ಉಡುಪಿಯ ರಾಜಾಂಗಣದಲ್ಲಿ ದುಬೈಯ ‘ಸಂಕೀರ್ಣ’ದ  ನೃತ್ಯಾರ್ಪಣೆ

Spread the love

ಉಡುಪಿಯ ರಾಜಾಂಗಣದಲ್ಲಿ ದುಬೈಯ ‘ಸಂಕೀರ್ಣ’ದ  ನೃತ್ಯಾರ್ಪಣೆ

ದುಬೈಯ ಖ್ಯಾತ ಶಾಸ್ತ್ರೀಯ ನೃತ್ಯ ಶಾಲೆ “ಸಂಕೀರ್ಣ”ದ ನಿರ್ದೇಶಕಿ, ಗುರು, ವಿದುಷಿ ಸಪ್ನಾ ಕಿರಣ್  ಹಾಗು  ಶಿಷ್ಯ  ವೃಂದದವರು   ರವಿವಾರ  ದಿನಾಂಕ 29-07 2018 ರ  ಸಂಜೆ 6:30  ರಿಂದ  ಉಡುಪಿ  ಶ್ರೀ ಕೃಷ್ಣ  ಮಠದ  ರಾಜಾಂಗಣದಲ್ಲಿ  ಪರ್ಯಾಯ  ಪೀಠದ  ಶ್ರೀ  ವಿದ್ಯಾಧೀಶ  ತೀರ್ಥ ಸ್ವಾಮೀಜಿಯವರ ಆಶೀರ್ವಾದ ದೊಂದಿಗೆ ಭರತನಾಟ್ಯ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ.

ಸುಮಾರು 2 ಗಂಟೆಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ  ನೃತ್ಯ ಸಂಕೀರ್ಣದ  ಕಲಾವಿದರಾದ ಅದಿತಿ  ಕಿರಣ್,  ಆಜ್ನ್ಯಾ ಆದೇಶ್, ಅಹಂತಿ ಸಂಕಮೇಶ್ವರನ್,  ಅವನಿ ಶ್ರೀನಿವಾಸಮೂರ್ತಿ ರಾವ್,  ಯಶ್ವಿ ಪಾಠಕ್,  ತೇಜಸ್ವಿನಿ ಭಟ್,  ಶರಣ್ಯ ಭಟ್, ನಿರ್ವಿ ಶೆಟ್ಟಿ, ಗ್ರೇಸ್  ಸ್ಟೀಪನ್  ರೋಡ್ರಿಗಸ್,  ತನ್ವಿಪ್ರಸನ್ನ,  ಹಂಸಿನಿ ಪ್ರಸನ್ನ,  ಪ್ರಜ್ಞಾ ಅನಂತ್, ದೀಕ್ಷಾ ರಾಜ್,  ಅಧಿತ್ರಿ ಸಂಕಮೇಶ್ವರನ್,  ದಿವ್ಯ ನರಸಿಂಹನ್,  ಯಾಶ್ನ ಶೆಟ್ಟಿ,  ಪ್ರಾಪ್ತಿ ಪಾಠಕ್,  ಮತ್ತು  ಪ್ರಿಯ ವಿಜಯ ಕುಮಾರ್  ಜೊತೆಗೆ  ಗುರು  ಸಪ್ನಾಕಿರಣ್ ರವರು  ಕೃಷ್ಣನ ವಿವಿಧ ರೂಪದ ವಿರಾಟ  ದರ್ಶನ ನೀಡಲಿದ್ದಾರೆ .

