ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಬಂಧನ: ಉಡುಪಿ ಧರ್ಮಪ್ರಾಂತ್ಯ ಖಂಡನೆ
ಉಡುಪಿ: ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರನ್ನು ಸುಳ್ಳು ಆರೋಪದ ಮೇಲೆ ಬಂಧಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
2025ರ ಜುಲೈ 25ರಂದು ಛತ್ತೀಸ್ಗಢದ ದುರ್ಗ್ ರೈಲು ನಿಲ್ದಾಣದಲ್ಲಿ ಇಬ್ಬರು ಕಥೊಲಿಕ ಕ್ರೈಸ್ತ ಧರ್ಮ ಭಗಿನಿಯರನ್ನು ಬಂಧಿಸಿರುವುದಲ್ಲದೆ ಕೆಲವೊಂದು ಬಲಪಂಥೀಯ ಸಂಘಟನೆಗಳಿಂದ ದೈಹಿಕ ಹಿಂಸೆ ನಡೆಸಿರುವ ಘಟನೆ ಅತೀವ ನೋವನ್ನುಂಟುಮಾಡಿದೆ.
ಈ ಇಬ್ಬರು ಧರ್ಮಭಗನಿಯರು ಮೂವರು ಯುವತಿಯರೊಂದಿಗೆ ಪ್ರಯಾಣಿಸುತ್ತಿದ್ದು, ಯುವತಿಯರು ಕಾನೂನು ಬದ್ಧವಾಗಿ ವಯಸ್ಸಿಗೆ ಬಂದವರಾಗಿದ್ದು ಹೆತ್ತವರಿಂದ ಸೂಕ್ತ ಅನುಮತಿಯನ್ನು ಹೊಂದಿ ತೆರಳುತ್ತಿದ್ದರೂ ಕೂಡ ಕೆಲವೊಂದು ವ್ಯಕ್ತಿಗಳ ಕುಮ್ಮಕ್ಕಿನಿಂದ ಕಾನೂನು ಮೀರಿ ಬಂಧಿಸಲಾಗಿದೆ. ಪೊಲೀಸರು ಆ ಯುವತಿಯರ ಪೋಷಕರಿಗೆ ತಮ್ಮ ಮಕ್ಕಳನ್ನು ಭೇಟಿಯಾಲು ಕೂಡ ಅವಕಾಶ ನೀಡದಿರುವುದು ಮಾನವೀಯತೆ ಹಾಗೂ ನ್ಯಾಯದಾನದ ಮೇಲೆ ನಡೆಸಿದ ಧಾಳಿಯಾಗಿದೆ.
ಮೂಲ ಎಫ್ಐಆರ್ನಲ್ಲಿ ಒಳಗೊಂಡಿರದ ‘ಛತ್ತೀಸ್ಗಢ ಧರ್ಮ ಸ್ವಾತಂತ್ರ್ಯ ಕಾಯ್ದೆ, 1968’ರ ಸೆಕ್ಷನ್ 4ನ್ನು ಇಬ್ಬರು ಧರ್ಮ ಭಗಿನಿಯರ ಮೇಲೆ ಹೇರಿರುವುದು ಕಳವಳಕಾರಿ ಸಂಗತಿಯಾಗಿದೆ. ಇದು ಕಾನೂನು ಪ್ರಕ್ರಿಯೆಯ ದುರ್ವಿಯೋಗ ನಡೆಸಿರುವುದು ಸ್ಪಷ್ಟವಾಗಿದೆ. ಸಾಮೂಹಿಕ ಒತ್ತಡಕ್ಕೆ ಒಳಗಾಗಿ ನ್ಯಾಯಪಾಲಕರಾಗಬೇಕಾದ ಅಧಿಕಾರಿಗಳು ತಮ್ಮ ಧರ್ಮೋಚಿತ ಮತ್ತು ಸಂವಿಧಾನಬದ್ಧ ಕರ್ತವ್ಯವನ್ನು ಕೈಬಿಟ್ಟಿರುವುದು ಅತೀ ದುಃಖದ ಸಂಗತಿಯಾಗಿದೆ.
