ಕುವೆಂಪು ಅವರ ವಿಶ್ವಮಾನವ ಕಲ್ಪನೆ ಎಲ್ಲ ಕಾಲಕ್ಕೂ ಪ್ರಸ್ತುತ :ಯು ಟಿ ಖಾದರ್ 

Spread the love

ಕುವೆಂಪು ಅವರ ವಿಶ್ವಮಾನವ ಕಲ್ಪನೆ ಎಲ್ಲ ಕಾಲಕ್ಕೂ ಪ್ರಸ್ತುತ :ಯು ಟಿ ಖಾದರ್ 

ಮಂಗಳೂರು : ಕುವೆಂಪು ಅವರ ವಿಶ್ವಮಾನವ ಕಲ್ಪನೆ ಎಲ್ಲ ಕಾಲಕ್ಕೂ ಪ್ರಸ್ತುತ. ಮನುಜಮತ ವಿಶ್ವಪಥ ಎಂಬ ಕವಿ ಕಲ್ಪನೆಯಂತೆ ವಿಶಾಲ ಮನೋಭಾವದೊಂದಿಗೆ ಬದುಕು ಸಾಗಿದಾಗ ನಿರ್ಮಾಣವಾಗುವ ಸಮಾಜದ ಕಲ್ಪನೆ ನಿಜಕ್ಕೂ ಸುಂದರ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹೇಳಿದರು.

ಅವರು ಇಲ್ಲಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಶನಿವಾರ ಜರುಗಿದ ರಾಷ್ಟ್ರಕವಿ ಕುವೆಂಪು ಜನ್ಮ ಜಯಂತಿಯ ಅಂಗವಾಗಿ ಆಯೋಜಿಸಿದ ವಿಶ್ವ ಮಾನವ ದಿನಾಚರಣೆಯಲ್ಲಿ ಕವಿ ಕುವೆಂಪು ಅವರಿಗೆ ಗೌರವ ನಮನ ಸಲ್ಲಿಸಿ ಮಾತನಾಡುತ್ತಿದ್ದರು.

ಮನುಷ್ಯರು ತಮ್ಮ ಆಚರಣೆಗಳಿಂದ ಅಮರರಾಗುತ್ತಾರೆ. ಉತ್ತಮವಾಗಿ ಬದುಕಲು ಹಾದಿ ತೋರಿದ ಮಹಾತ್ಮರು ನಮ್ಮಲ್ಲಿ ಸಾಕಷ್ಟು; ಅವರುಗಳ ದಿನಾಚರಣೆ ವೇಳೆ ಅವರ ಸ್ಮರಣೆಯೊಂದಿಗೆ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ಹಾಗೂ ಆಚರಣೆಗಳು ಸಾರ್ಥಕವಾಗಲಿದೆ ಎಂದು ಸಚಿವರು ನುಡಿದರು.

ಸಮಾರಂಭದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಇಂದು ಮೌಲ್ಯಗಳಿಗಾಗಿ ಭಾರತದ ಕಡೆಗೆ ನೋಡುತ್ತಿವೆ. ವಿಶ್ವಾತ್ಮಕ ಚಿಂತನೆಗಳನ್ನು ಉದಯರವಿ ಹಾಗೂ ಕುಪ್ಪಳ್ಳಿಯಿಂದ ಜಗತ್ತಿಗೆ ನೀಡಿದ ಕುವೆಂಪು ಅವರ ಸಪ್ತ ಪಥಗಳಾದ ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯತೆ, ಪೂರ್ಣದೃಷ್ಠಿ, ಸ್ವಾಭಿಮಾನ, ವಿಚಾರಕ್ರಾಂತಿಯನ್ನು ನಮ್ಮ ಯುವ ಜನತೆಗೆ ಮಾರ್ಗದರ್ಶಕ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಮಾತನಾಡಿದರು. ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು, ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತು ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ದಿವಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ವಂದಿಸಿದರು.


Spread the love