ಕುಂದಾಪುರದ ಯುವಕನ ಅಪ್ರತಿಮ ಸಾಧನೆ: ಉಡುಪಿ – ಲಡಾಕ್ 3300 ಕಿಮೀ ದೂರ ಸೈಕಲ್ ಯಾತ್ರೆ

Spread the love

ಕುಂದಾಪುರದ ಯುವಕನ ಅಪ್ರತಿಮ ಸಾಧನೆ: ಉಡುಪಿ – ಲಡಾಕ್ 3300 ಕಿಮೀ ದೂರ ಸೈಕಲ್ ಯಾತ್ರೆ 

ಕುಂದಾಪುರ: ಯುವಕನೋರ್ವ ಪರಿಸರ ಉಳಿಸಿ ಎಂಬ ಸಂದೇಶದೊಂದಿಗೆ ಉಡುಪಿಯಿಂದ ಲಡಾಕ್ ವರೆಗೆ 3300 ಕಿಮೀ ಯಾತ್ರೆಯನ್ನು ಸತತ 11 ತಿಂಗಳು ಸೈಕಲ್ ನಲ್ಲಿ ಪ್ರಯಾಣಿಸಿ ಸಾಧನೆ ಮಾಡಿ ಹುಟ್ಟೂರಿಗೆ ಮರಳಿದ್ದಾರೆ.

ಕುಂದಾಪುರ ತಾಲೂಕು ಕಮಲಶಿಲೆ ಹಳ್ಳೀಹೊಳೆ ಸಮೀಪದ ಪಾರ್ವತಿ ಮತ್ತು ಶೇಷು ಬೋವಿ ದಂಪತಿಯ ಪುತ್ರನಾದ ದಿನೇಶ್ ಬೋವಿ ಅವರೇ ಈ ಸಾಧನೆ ಮಾಡಿದ ಯುವಕ. ಈತ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಅಪ್ರತಿಮ ಸಾಧನೆ ತೋರಿ ಊರಿಗೆ ಮರಳಿದ ದಿನೇಶ್ ಅವರಿಗೆ ಶನಿವಾರ ಕಾಲೇಜಿನ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

ಈ ವೇಳೆ ಮಲ್ಪೆ ಪೊಲೀಸ್ ಠಾಣೆಯ ಪಿಎಸ್ ಐ ಅನಿಲ್ ಕುಮಾರ್, ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ|ಜಯರಾಮ ಶೆಟ್ಟಿಗಾರ್, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಆಲನ್ ಲೂವಿಸ್, ಶೇಖರ ಗುಜ್ಜರಬೆಟ್ಟು, ಶಾಲೆಟ್ ಮಥಾಯಸ್, ಶಿಕ್ಷಕ ರಕ್ಷಕ ಸಂಘದ ಗಣೇಶ್ ಮೇಸ್ತ ಹಾಗೂ ಇತರರು ಉಪಸ್ಥಿತರಿದ್ದರು.

2024 ರ ಅಕ್ಟೋಬರ್ 15 ರಂದು ಉಡುಪಿಯಿಂದ ಸೈಕಲ್ ಮೂಲಕ ಲಡಾಖ್ ಗೆ ಪ್ರಯಾಣ ಬೆಳೆಸಿದ್ದು 2025 ರ ಸಪ್ಟೆಂಬರ್ 15 ರಂದು ಲಡಾಖ್ ತಲುಪುವುದರ ಜೊತೆ ಸತತ 330 ದಿನಗಳ ಸೈಕಲ್ ಯಾತ್ರೆಯನ್ನು ಸಂಪೂರ್ಣಗೊಳಿಸಿದ್ದಾರೆ. ಸೈಕಲ್ ಮೂಲಕ ಅವರು 8 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಕರ್ನಾಟಕ ದಿಂದ ಆರಂಭಗೊಂಡು, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ ಮೂಲಕವಾಗಿ ಜಮು ಕಾಶ್ಮೀರ ತಲುಪಿದ್ದಾರೆ. 11 ತಿಂಗಳಿಗಿಂತ ಬೇಗ ತಲುಪ ಬಹುದಾಗಿದ್ದರೂ, ಕಾಶ್ಮೀರದ ಥಾಂಗ್ ಗ್ರಾಮದ ರಸ್ತೆ ವರ್ಷದಲ್ಲಿ 6 ತಿಂಗಳು ಮಾತ್ರ ತೆರೆದಿದ್ದು, ಅದಕ್ಕಾಗಿ 1 ತಿಂಗಳು ಮುಂಬಯಿಯಲ್ಲಿ ವಿಶ್ರಾಂತಿ ಮಾಡಿದ್ದರೆ, 3 ತಿಂಗಳು ಗುಜರಾತಿನಲ್ಲಿ ತಂಗಿದ್ದರು. ಲಡಾಖ್ ನ ಛಾಂಗ್ ಭಾರತದ ಗಡಿಗ್ರಾಮವಾಗಿದ್ದು ಅದರ , ಆಚೆ ಪಾಕಿಸ್ಥಾನ ಭೂಪ್ರದೇಶ ಕಾಣಿಸುತ್ತದೆ.