ಸುಮಾರು 15  ವರ್ಷಗಳಿಂದ  ಮಂಗಳೂರು  ಹಾಗು  ದುಬೈಯಲ್ಲಿ  ಭರತನಾಟ್ಯ  ನೃತ್ಯ ಶಿಕ್ಷಣ ತರಬೇತಿ ನೀಡುತ್ತಾ ಹಲವಾರು ನೃತ್ಯ ಪ್ರತಿಭೆಗಳನ್ನು ರೂಪಿಸಿ  ನಮ್ಮ  ಸಂಸ್ಕೃತಿಗೆ  ಕೊಡುಗೆ  ನೀಡುತ್ತಿರುವ  ವಿದುಷಿ  ಸಪ್ನಾಕಿರಣ್    ನೃತ್ಯ ಶಿಕ್ಷಕಿ  ಹಾಗು  ಸ್ವತಃ  ಉತ್ತಮ  ನೃತ್ಯಪಟು. 2011ರಲ್ಲಿ  ದುಬೈಯಲ್ಲಿ ‘ಸಂಕೀರ್ಣ ನೃತ್ಯಶಾಲೆ’ ಯನ್ನು  ಆರಂಭಿಸಿ  ವಿದೇಶದ  ಸಂಯುಕ್ತ  ಅರಬ್ ಸಂಸ್ಥಾನದಲ್ಲಿ  ನೆಲೆಸಿರುವ  ಭಾರತದಾದ್ಯಂತದ  ಹಲವಾರು ವಿದ್ಯಾರ್ಥಿನಿಯರಿಗೆ ನೃತ್ಯ  ತರಬೇತಿ  ನೀಡುತ್ತಿದ್ದಾರೆ.

2015ರಲ್ಲಿ ಯಕ್ಷ ಮಿತ್ರರೊಡಗೂಡಿ  ಯಕ್ಷಗಾನದಲ್ಲೂ ಪಾತ್ರವಹಿಸಿ  ಸಪ್ನಾ ಕಿರಣ್  ‘ಸೈ’ ಎನಿಸಿಕೊಂಡಿದ್ದಾರೆ.  ಈ ವರ್ಷ “ಧ್ವನಿ ಪ್ರತಿಷ್ಠಾನ”  ಪ್ರಸ್ತುತ ಪಡಿಸಿದ  ಭಾರತದ  ರಂಗ ಇತಿಹಾಸದ  ಶ್ರೇಷ್ಠ ನಾಟಕವಾದ  “ಸ್ವಪ್ನ ವಾಸವದತ್ತೆ” ಯಲ್ಲಿ  ಪ್ರಮುಖ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿ ಸಪ್ನಾ ಅವರು ತಮ್ಮ ಪ್ರತಿಭೆಯ ಮತ್ತೊಂದು  ಮುಖವನ್ನು  ತೋರಿದ್ದಾರೆ.

ದಕ್ಷಿಣ  ಭಾರತದ   ಪಾರಂಪರಿಕ  ನೃತ್ಯ ಕಲೆ  ಭರತನಾಟ್ಯವನ್ನು  ವಿದೇಶದ ಸಂಯುಕ್ತ  ಅರಬ್ ಸಂಸ್ಥಾನದ   ದುಬೈಯಲ್ಲಿ ಕಲಿತ  ‘ಸಂಕೀರ್ಣ’ದ ವಿದ್ಯಾರ್ಥಿನಿಯರು  ಸಂಯುಕ್ತ ಅರಬ್  ಸಂಸ್ಥಾನದ  ಕನ್ನಡ ಮತ್ತು  ಕನ್ನಡೇತರ  ಸಂಘ  ಸಂಸ್ಥೆಗಳ  ಕಾರ್ಯಕ್ರಮದಲ್ಲಿ  ಶಾಸ್ತ್ರೀಯ  ಹಾಗು ಜಾನಪದ ನೃತ್ಯಪ್ರಕಾರಗಳ ಪ್ರದರ್ಶನಗಳನ್ನು ನೀಡಿ ಜನ ಮನ ಗೆದ್ದಿದ್ದಾರೆ.

29-072018ರ  ಸಂಜೆ  ಉಡುಪಿಯಲ್ಲಿ  ಜರುಗುವ  ಭಕ್ತಿ ಭಾವ  ಪೂರ್ಣ  ಶಾಸ್ತ್ರೀಯ  ನೃತ್ಯ  ಕಾರ್ಯಕ್ರಮಕ್ಕೆ  ಎಲ್ಲಾ ಕಲಾ ಪ್ರಿಯರಿಗೆ  ಸಂಕೀರ್ಣ  ನೃತ್ಯ  ಶಾಲೆ ದುಬೈಯ ಗುರು, ಶಿಷ್ಯವೃಂದ  ಹಾಗು  ಪೋಷಕ ವರ್ಗದವರ  ಸವಿನಯ   ಆಮಂತ್ರಣ.


Spread the love