ಆಳ್ವಾಸ್‍ನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ – ಸಮಾರಂಭಕ್ಕೆ ಸಾಕ್ಷಿಯಾದ 20000ಅಧಿಕ ಮಂದಿ  

Spread the love

ಆಳ್ವಾಸ್‍ನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ – ಸಮಾರಂಭಕ್ಕೆ ಸಾಕ್ಷಿಯಾದ 20000ಅಧಿಕ ಮಂದಿ  

  • ‘ಕೋಟಿಕಂಠೋಂಸೇ’ ರಾಷ್ಟ್ರ ಐಕ್ಯತಾ ಗೀತೆಗೆ ನೆರೆದವರೆಲ್ಲಾ ತ್ರಿವರ್ಣಧ್ವಜವನ್ನು ಹಾರಿಸಿದರು.
  • 20000ಅಧಿಕ ಮಂದಿ ಸ್ವಾತಂತ್ರೋತ್ಸವ ಸಮಾರಂಭಕ್ಕೆ ಸಾಕ್ಷಿಯಾದರು.
  • ಮುಖ್ಯ ಅತಿಥಿಗಳನ್ನು ಪೈಲಟ್‍ಗಳಾದ ಜ್ಯೂನಿಯರ್ ಅಂಡರ್ ಆಫಿಸರ್‍ಗಳಾದ ಸುಮನ, ವೈಷ್ಣವಿ ಗೋಪಾಲ್, ಸಾಯಿಶ್ರಿಜ, ವಿಂದ್ಯ ವೇದಿಕೆಗೆ ಕರೆತಂದರು.
  • ಕೆಡೆಟ್ ಕ್ಯಾಪ್ಟನ್ ವಿಕಾಸ್‍ಗೌಡ ಅತಿಥಿಗಳಿಗೆ ಗೌರವರಕ್ಷೆಯನ್ನು ನೀಡಿದರು
  • ಹವಾಲ್ದಾರ್ ನಾರಾಯಣ್ ನಾಯ್ಕ್, ಎನ್‍ಸಿಸಿ ಅಧಿಕಾರಿ ಕ್ಯಾಪ್ಟನ್ ರಾಜೇಶ್, ಪ್ಲೈಯಿಂಗ್ ಆಫೀಸರ್ ಪರ್ವೆಜ್ ಉಪಸ್ಥಿತರಿದ್ದರು

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಡೆಪ್ಯೂಟಿ ಕಮಾಂಡೆಂಟ್ & ಚೀಫ್ ಇನ್‍ಸ್ಟ್ರಕ್ಟರ್, ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಚೆನ್ನೈನ ಮೇಜರ್ ಜನರಲ್ ಎ. ಅರುಣ್, ‘200 ವರ್ಷಗಳ ಕಾಲ ಬ್ರಿಟಿಷರ ಆಡಳಿತದಲ್ಲಿದ್ದ ಭಾರತವನ್ನು ತ್ಯಾಗ ಬಲಿದಾನಗಳ ಮೂಲಕ ಸ್ವತಂತ್ರಗೊಳಿಸಲಾಯಿತು. ಈ ಸಂದರ್ಭವನ್ನು ನಾವು ಸಂತೋಷದಿಂದ ಹಾಗೂ ಸಮಾಜದಲ್ಲಿನ ನಮ್ಮ ಜವಬ್ದಾರಿಯೇನೆಂದು ಅರಿತು ಆಚರಿಸಬೇಕು. ಕೇವಲ ಸೇನೆಯಲ್ಲಿದ್ದವರು ಮಾತ್ರ ದೇಶಕ್ಕೆ ಕೊಡುಗೆ ನೀಡುತ್ತಾರೆಂದಲ್ಲ. ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಶಿಕ್ಷಕನಾಗಿ, ರೋಗ ಪರಿಹಾರಕ ವೈದ್ಯನಾಗಿ, ಧರ್ಮ ಭೋದಕನಾಗಿ, ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನ ಜವಬ್ದಾರಿಯನ್ನು ಸಮಾಜದ ಒಳಿತಿಗಾಗಿ ಸಮರ್ಥವಾಗಿ ನಿರ್ವಹಿಸಿದಾಗಲೂ ದೇಶಕ್ಕೆ ಕೊಡುಗೆ ನೀಡಲು ಸಾಧ್ಯ. ನಾವು ಸಮಾಜದಲ್ಲಿ ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯವೆ ಹೊರತು, ನಮ್ಮ ಅಂತ್ಯ ಹೇಗಾಯಿತು ಎಂಬುದಲ್ಲ. ಆದ್ದರಿಂದ ಪ್ರತಿಯೊಬ್ಬರು ಸಾರ್ಥಕ್ಯ ಜೀವನವನ್ನು ನಡೆಸಿ ಸಮಾಜ ಮೆಚ್ಚುವಂತೆ ಬದುಕಬೇಕು ಎಂದರು.

ಇದೇ ಸಂದರ್ಭದಲ್ಲಿ ಪದವಿ ಪೂರ್ವ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಒಲ್ವಿಟಾ ಡಿ’ಸೋಜ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯದಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿ ಸುಜ್ಞಾನ್ ಆರ್ ಶೆಟ್ಟಿ ಅವರನ್ನು ತಲಾ ಎರಡು ಲಕ್ಷ ರೂಪಾಯಿ, ಸ್ಮರಣಿಕೆ ಹಾಗೂ ಹಾರ ಹಾಕಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜಾ ನೆರವೇರಿಸಿದರು

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ, ಮಾಜಿ ಶಾಸಕ ಅಭಯಚಂದ್ರಜೈನ್, ಟ್ರಸ್ಟಿ ಜಯಶ್ರೀ ಅಮರನಾಥ್ ಶೆಟ್ಟಿ, ವಿವೇಕ್ ಆಳ್ವ, ವಿನಯ್ ಆಳ್ವ, ಧನಲಕ್ಷ್ಮಿ ಕ್ಯಾಶೂ ಇಂಡಸ್ಟ್ರೀಸ್‍ನ ಶ್ರೀಪತಿ ಭಟ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


Spread the love