ದಶಕಗಳ ಹಿಂದೆಂದಿನಿಂದ ದೇಶದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವೇ ಅರ್ಪಿಸಿಕೊಂಡಿರುವ ಧರ್ಮಭಗಿನಿಯರು ಮಾನ್ಯತೆ ಮತ್ತು ರಕ್ಷಣೆಗೆ ಅರ್ಹರಾಗಿದ್ದಾರೆ ಹೊರತು ಅವಮಾನ ಮತ್ತು ಹಿಂಸೆಗಲ್ಲ.
ಬೇಟಿ ಬಚಾವೊ, ಬೇಟಿ ಪಡಾವೊ ಎಂಬ ಘೋಷವಾಕ್ಯವನ್ನು ಜಪಿಸುವ ಈ ದೇಶದಲ್ಲಿ, ಮಹಿಳೆಯರು – ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದಿಂದ ದಿನದಿಂದ ದಿನಕ್ಕೆ ಅಧಿಕ ಅಪಾಯದ ಚೌಕಟ್ಟಿಗೆ ಒಳಗಾಗುತ್ತಿರುವುದು ಆ ಘೋಷವಾಕ್ಯದ ತಾತ್ಪರ್ಯವನ್ನೇ ಅವಮಾನಿಸುವಂತಿದೆ. ಹಿಂಸೆ, ಮತ್ತು ನ್ಯಾಯದ ಮೇಲೆ ಮೌನ ಇಂತಹ ಸಮಯಗಳಲ್ಲಿ ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತೀವ್ರವಾಗಿ ಹದಗೆಡಿಸುತ್ತವೆ.
ಈ ಗಂಭೀರ ಅನ್ಯಾಯವನ್ನು ಗಮನದಲ್ಲಿ ಇಟ್ಟುಕೊಂಡು, ಗೌರವಾನ್ವಿತ ಭಾರತದ ಪ್ರಧಾನ ಮಂತ್ರಿಯವರಿಗೆ, ಛತ್ತೀಸ್ಗಢದ ಮುಖ್ಯಮಂತ್ರಿ ಮತ್ತು ಇತರ ಸಂಬಂಧಿತ ಅಧಿಕಾರಿಗಳಿಗೆ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದ್ದಾರೆ.
ಬಂಧನದಲ್ಲಿರುವ ಧರ್ಮಭಗಿನಿಯರು ಹಾಗೂ ಮೂವರು ಯುವತಿಯರನ್ನು ತಕ್ಷಣ ಮತ್ತು ಬಿಡುಗಡೆ ಮಾಡಬೇಕು; ಸುಳ್ಳು ಮತ್ತು ದ್ವೇಷಪೂರಿತ ದೂರು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಪೊಲೀಸರ ವೈಫಲ್ಯಕ್ಕೆ ಸಂಬಂಧಿಸಿದಂತೆ ಸೂಕ್ತ ನೈತಿಕ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು.
ಸತ್ಯವು ಸುಳ್ಳಿನ ಮೇಲೆ ಜಯ ಸಾಧಿಸಲಿ, ಮತ್ತು ನಮ್ಮ ರಾಷ್ಟ್ರವು ಧರ್ಮಸ್ವಾತಂತ್ರ್ಯ, ಮಾನವ ಮೌಲ್ಯಗಳು ಮತ್ತು ಸಾಮುದಾಯಿಕ ಸಹಜೀವನ ಎಂಬ ಮೌಲ್ಯಗಳನ್ನು ಕೇವಲ ಕಾಯ್ದುಕೊಳ್ಳುವುದಲ್ಲ, ಗೌರವಿಸುವ ದೇಶವಾಗಿರಲಿ ಎಂದು ಧರ್ಮಾಧ್ಯಕ್ಷರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Is this report complete?