ಕೃಷಿ ಭೂಮಿ 11- ಇ ನಕ್ಷೆ ವಿಂಗಡನೆ ಅವಕಾಶ ನೀಡುವಂತೆ ಕಂದಾಯ ಸಚಿವರಿಗೆ ಯಶ್ಪಾಲ್ ಸುವರ್ಣ ಮನವಿ

Spread the love

ಕೃಷಿ ಭೂಮಿ 11- ಇ ನಕ್ಷೆ ವಿಂಗಡನೆ ಅವಕಾಶ ನೀಡುವಂತೆ ಕಂದಾಯ ಸಚಿವರಿಗೆ ಯಶ್ಪಾಲ್ ಸುವರ್ಣ ಮನವಿ

ಉಡುಪಿ: ಕೃಷಿ ಭೂಮಿಯನ್ನು 11- ಇ ನಕ್ಷೆ ಮೂಲಕ ವಿಂಗಡನೆಗೆ ಅವಕಾಶ, ಮಳೆ ಹಾನಿ ಪರಿಹಾರ ಹಾಗೂ ವಸತಿ ಯೋಜನೆಯಡಿ ಮಂಜೂರಾದ ಬಾಕಿ ಅನುದಾನ ಬಿಡುಗಡೆಯ ಬಗ್ಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯು ಭೌಗೋಳಿಕವಾಗಿ ಇತರ ಜಿಲ್ಲೆಗಳಿಗಿಂತ ವಿಭಿನ್ನವಾಗಿ ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರಿಂದ ಕೂಡಿದ ಭೂ ಪ್ರದೇಶವಾಗಿದ್ದು ಹಿಂದಿನಿಂದಲೂ ಕಂದಾಯ ನಿಯಮಗಳನ್ನು ರೂಪಿಸುವಾಗ ಉಡುಪಿ ಜಿಲ್ಲೆಯೂ ಸೇರಿದಂತೆ ಅವಿಭಜಿತ ದ.ಕ ಜಿಲ್ಲೆಗೆ ರಿಯಾಯಿತಿ ನೀಡಿಕೊಂಡು ಬರಲಾಗುತ್ತಿದೆ.

ಪ್ರಸ್ತುತ ಸರಕಾರದ ಆದೇಶದಂತೆ ಮನೆ ನಿರ್ಮಾಣಕ್ಕೆ ಭೂ ಪರಿವರ್ತನೆ ಪೂರ್ವದಲ್ಲಿ ಕೃಷಿ ಭೂಮಿಯನ್ನು ವಿಂಗಡಿಸಲು ಕನಿಷ್ಠ 50 ಸೆಂಟ್ಸ್ ಮಿತಿ ನಿಗದಿ ಪಡಿಸಲಾಗಿರುತ್ತದೆ. ಜಿಲ್ಲೆಯಲ್ಲಿ 50 ಸೆಂಟ್ಸ್ ಗಿಂತ ಕಡಿಮೆ ಜಾಗ ಹೊಂದಿರುವ ಸಾವಿರಾರು ರೈತರಿದ್ದು, ಹಲವು ಕಾರಣಗಳಿಗಾಗಿ 11-ಇ ನಕ್ಷೆ ಆಧಾರದಲ್ಲಿ ಜಾಗ ವಿಂಗಡನೆಯು ಅನಿವಾರ್ಯವಾಗಿರುತ್ತದೆ. ಉದಾಹರಣೆಗೆ ಕೃಷಿ ಭೂಮಿ ಹೊಂದಿರುವ ಕುಟುಂಬಗಳು ವಿವಿಧ ಉದ್ದೇಶಗಳಾದ ಕುಟುಂಬದ ಸದಸ್ಯರ ಮದುವೆ, ಮನೆ ನಿರ್ಮಾಣಕ್ಕೆ ಹಣಕಾಸು, ವೈದ್ಯಕೀಯ ವೆಚ್ಚ, ಮತ್ತಿತರ ಅನಿವಾರ್ಯ ಕಾರಣಗಳಿಗಾಗಿ, ಅಗತ್ಯ ಕನಿಷ್ಠ ಜಾಗವನ್ನು ಮಾರಾಟ ಮಾಡುವ ಪ್ರಕ್ರಿಯೆಯು ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುತ್ತದೆ.
ನಗರ ವ್ಯಾಪ್ತಿಯೂ ಸೇರಿದಂತೆ ಗ್ರಾಮೀಣ ಭಾಗದ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಕುಟುಂಬಗಳು ನಿವೇಶನಕ್ಕಾಗಿ ಗ್ರಾಮ ಪಂಚಾಯತ್ಗೆ ಅರ್ಜಿ ಸಲ್ಲಿಸಿದ್ದು, ಸರಕಾರಿ ಜಾಗದ ಲಭ್ಯತೆಯಿಲ್ಲದೆ ಹಲವಾರು ವರ್ಷಗಳಿಂದ ಸ್ವಂತ ನಿವೇಶನದ ನಿರೀಕ್ಷೆಯಲ್ಲಿದ್ದಾರೆ. ಸದ್ರಿ ಆದೇಶದಿಂದ ಕಡಿಮೆ ದರದಲ್ಲಿ ಸಣ್ಣ ಜಾಗ ಖರೀದಿಸಿ ಮನೆ ನಿರ್ಮಿಸುವ ಉದ್ದೇಶ ಈಡೇರುವುದಿಲ್ಲ. ಸಣ್ಣ ನಿವೇಶನಗಳ ದರ ದುಪ್ಪಟ್ಟಾಗುವುದರೊಂದಿಗೆ ನಿರ್ಮಾಣ ಸಂಬಂಧಿತ ಕಟ್ಟಡ ಕಾರ್ಮಿಕರಿಗೆ, ಕಟ್ಟಡ ಸಾಮಾಗ್ರಿ ಪುರೈಕೆದಾರರಿಗೆ ತೊಂದರೆಯಾಗುವುದರೊಂದಿಗೆ ಪೂರಕ ವಾಣಿಜ್ಯ ಚಟುವಟಿಕೆಗಳಿಗೆ ತೀವ್ರ ಹೊಡೆತ ಬೀಳಲಿದೆ. ಆದುದರಿಂದ, ಉಡುಪಿ ಜಿಲ್ಲೆಗೆ ಮಾತ್ರ ಅನ್ವಯಿಸಿ ಆದೇಶಿಸಲಾಗಿರುವ ಸದ್ರಿ ನಿಯಮವನ್ನು ಹಿಂಪಡೆದು ಹಿಂದಿನಂತೆ 50 ಸೆಂಟ್ಸ್ ಮಿತಿಗೆ ಬದಲಾಗಿ 7.5 ಸೆಂಟ್ಸ್ ಮಿತಿಗೆ ಮರು ಆದೇಶ ಹೊರಡಿಸುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ.
ಉಡುಪಿ ತಾಲೂಕಿನಲ್ಲಿ ನೆರೆ ಸಂತ್ರಸ್ತರ ಪುನರ್ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ರಾಜೀವ ಗಾಂಧಿ ವಸತಿ ನಿಗಮದಿಂದ ಅನುದಾನ ಮಂಜೂರಾಗಿ ವರ್ಷಗಳೇ ಕಳೆದರು, ಈವರೆಗೆ ಮಂಜೂರಾದ ಸಂಪೂರ್ಣ ಅನುದಾನ ಬಿಡುಗಡೆಯಾಗಿರುವುದಿಲ್ಲ. ಇದರಿಂದ ಮನೆ ನಿರ್ಮಾಣ ಪೂರ್ಣಗೊಳಿಸಲಾಗದೆ ಅನಾನುಕೂಲವಾಗಿರುತ್ತದೆ. ಆದುದರಿಂದ, ಉಡುಪಿ ತಾಲೂಕಿನ ನೆರೆ ಸಂತ್ರಸ್ಥರ ಪುನರ್ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ರಾಜೀವ ಗಾಂಧಿ ವಸತಿ ನಿಗಮದಿಂದ ಮಂಜೂರಾಗಿರುವ ಅನುದಾನವನ್ನು ತುರ್ತಾಗಿ ಬಿಡುಗಡೆಗೊಳಿಸಲು ಕ್ರಮ ವಹಿಸ ಬೇಕು