11 ತಿಂಗಳ ಸೈಕಲ್ ಪ್ರಯಾಣದಲ್ಲಿ ಆಹಾರಕ್ಕೆ ಹೆಚ್ಚಿನ ಖರ್ಚಾಗಿದ್ದು ಪ್ರಯಾಣದ ಸಂಪೂರ್ಣ ವೆಚ್ಚ ಸುಮಾರು 1.5 ಲಕ್ಷ ರೂ ನಷ್ಟು ಆಗಿದ್ದು, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ|ವಿನ್ಸೆಂಟ್ ಆಳ್ವಾ ಅವರು ದಾನಿಗಳ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಭರಿಸಿದ್ದಾರೆ. ಸ್ವತಃ ಸೈಕಲಿಸ್ಟ್ ಆಗಿರುವ ವಿನ್ಸೆಂಟ್ ಆಳ್ವಾ ಅವರು ಸೈಕಲ್ ಸಹ ಕೊಡುಗೆಯಾಗಿ ನೀಡಿ, ತನ್ನ ವಿದ್ಯಾರ್ಥಿಗೆ ಪ್ರೋತ್ಸಾಹಿಸಿದ್ದಾರೆ.

ಸೈಕಲ್ ಯಾತ್ರೆಗೆ ದಾರಿ ಮಧ್ಯೆ ಜೊತೆಯಾದ ನಾಯಿ ಚಾರ್ಲಿ
ದಿನೇಶ್ ಅವರು ಸೈಕಲ್ ಪ್ರಯಾಣದ ವೇಳೆ ಕರ್ನಾಟಕ – ಗೋವಾ ಗಡಿಭಾಗದಲ್ಲಿ ತಂಗಿದ್ದಾಗ ಬೀದಿ ಬದಿಯಲ್ಲಿದ್ದ ಹೆಣ್ಣು ನಾಯಿ ಮರಿಯೊಂದು ಇವರಿಗೆ ಸಿಕ್ಕಿದ್ದು, ಅದಕ್ಕೆ ಆಹಾರ ನೀಡಿದ್ದು ಬಳಿಕ ಅದನ್ನು ಜೊತೆಯಲ್ಲಿ ಕರೆದುಕೊಂಡು ಲಡಾಕ್ ಗೆ ಸೈಕಲಿನಲ್ಲಿಯೇ ಪ್ರಯಾಣ ಬೆಳೆಸಿದೆ. ದಿನೇಶ್ ಜೊತೆ ನಾಯಿ ಕೂಡ 326 ದಿನಗಳ ಕಾಲ ಸಂಚಾರ ಮುಗಿಸಿದೆ. ಅಲ್ಲಿಂದ ಆ ನಾಯಿಯೊಂದಿಗೆ ಅವರು ಊರಿಗೆ ವಾಪಾಸಾಗಿದ್ದು ಮನೆಗೆ ಕೊಂಡೊಯ್ದಿದ್ದಾರೆ.

ರಸ್ತೆಯಲ್ಲಿ ಸಿಕ್ಕವರಿಗೆ ಪರಿಸರ ಉಳಿಸಿ ಅನ್ನುವ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಂಡಿದ್ದೆ. ಮೊದಲು ನನ್ನ ಹೆತ್ತವರು ಬೇಡ ಎಂದರು ಬಳಿಕ ಸಂಪೂರ್ಣ ಪ್ರೋತ್ಸಾಹ ನೀಡಿದ್ದಾರೆ. ಈ ಹಿಂದೆ ಉಡುಪಿಯಿಂದ ಧರ್ಮಸ್ಥಳ ಕಾಲ್ನಡಿಗೆ ಮಾಡಿದ್ದೆ. ಅದಾದ ಬಳಿಕ ಉಡುಪಿಯಿಂದ ಕನ್ಯಾಕುಮಾರಿಗೆ 1.500 ಕಿ.ಮೀ. ದೂರವನ್ನು (21 ದಿನಗಳ ಕಾಲ) ಸೈಕಲ್ನಲ್ಲಿ ಕ್ರಮಿಸಿದ್ದೆ. ಮನೆಯವರು, ಕಾಲೇಜಿನವರ ಸಹಕಾರದಿಂದ ಇದು ಸಾಧ್ಯವಾಯಿತು. ನನ್ನ ಸಾಧನೆಯ ಹಿಂದೆ ಪ್ರಾಂಶುಪಾಲರಾದ ಡಾ|ವಿನ್ಸೆಂಟ್ ಆಳ್ವಾರ ಸಹಕಾರ ವಿಶೇಷ. ಇಂದು ನನ್ನ ಸಾಧನೆಗೆ 90% ಪಾಲು ಅವರದ್ದಾಗಿದೆ ಅವರ ಸಹಕಾರ ಮರೆಯಲು ಸಾಧ್ಯವಿಲ್ಲ
                                                                                       ದಿನೇಶ್ ಬೋವಿ, ಸೈಕಲ್ ಸಾಧಕ
ನಮ್ಮ ಕಾಲೇಜಿನ, ನನ್ನ ವಿದ್ಯಾರ್ಥಿ ಇಂದು ಈ ಸಾಧನೆ ಮಾಡಿರುವುದು ಅತೀವ ಖುಷಿ ತಂದಿದೆ. ಸತತ 11 ತಿಂಗಳುಗಳ ತನ್ನ ಸೈಕಲ್ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ನಮ್ಮ ಕಾಲೇಜಿನಲ್ಲಿ ಇಂತಹ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತೇವೆ. ಇಂತಹ ಸಾಧನೆ ಮಾಡುವ ಯಾವುದೇ ವಿದ್ಯಾರ್ಥಿಗಳಿದ್ದಲ್ಲಿ ಅವರಿಗೆ ಸಂಪೂರ್ಣ ಸಹಕಾರ ನೀಡಲು ಸಿದ್ದರಿದ್ದೇವೆ.
ಡಾ|ವಿನ್ಸೆಂಟ್ ಆಳ್ವಾ, ಪ್ರಾಂಶುಪಾಲರು.

Spread the love
Subscribe
Notify of

0 Comments
Inline Feedbacks
View all comments