ಇಟೆಲಿಯ ಜೆವೆಲ್ಸ್ ಸರ್ಕಿಟ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಅಸ್ಟ್ರೋ ಮೋಹನ್ ಗೆ ಚಿನ್ನದ ಪದಕ
ಉಡುಪಿ: ಉದಯವಾಣಿ ವಾರ್ತಾ ಸಂಸ್ಥೆಯ ಹಿರಿಯ ಛಾಯಾಗ್ರಾಹಕರಾಗಿರುವ ಹಾಗೂ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಅಸ್ಟ್ರೋ ಮೋಹನ್ ಅವರು ಇಟೆಲಿಟಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅವರ ಭಾವನಾತ್ಮಕ ಛಾಯಾಚಿತ್ರ “ಶ್ವಾಸಕ್ಕಾಗಿ ಹೋರಾಟ” (Fight for Breath)ಗೆ ಕೆಳಗಿನ ಗೌರವಗಳು ಲಭಿಸಿವೆ:
- ಗ್ರಾನ್ ಪ್ರಿಕ್ಸ್ ಜಾಫರಿ – ಚಿನ್ನದ ಪದಕ
- ಗ್ರಾನ್ ಪ್ರಿಕ್ಸ್ ರುಬಿನಿ ಅತ್ಯುತ್ತಮ ಕೃತಿ – ಪತ್ರಿಕೋದ್ಯಮ ಛಾಯಾಚಿತ್ರ ಥೀಮ್ (ಬಣ್ಣ/ಕಪ್ಪುಬಿಳುಪಿನಲ್ಲಿ)
ಮಾನವ ಜೀವನದ ನಿಜಸ್ಥಿತಿ, ಹೋರಾಟ ಮತ್ತು ನಿಶ್ಶಬ್ದ ಪ್ರಾರ್ಥನೆಯ ಕ್ಷಣವನ್ನು ಸೆರೆಹಿಡಿದಿರುವ ಈ ಛಾಯಾಚಿತ್ರವು ಅದರ ಭಾವನಾತ್ಮಕ ಪತ್ರಿಕೋದ್ಯಮೀಯ ಮೌಲ್ಯ ಮತ್ತು ತಾಂತ್ರಿಕ ಶ್ರೇಷ್ಠತೆಗೆ ಅಂತರರಾಷ್ಟ್ರೀಯ ತೀರ್ಪುಗಾರರಿಂದ ಪ್ರಶಂಸೆಗೆ ಪಾತ್ರವಾಯಿತು.
“ಈ ಚಿತ್ರವು ನೋವಿನ ಒಂದು ಕ್ಷಣದಲ್ಲಿ ಹುಟ್ಟಿದ ಸತ್ಯದ ಪ್ರತೀಕವಾಗಿದೆ. ಇದನ್ನು ಪ್ರಪಂಚದ ದೃಷ್ಠಿಗೆ ತರುವ ಅವಕಾಶ ನನ್ನೆದುರು ಬಂದಿದೆ ಎಂಬುದೇ ನನ್ನ ಹೆಮ್ಮೆಯ ವಿಷಯವಾಗಿದೆ. ಈ ಗೌರವವು ನನ್ನದ್ದಾಗಿರದೇ, ಇದು ಪ್ರತಿಯೊಂದು ಮೌನ ಹೋರಾಟದ ಕಣ್ಮರೆಯಾದ ಸತ್ಯಕ್ಕೆ ಸಲ್ಲುವ ಗೌರವ,” ಎಂದು ಅಸ್ಟ್ರೋ ಮೋಹನ್ ವ್ಯಕ್ತಪಡಿಸಿದರು.
ಅವರು ಈಗಾಗಲೇ 800ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಗಳನ್ನು ಗಳಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕ್ಯಾನಾನ್ ಇಂಡಿಯಾದ Canon EOS Maestro, ಹಾಗೂ ಹಲವಾರು ಅಂತಾರಾಷ್ಟ್ರೀಯ ಛಾಯಾಗ್ರಾಹಕ ಸಂಸ್ಥೆಗಳ ಗೌರವಾನ್ವಿತ ಸದಸ್ಯರಾಗಿದ್ದಾರೆ. ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸಾದದ್ಯರೂ ಆಗಿದ್ದಾರೆ.ಭಾರತದಾದ್ಯಂತ ವಿವಿಧ ಕಾಲೇಜುಗಳಲ್ಲಿ ಛಾಯಾಗ್ರಹಣ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಅವರು ಮುಂದಿನ ತಲೆಮಾರಿಗೆ ಪ್ರೇರಣೆಯ ಚಿಲುಮೆಯಾಗಿದ್ದಾರೆ.
ಅಸ್ಟ್ರೋ ಮೋಹನ್ ಅವರ ಈ ಸಾಧನೆಗೆ ಉದಯವಾಣಿ ಹಾಗೂ ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ನ ನಿರ್ವಹಣಾ ಮಂಡಳಿ ಹರ್ಷ ವ್ಯಕ್ತಪಡಿಸಿದ್ದು, ಇದು ಸಂಸ್ಥೆಗೆ ಹೆಮ್ಮೆ ತಂದ ಕ್ಷಣವಾಗಿದೆ ಎಂದು ತಿಳಿಸಿದೆ.