ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ 13 ಜನ ಅಸ್ವಸ್ಥ: ಘಟನೆಗೆ ಅಸಲಿ ಕಾರಣ ಬಿಚ್ಚಿಟ್ಟ ಪೊಲೀಸ್ ವರಿಷ್ಠಾಧಿಕಾರಿ
ಮಂಗಳೂರು: ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ ಹಲವರು ಅಸ್ವಸ್ಥಗೊಂಡಿದ್ದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಿನ್ನೆ ನಡೆದಿತ್ತು. ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ಭಾಗಿ ವೇಳೆ ನೂಕು ನುಗ್ಗಲು ಉಂಟಾದ ಕಾರಣ ಕೆಲವರು ಅಸ್ವಸ್ಥಗೊಂಡಿದ್ದರು. ಈ ಬಗ್ಗೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್ ಮಾಹಿತಿ ನೀಡಿದ್ದು, ಘಟನೆಯಲ್ಲಿ ಒಟ್ಟು 13 ಮಂದಿ ಅಸ್ವಸ್ಥಗೊಂಡಿದ್ದರು. ಎಲ್ಲರೂ ಈಗ ಚೆತರಿಸಿಕೊಂಡಿರೋದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ನಡೆದ ಜನಮನ ಕಾರ್ಯಕ್ರಮದಲ್ಲಿ ದೇಹ ನಿರ್ಜಲೀಕರಣದ ಕಾರಣದಿಂದ ಅಸ್ವಸ್ಥರಾದ 12 ಜನರಿಗೆ ಹೊರರೋಗಿಯಾಗಿ ಚಿಕಿತ್ಸೆಯನ್ನು ನೀಡಿ ಅವರನ್ನು ಮನೆಗೆ ಕಳುಹಿಸಲಾಗಿದೆ.
ಇದೇ ವೇಳೆ 55 ವರ್ಷದ ಮಹಿಳೆಯೊಬ್ಬರ ಸಕ್ಕರೆ ಕಾಯಿಲೆಯ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ಅವರನ್ನು ಆಬ್ಜರ್ವೇಶನ್ಗೆ ಇಟ್ಟು ವೈದ್ಯಕೀಯ ಮೇಲ್ವಿಚಾರಣೆಯ ನಂತರ ಮನೆಗೆ ರವಾನಿಸಲಾಗಿದೆ.
ಕಾರ್ಯಕ್ರಮದ ಆಯೋಜಕರಿಂದ ಪಡೆದ ಮಾಹಿತಿಯ ಪ್ರಕಾರ, ಆ ಸ್ಥಳದಲ್ಲಿ ಒಂದೇ ಸಮಯದಲ್ಲಿ ಗರಿಷ್ಠ 25,000 ಜನರ ಮಟ್ಟದ ಜನಸಮೂಹವಿರಬಹುದು ಎಂದು ಪೂರ್ವಭಾವಿಯಾಗಿ ತಿಳಿಸಲಾಗಿತ್ತು. ಮುಖ್ಯಮಂತ್ರಿಯವರ ಭೇಟಿಯ ವೇಳೆಯಲ್ಲಿ ಮೈದಾನದಲ್ಲಿ ಸುಮಾರು 20,000 ಜನರು ಮಾತ್ರ ಇದ್ದು, ಸುಮಾರು 12,000 ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲದೆ, ಕೆಲವು ಮಂದಿ ಬಂದು ಹೋಗುವ ಜನಸಂದಣಿಯೂ ಇದ್ದರೂ, ಮೈದಾನದ ಒಟ್ಟು ಸಾಮರ್ಥ್ಯವಾದ 20,000 ರಿಂದ 25,000 ಜನರ ಮಿತಿಯನ್ನು ಜನಸಮೂಹ ಮೀರಿರಲಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.