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸೇರಿದಂತೆ ಆಳ್ವಾಸ್‌ನ ಆರೋಗ್ಯ ಕೇಂದ್ರ ಮತ್ತಿತರ ಘಟಕಗಳ ಸ್ಥಾಪನೆಯ ಪ್ರೇರಕರು. ತಮ್ಮ ಶತಾಯುಷಿ ಜೀವನದ ಕೊನೆತನಕ ಅದಮ್ಯ ಜೀವನ ಪ್ರೀತಿ ಹೊಂದಿದ್ದ ಅವರದ್ದು, ಸದಾ ಹಸನ್ಮುಖಿ ಹಾಗೂ ಒಳಿತು ಹರಸುವ ಹೃದಯ. ಸೌಹಾರ್ದತೆಯ ಸೆಲೆಯಾಗಿದ್ದ ಆಳ್ವರು, ಸರ್ವ ಧರ್ಮಿಯರೊಂದಿಗೆ ಸಹಬಾಳ್ವೆಯ ಜೀವನ ನಡೆಸಿದವರು. ಬಂಟ ಸಮಾಜದಲ್ಲಿ ಶತಾಯುಷಿಗಳಾದ ಕೆಲವೇ ಕೆಲವರ ಪೈಕಿ ಇವರು ಒಬ್ಬರು.

ದಿ. ಸುಂದರಿ ಆನಂದ ಆಳ್ವ ಅವರ ಪತ್ನಿ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವರು ಸೇರಿದಂತೆ ಮೂವರು ಪುತ್ರರು ಹಾಗೂ ಪುತ್ರಿಯ ಸಂತೃಪ್ತ ಕುಟುಂಬ.

ಆನAದ ಆಳ್ವರ ಪಾರ್ಥಿವ ಶರೀರದ ದರ್ಶನಕ್ಕೆ ಮಿಜಾರಿನ ಸ್ವಗೃಹದಲ್ಲಿ ಬುಧವಾರ (ನ.1ರಂದು) ಬೆಳಿಗ್ಗೆ 9.30ರಿಂದ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪುತ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.


Spread the love