ಗೋಲಿಬಾರ್‌: 78 ಪೊಲೀಸರಿಗೆ ಗಾಯ – ಡಿಸಿಪಿ ಅರುಣಾಂಗ್ಷು ಗಿರಿ

Spread the love

ಗೋಲಿಬಾರ್‌: 78 ಪೊಲೀಸರಿಗೆ ಗಾಯ – ಡಿಸಿಪಿ ಅರುಣಾಂಗ್ಷು ಗಿರಿ

ಮಂಗಳೂರು: ನಗರದಲ್ಲಿ ಡಿಸೆಂಬರ್ 19ರಂದು ನಡೆದ ಗಲಭೆ ಮತ್ತು ಗೋಲಿಬಾರ್ ಸಂದರ್ಭದಲ್ಲಿ 78 ಪೊಲೀಸರು ಗಾಯಗೊಂಡಿದ್ದಾರೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಗ್ಷು ಗಿರಿ ಅವರು ಮ್ಯಾಜಿಸ್ಟೀರಿಯಲ್‌ ವಿಚಾರಣಾಧಿಕಾರಿ ಜಿ.ಜಗದೀಶ್‌ ಅವರ ಎದುರು ಹೇಳಿಕೆ ನೀಡಿದರು.

ನಗರದ ಹಂಪನಕಟ್ಟೆಯಲ್ಲಿರುವ ಮಿನಿ ವಿಧಾನಸೌಧದ ಉಪ‌ ವಿಭಾಗಾಧಿಕಾರಿ ನ್ಯಾಯಾಲಯದ ಸಭಾಂಗಣದಲ್ಲಿ ವಿಚಾರಣಾಧಿಕಾರಿ ಎದುರು ಹಾಜರಾದ ಐಪಿಎಸ್  ಅಧಿಕಾರಿ ಅರುಣಾಂಗ್ಷು ಗಿರಿ, ಲಿಖಿತ ಹೇಳಿಕೆ ಮತ್ತು 38 ದಾಖಲೆಗಳನ್ನು ಸಲ್ಲಿಸಿದರು. ವಿಚಾರಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿಕೆ ದಾಖಲಿಸಿಕೊಂಡರು.

‘ಡಿ.19ರಂದು ನಾನು ಪೊಲೀಸ್ ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದೆ. ಅನುಮತಿ ಇಲ್ಲದೆ ಪ್ರತಿಭಟನೆಗೆ ಯತ್ನಿಸಿದ ಜನರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದೆವು. ಪ್ರತಿಭಟನೆಗೆ ಸೇರಿದ್ದ ಜನರು ಗಲಭೆಗೆ ಇಳಿದರು. ಮಾರಕಾಸ್ತ್ರಗಳೊಂದಿಗೆ ಪೊಲೀಸರ ಮೇಲೆ ದಾಳಿ ನಡೆಸಿದರು. 78 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಯಗೊಂಡರು. ಪರಿಸ್ಥಿತಿ ನಿಯಂತ್ರಿಸಲು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು’ ಎಂದು ಡಿಸಿಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನೂ ಕೆಲವು ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡುವಂತೆ ಅರುಣಾಂಗ್ಷು ಗಿರಿ ವಿಚಾರಣಾಧಿಕಾರಿಯನ್ನು ಕೋರಿದರು. ದಾಖಲೆಗಳನ್ನು ಇನ್ನಷ್ಟೇ ಸಂಗ್ರಹಿಸಬೇಕಿರುವುದರಿಂದ ಕೆಲವು ದಿನಗಳ ನಂತರ ದಿನಾಂಕ ಪಡೆದುಕೊಳ್ಳುವುದಾಗಿಯೂ ವಿಚಾರಣಾಧಿಕಾರಿಗೆ ತಿಳಿಸಿದರು.

ಜಿಲ್ಲಾ ಖಾಝಿ ಹೇಳಿಕೆ ದಾಖಲು: ವಿಚಾರಣಾಧಿಕಾರಿ ಎದುರು ಹಾಜರಾದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ಅವರು ಘಟನೆಗೆ ಸಂಬಂಧಿಸಿದಂತೆ ಲಿಖಿತ ಹೇಳಿಕೆ ಸಲ್ಲಿಸಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ ಕೆಎಸ್ಎಸ್ಎಫ್) ವತಿಯಿಂದ ‌ಪ್ರತಿಭಟನೆ ಆಯೋಜಿಸಲಾಗಿತ್ತು. ಆದರೆ, ಪೊಲೀಸರು ಅನುಮತಿ‌ ನಿರಾಕರಿಸಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿತ್ತು. ಈ ಸಂಬಂಧ ಸಾರ್ವಜನಿಕರಿಗೆ ಮಾಹಿತಿಯನ್ನೂ ನೀಡಲಾಗಿತ್ತು. ಡಿ.19ರ ಗಲಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ’ ಎಂಬುದಾಗಿ ಖಾಝಿ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ಗಲಭೆಯ ಬಳಿಕ ಕೆಲವರು ನನ್ನನ್ನು ದ್ವೇಷಿಸುತ್ತಿದ್ದಾರೆ. ನನ್ನ ಕೊಲೆಗೂ ಯತ್ನಗಳು ನಡೆದಿವೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ’ ಎಂದು ವಿಚಾರಣಾಧಿಕಾರಿ ಎದುರು ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಚಾರಣಾ ಕಲಾಪ ಮುಗಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಜಿ. ಜಗದೀಶ್, ‘30 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಚಾರಣೆಗೆ ಹಾಜರಾಗಿದ್ದರು. ಮಾರ್ಚ್ 12ರಂದು ಮತ್ತೆ ವಿಚಾರಣೆ ನಡೆಯಲಿದೆ‌. ಆ ದಿನ ಪೊಲೀಸ್ ಕಮಿಷನರ್ ಸೇರಿದಂತೆ ಹಲವರು ವಿಚಾರಣೆಗೆ ಹಾಜರಾಗಲಿದ್ದಾರೆ’ ಎಂದರು.


Spread the love