ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಂಕಷ್ಟಕ್ಕೀಡಾಗಿರುವ ಮೀನುಗಾರರಿಗೆ ಗರಿಷ್ಟ ಪರಿಹಾರಕ್ಕೆ ಯಶ್‍ಪಾಲ್ ಸುವರ್ಣ ಮನವಿ  

Spread the love

ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಂಕಷ್ಟಕ್ಕೀಡಾಗಿರುವ ಮೀನುಗಾರರಿಗೆ ಗರಿಷ್ಟ ಪರಿಹಾರಕ್ಕೆ ಯಶ್‍ಪಾಲ್ ಸುವರ್ಣ ಮನವಿ  

ಉಡುಪಿ: ಕರಾವಳಿ ಕರ್ನಾಟಕದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡಿರುವ ಮೀನುಗಾರಿಕೆ ಇದೀಗ ಕೊರೋನ ಮಹಾಮಾರಿಯಿಂದ ಉಂಟಾಗಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡು ತೀರ ಸಂಕಷ್ಟಕ್ಕೀಡಾಗಿದ್ದು, ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಗರಿಷ್ಟ ಪರಿಹಾರವನ್ನು ನೀಡುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ   ಯಶ್‍ಪಾಲ್ ಸುವರ್ಣ ಮನವಿ ಮಾಡಿದ್ದಾರೆ.

ಮೀನುಗಾರಿಕಾ ಋತುವಿನ ಆರಂಭದಲ್ಲಿಯೇ ಜಿಎಸ್‍ಟಿ, ಹವಾಮಾನ ವೈಪರಿತ್ಯದ ಸಮಸ್ಯೆಯಿಂದ ಸುಮಾರು 2 ತಿಂಗಳು ಮೀನುಗಾರಿಕೆ ಹಿನ್ನಡೆ ಅನುಭವಿಸಿದ್ದು, ಆ ಬಳಿಕ ಮತ್ಸಕ್ಷಾಮದಿಂದಾಗಿಯೂ ನಷ್ಟ ಹೊಂದಿದ್ದು, ಇದೀಗ ಈ ಲಾಕ್‍ಡೌನ್‍ನಿಂದಾಗಿ ಮೀನುಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕರಾವಳಿಯ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 4350 ಟ್ರಾಲ್ ಬೋಟ್, 272 ಪರ್ಸಿನ್, 9652 ಮೋಟರೀಕೃತ ನಾಡದೋಣಿ ಹಾಗೂ 9254 ದೋಣಿಗಳ ಮೂಲಕ ಸುಮಾರು 1 ಲಕ್ಷ ಮಂದಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದು, ಕೊರೋನ ಪರಿಣಾಮದಿಂದ ಮಾರ್ಚ್ 20 ರಿಂದ ಮೀನುಗಾರಿಕೆ ಸ್ಥಗಿತಗೊಳಿಸಿದ್ದು ಇದೇ ಪರಿಸ್ಥಿತಿ ಮುಂದುವರಿದರೆ ಜೂನ್ ತಿಂಗಳಿನಿಂದ ಆಗಸ್ಟ್ ವರೆಗೆ ಮೀನುಗಾರಿಕೆ ನಿಷೇಧವಿದ್ದು ಒಟ್ಟಾರೆ ಕರಾವಳಿ ಜಿಲ್ಲೆಯಲ್ಲಿ ಸುಮಾರು 5 ತಿಂಗಳು ಮೀನುಗಾರಿಕೆ ಸಂಪೂರ್ಣ ಸ್ಥಬ್ದಗೊಳ್ಳಲಿದ್ದು ಸುಮಾರು 1000 ಕೋಟಿ ನಷ್ಟ ಅನುಭವಿಸಲಿದ್ದು ಮೀನುಗಾರಿಕೆಯನ್ನೇ ಅವಲಂಬಿಸಿರುವ ಮೀನುಗಾರರು ಆರ್ಥಿಕ ಸಂಕಷ್ಟದಿಂದ ಜೀವನ ನಿರ್ವಹಣೆಗೆ ಹೋರಾಟ ನಡೆಸುವ ಸನ್ನಿವೇಶ ನಿರ್ಮಾಣವಾಗಲಿದೆ.

