ಕುಂದಾಪುರ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ವ್ಯಕ್ತಿ, ಮಾರಾಟ ಮಾಡಿದ ಮಧ್ಯವರ್ತಿಯ ಬಂಧನ

Spread the love

ಕುಂದಾಪುರ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ವ್ಯಕ್ತಿ, ಮಾರಾಟ ಮಾಡಿದ ಮಧ್ಯವರ್ತಿಯ ಬಂಧನ

ಕುಂದಾಪುರ: ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಾಗೂ ದನವನ್ನು ಮಾರಾಟ ಮಾಡಿದ ಮಧ್ಯವರ್ತಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೋಟೇಶ್ವರ ಗ್ರಾಮದ ಮೇಪು ಸಮೀಪ ಅಕ್ರಮ ಸಾಗಾಟ ನಿರತನಾದ ಮಹಮ್ಮದ್ ರಫೀಕ್ ಹಾಗೂ ಮಧ್ಯವರ್ತಿ ಮೂಡ್ಲಕಟ್ಟೆ ಸಾಂತಾವರ ನಿವಾಸಿ ಸತೀಶ್ ಸೇರಿಗಾರ್ (50) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಮಹಮ್ಮದ್ ಫೆಬ್ರವರಿ 19ರಂದು ರಾತ್ರಿ 9.30 ರ ಸುಮಾರಿಗೆ ಕುಂದಾಪುರ ಪೊಲೀಸ್ ಉಪ ನಿರೀಕ್ಷಕ ಹರೀಶ್ ಆರ್ ಅವರು ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಮೇಪು ಎಂಬಲ್ಲಿ ಸಾರ್ವಜನಿಕರು ದನ ಸಾಗಾಟ ಮಾಡುತ್ತಿರುವ ವಾಹನವನ್ನು ತಡೆದು ನಿಲ್ಲಿಸಿರುವುದಾಗಿ ಮಾಹಿತಿ ಬಂದಂತೆ ಸಿಬ್ಬಂದಿಗಳೊಂದಿಗೆ ಕೋಟೇಶ್ವರ ಗ್ರಾಮದ ಮೇಪು ಎಂಬಲ್ಲಿಗೆ ಹೋದಾಗ ಅಲ್ಲಿ ಸಾರ್ವಜನಿಕರು ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ KA-15-8564 ಮಹೇಂದ್ರ ಜಿಪ್ ವಾಹನವನ್ನು ನಿಲ್ಲಿಸಿ ಜಾನುವಾರು ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ತಡೆದು ನಿಲ್ಲಿಸಿ ಹಿಡಿದಿಟ್ಟಿದ್ದು ಕಂಡು ಬಂದಿದ್ದು ಅಲ್ಲದೇ ವಾಹನದಲ್ಲಿ ಒಂದು ಗಂಡು ಜಾನುವಾರುವನ್ನು ವಾಹನದ ಹಿಂಬದಿ ಬಾಡಿಯಲ್ಲಿ ಹಗ್ಗದಿಂದ ಬಿಗಿದು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡು ಬಂತು.

ಬಂಧಿತ ಆರೋಪಿ ಮಹಮ್ಮದ್ ರಫೀಕ್ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಮೇವು ಬಾಯಾರಿಕೆ ನೀಡದೇ ನೈಲಾನ್ಹಗ್ಗದಿಂದ ಕುತ್ತಿಗೆಗೆ ಕಟ್ಟಿ ಪಿಕ್ ಅಪ್ ವಾಹನದಲ್ಲಿ ಸಾಗಿಸುತ್ತಿದ್ದ. ವಿಚಾರಣೆ ವೇಳೆ ಪರವಾನಿಗೆ ಇಲ್ಲದೆ ಕಳವು ಮಾಡಿ ಜಾನುವಾರು ಮಾಂಸಕ್ಕಾಗಿ ಸಾಗಿಸುತ್ತಿರುವ ಹಾಗೂ ತನಗೆ ದನವನ್ನು ಮಧ್ಯವರ್ತಿ ಸತೀಶ್ ಸೇರಿಗಾರ್ ಮಾರಾಟ ಮಾಡಿದ್ದಾಗಿ ಮಹಮ್ಮದ್ ರಫೀಕ್ ಮಾಹಿತಿ ಪೊಲೀಸರಿಗೆ ನೀಡಿದ್ದಾನೆ. ಆರೋಪಿ ಮಹಮ್ಮದ್ ರಫೀಕ್ ಮಾಹಿತಿ ಆಧರಿಸಿ ಪೊಲೀಸರು ಮಧ್ಯವರ್ತಿ ಸತೀಶ್ ಸೇರಿಗಾರನನ್ನು ಕೂಡ ಬಂಧಿಸಿದ್ದಾರೆ.

ಕುಂದಾಪುರ ಠಾಣೆಯಲ್ಲಿ ಗೋಹತ್ಯಾ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯಿದೆ ಪ್ರಕರಣ ದಾಖಲಾಗಿದೆ.


Spread the love