ಗಣೇಶೋತ್ಸವದಲ್ಲಿ ಭಾಗಿಯಾದ ತೊಟ್ಟಂ ಚರ್ಚಿನ ಧರ್ಮಗುರುಗಳು, ಕ್ರೈಸ್ತ ಭಾಂಧವರು
ಮಲ್ಪೆ: ಸಮನ್ವಯ ಸರ್ವ ಧರ್ಮ ಸಮಿತಿ ತೊಟ್ಟಂ, ಹಾಗೂ ತೊಟ್ಟಂ ಸಂತ ಅನ್ನಮ್ಮ ದೇವಾಲಯ ಇವರ ವತಿಯಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿ ತೊಟ್ಟಂ ಇವರ ನೇತೃತ್ವದಲ್ಲಿ ಆಯೋಜಿಸಲಾದ ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ಸೌಹಾರ್ಧ ಭೇಟಿ ನೀಡಲಾಯಿತು.
ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಹಾಗೂ ಸಮನ್ವಯ ಸರ್ವ ಧರ್ಮ ಸಮಿತಿ ಅಧ್ಯಕ್ಷರಾದ ರಮೇಶ್ ತಿಂಗಳಾಯ ನಿಯೋಗದ ನೇತೃತ್ವ ವಹಿಸಿದ್ದು ಪರಸ್ಪರ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ವಿನಿಮಯ ಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಧರ್ಮಗುರು ವಂ|ಡೆನಿಸ್ ಡೆಸಾ ತೊಟ್ಟಂ ಪರಿಸರ ಸರ್ವ ಧರ್ಮಗಳ ಸೌಹಾರ್ದತೆಯ ತಾಣವಾಗಿದ್ದು ಪ್ರತಿವರ್ಷ ಸಮಿತಿಯ ಸದಸ್ಯರೊಡಗೂಡಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪರಸ್ಪರ ಸಹೋದರರಂತೆ ಭಾಗಿಯಾಗಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಅಲ್ಲದೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರೂ ಕೂಡ ಚರ್ಚಿನ ವಿವಿಧ ಕಾರ್ಯಕ್ರಮಗಳಿಗೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತಾರೆ ಈ ಮೂಲಕ ಸೌಹಾರ್ದತೆ ಕೇವಲ ಬಾಯಿ ಮಾತಿಗೆ ಸೀಮಿತವಾಗಿರದೆ ತಮ್ಮ ಕೃತಿಯ ಮೂಲಕ ತೋರ್ಪಡಿಸಿರುತ್ತಾರೆ. ಚರ್ಚಿನ ವಾರ್ಷಿಕ ಮಹೋತ್ಸವ ಹಾಗೂ ತೆನೆ ಹಬ್ಬದ ಸಂದರ್ಭದಲ್ಲಿ ಸಮಿತಿಯ ವೇದಿಕೆಯಲ್ಲಿ ಚರ್ಚಿನ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡುವುದರ ಮೂಲಕ ತಮ್ಮ ಸಹಕಾರವನ್ನು ನೀಡಿಕೊಂಡು ಬಂದಿದ್ದು ಗಣಪತಿಯ ಆಶೀರ್ವಾದ ಇಡೀ ತೊಟ್ಟಂ ಪರಿಸರದ ಮೇಲೆ ಇರಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಲಿ ಎಂದರು.
ಈ ವೇಳೆ ತೊಟ್ಟಂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಸಂತ ಅನ್ನಮ್ಮ ಕಾನ್ವೆಂಟಿನ ಸಿಸ್ಟರ್ ಸುಷ್ಮಾ, ಸಿಸ್ಟರ್ ಶಾಲಿನಿ, ಸಿಸ್ಟರ್ ಲೂಸಿ, ಅಂತರ್ ಧರ್ಮೀಯ ಸಂವಾದ ಆಯೋಗದ ಸಂಚಾಲಕರಾದ ಆಗ್ನೆಲ್ ಫೆರ್ನಾಂಡಿಸ್, ಪದಾಧಿಕಾರಿಗಳಾದ ಓನಿಲ್ ಡಿಸೋಜಾ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಕೆ ಸಾಲಿಯಾನ್, ಕಾರ್ಯಾಧ್ಯಕ್ಷರಾದ ಯತಿರಾಜ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಯೋಗಿಶ್ ಕುಮಾರ್, ಕೋಶಾಧಿಕಾರಿ ರಮೇಶ್ ತೊಟ್ಟಂ, ಇತರ ಪದಾಧಿಕಾರಿಗಳಾದ ರಮೇಶ್ಮ ದಯೇಶ್ ಕಾಂಚನ್, ನವೀನ್ ಕುಂದರ್, ನವೀನ್ ಬೈಲಕೆರೆ, ಶ್ರೀಧರ ತೊಟ್ಟಂ, ಸಂತೋಷ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.