ಮೀನುಗಾರಿಕೆಯನ್ನು ನೇರವಾಗಿ ಅವಲಂಬಿಸಿರುವ ಮೀನುಗಾರರ ಜೊತೆ ಜೊತೆಗೆ ಟೆಂಪೋ, ರಿಕ್ಷಾ ಚಾಲಕರು, ಲಾರಿ ಚಾಲಕರು, ಐಸ್‍ಪ್ಲಾಂಟ್, ಮೆಕ್ಯಾನಿಕ್, ಎಲೆಕ್ಟ್ರೀಶಿಯನ್, ಬಡಗಿಗಳು, ಫಿಶ್‍ಮಿಲ್, ಮೀನು ಸಂಸ್ಕರಣ ಘಟಕ, ಕಟ್ಟಿಂಗ್ ಶೆಡ್, ಮಹಿಳಾ ಮೀನುಗಾರರು ಸಹಿತ ಸುಮಾರು 80 ಸಾವಿರ ಕಾರ್ಮಿಕರು ಕೂಡ ಮೀನುಗಾರಿಕೆಯನ್ನೇ ಪರೋಕ್ಷವಾಗಿ ಅವಲಂಬಿಸಿದ್ದು ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಸರಕಾರ ಕೂಡಲೇ ಈ ಬಗ್ಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಮುಂದಿನ ಮೀನುಗಾರಿಕಾ ಋತುವಿನಲ್ಲಿ ಮೀನುಗಾರಿಕೆ ನಡೆಸಲು ತೀರ ಕಷ್ಟಸಾಧ್ಯವಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮೀನುಗಾರಿಕೆಯನ್ನೇ ನಂಬಿರುವ 1 ಲಕ್ಷ ಮಂದಿ ಮೀನುಗಾರರ ಹಾಗೂ ಪರೋಕ್ಷವಾಗಿ ಅವಲಂಬಿಸಿರುವ ಸಾವಿರಾರು ಕಾರ್ಮಿಕರು ಬೀದಿಪಾಲಾಗುವ ಭೀತಿ ನಿರ್ಮಾಣವಾಗಿದೆ.

ಈ ಎಲ್ಲಾ ಸಮಸ್ಯೆಗಳ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಸರಕಾರ ಮೀನುಗಾರರಿಗೆ ಗರಿಷ್ಟ ಪ್ರಮಾಣದ ಪರಿಹಾರವನ್ನು ಮಂಜೂರು ಮಾಡಿ ಆತಂಕಕ್ಕೀಡಾಗಿರುವ ಮೀನುಗಾರರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯಕ್ಕೆ ಮುಂದಾಗಬೇಕು ಹಾಗೂ ಭೂಮಿಯಲ್ಲಿ ಕೃಷಿ ಮಾಡುವ ರೈತರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ ರೈತರ ಜಮೀನಿನ ಪ್ರಮಾಣವನ್ನು ಮಾನದಂಡವಾಗಿ ಪರಿಗಣಿಸುವ ರೀತಿಯಲ್ಲಿಯೇ, ಸಮುದ್ರದಲ್ಲಿ ರೈತರಂತೆಯೇ ಮೀನುಗಾರಿಕೆ ನಡೆಸುವ ಮೀನುಗಾರರಿಗೂ ಲೈಲ್ಯಾಂಡ್, ಪರ್ಸೀನ್, ನಾಡ ದೋಣಿ, ಟ್ರಾಲ್ ಬೋಟ್‍ಗಳನ್ನು ಪರಿಗಣಿಸಿ ಪರಿಹಾರದ ಮೊತ್ತವನ್ನು ಪಾವತಿಸುವಂತೆ ಹಾಗೂ ಕೃಷಿಕರಿಗೆ ನೀಡುವ ಎಲ್ಲಾ ಪರಿಹಾರ ಯೋಜನೆಗಳನ್ನು ಮೀನುಗಾರಿಕೆಗೂ ವಿಸ್ತರಿಸಿ, ಮೀನುಗಾರಿಕಾ ಚಟುವಟಿಕೆಗೆ ಸಂಬಂಧಿಸಿದ ಮೀನುಗಾರರ ಎಲ್ಲಾ ಸಾಲಗಳಿಗೆ 5 ತಿಂಗಳ ಬಡ್ಡಿಯನ್ನು ಮನ್ನಾ ಮಾಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.


Spread the love