ನಿರಂತರ ಮಳೆಯಿಂದಾಗಿ ಜಿಲ್ಲೆಯ ಹಲವು ಪ್ರದೇಶಗಳು ಜಲಾವೃತವಾಗಿದ್ದು, ರಕ್ಷಣಾ ಕಾರ್ಯ, ಪುನರ್ವಸತಿ ಕೆಲಸಗಳು ಚುರುಕಾಗಿ ನಡೆಯುತ್ತಿದೆ. ಸಮುದ್ರ ತೀರದಲ್ಲಿ ಕಡಲು ಕೊರೆತದ ಸಮಸ್ಯೆ ಹಲವೆಡೆ ಕಾಣಿಸಿಕೊಂಡಿದೆ. ಸುಂಟರಗಾಳಿ ಮತ್ತು ವಿಪರೀತ ಮಳೆಯಿಂದಾಗಿ ನೂರಾರು ಮರಗಳು ಬಿದ್ದು, ವಿದ್ಯುತ್ ಕಂಬಗಳಿಗೆ, ಮನೆಗಳಿಗೆ ಹಾನಿಯಾಗಿದ್ದು, ರಸ್ತೆ, ಮೋರಿ, ಶಾಲಾ ಕಟ್ಟಡಗಳು, ಕಾಲುಸಂಕಗಳು ಹಾಗೂ ಸೇತುವೆಗಳು ಅಪಾಯದಲ್ಲಿವೆ. ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆಯಾಗದೆ, ಗ್ರಾಮೀಣ ರಸ್ತೆಗಳ ನಿರ್ವಹಣೆಯಿಲ್ಲದೆ ಸಂಚಾರ ದುಸ್ತರವಾಗಿದೆ. ಆದುದರಿಂದ, ಸಂತ್ರಸ್ತರಿಗೆ ಪರಿಹಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಗೆ ಹಾಗೂ ದುರಸ್ತಿಗೆ ಸಾಕಷ್ಟು ಅನುದಾನದ ಅಗತ್ಯವಿದ್ದು, ಈ ಬಗ್ಗೆ ವಿಶೇಷ ಅನುದಾನವನ್ನು ಪ್ರಾಕೃತಿಕ ವಿಕೋಪದಡಿ ಉಡುಪಿ ಜಿಲ್ಲೆಗೆ ಸರಕಾರದಿಂದ ಮಂಜೂರು ಮಾಡುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments