ದಕ ಜಿಲ್ಲೆಯಲ್ಲಿ ಕೋಮು ಸಂಘರ್ಷ ತಡೆಯಲು ಕಠಿಣ ಕ್ರಮಕ್ಕೆ ಸಿಎಂ ಗೆ ಮಂಜುನಾಥ್ ಭಂಡಾರಿ ಆಗ್ರಹ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷದಂತಹ ಪ್ರಕರಣಗಳು ಮುಂದುವರಿದಿದ್ದು ಕೇವಲ ಕೆಲವು ತಿಂಗಳುಗಳ ಅಂತರದಲ್ಲಿ ಕೊಲೆ, ಮತ್ತು ಚೂರಿ ಇರಿತ ಪ್ರಕರಣಗಳು ನಡೆದಿದ್ದು, ಕೆಲವೇ ಕೆಲವು ಸಮಾಜಘಾತುಕ ಶಕ್ತಿಗಳಿಂದ ಕೋಮು .’ ಸಂಘರ್ಷ ಘಟನೆಗಳು ಹಾಗೂ ಪ್ರಚೋದನಕಾರಿ ಹೇಳಿಕೆಗಳು ನಡೆಯುತ್ತಿದ್ದು, ಜಿಲ್ಲೆಯ ಜನರ ಶಾಂತಿ ಕದಡುತ್ತಿದೆ. ಇಂತಹ ಘಟನೆಗಳು ಇಡೀ ಕರಾವಳಿ ಜಿಲ್ಲೆಗಳಿಗೆ ಕಪ್ಪು ಚುಕ್ಕೆಯಾಗಿದೆ ಮಾತ್ರವಲ್ಲದೆ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಇದನ್ನು ನಿಯಂತ್ರಣಕ್ಕೆ ತಾರದಿದ್ದಲ್ಲಿ ಮುಂದೊಂದು ದಿನ ಕೋಮುವಾದಿಗಳ ಈ ಮಾನಸಿಕತೆ ರಾಜ್ಯದ ಉಳಿದ ಜಿಲ್ಲೆಗೆ ಪಸರಿಸಿದರೂ ಅಚ್ಚರಿಯಿಲ್ಲ. ಇಂತಹ ಘಟನೆಗಳ ಹಿಂದೆ ಮತಾಂಧರ ಧರ್ಮದ ಅಮಲು ಒಂದು ಕಾರಣವಾದರೆ, ರಾಜಕೀಯ ಹುನ್ನಾರವೂ ಇದೆ ಎಂಬುವುದು ಆದಷ್ಟೋ ಬಾರಿ ಜಗಜ್ಜಾಹೀರಾಗಿದೆ. ಈ ಕಾರಣದಿಂದ ರಾಜ್ಯ ಸರಕಾರ ಕೂಡಲೇ ಗಂಭೀರವಾಗಿ ಪರಿಗಣಿಸಿ ಕಾನೂನು ಚೌಕಟ್ಟಿನಲ್ಲೇ ಕಠಿಣ ಕ್ರಮಕೈಗೊಳ್ಳಬೇಕು. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಸ್ವತಂತ್ರ, ನಿಷ್ಪಕ್ಷಪಾತವಾಗಿ ಕ್ರಮಕೈಗೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಮಂಜುನಾಥ ಭಂಡಾರಿ ನೀಡಿರುವ ಪ್ರಮುಖ ಸಲಹೆಗಳು
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ತಿಂಗಳ ಇತ್ತೀಚೆಗೆ ನಡೆದ ಮೂರು ಕೊಲೆ, ಚೂರಿ ಇರಿತ ಘಟನೆಗಳ ತನಿಖೆಗೆ ಎ.ಡಿ.ಜಿ.ಪಿ ಮಾರ್ಗದರ್ಶನದಲ್ಲಿ ಪ್ರತ್ಯೇಕ ಎಸ್.ಐ.ಟಿ ತಂಡ ರಚಿಸಬೇಕು. ವಿಶೇಷ ಅಭಿಯೋಜಕರ ನೇಮಕ ಮಾಡುವುದು
- ಕೋಮುವಾದಿ ಶಕ್ತಿಗಳ ವಿರುದ್ಧ ಈಗಾಗಲೇ ನಾನಾ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣವಿದ್ದು, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
- ಪ್ರಚೋದನಕಾರಿ ಭಾಷಣ ಮಾಡುವ ನಾಯಕರ ವಿರುದ್ಧ ಈಗಾಗಲೇ ಕಠಿಣ ಕ್ರಮದ ಭರವಸೆಯನ್ನು ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದರು. ಇದನ್ನು ಕಾರ್ಯಗತಗೊಳಿಸಿ ಕಾನೂನು ರೀತಿಯಲ್ಲಿ ಕಠಿಣ ಕ್ರಮಕೈಗೊಳ್ಳಬೇಕು
- ಪದೇ ಪದೇ ದುಷ್ಕೃತ್ಯದಲ್ಲಿ ಅಮಾಯಕರು ಕೂಡ ಬಲಿಯಾಗುತ್ತಿದ್ದು, ಇದರಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಪೊಲೀಸರು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು. ಇಂತಹ ಪ್ರಕರಣಗಳಲ್ಲಿ ಬಲಿಯಾದವರ ಕುಟುಂಬಸ್ಥರ ಹಿನ್ನಲೆ ಪರಿಶೀಲಿಸಿ ಅಮಾಯಕರಾಗಿದ್ದಲ್ಲಿ ಸರ್ಕಾರದಿಂದ ಸೂಕ್ತ ಆರ್ಥಿಕ ಪರಿಹಾರ ನೀಡುವುದು.
- ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಸಂದೇಶ, ಎಚ್ಚರಿಕೆ, ಬೆದರಿಕೆಗಳು ಹರಿದಾಡುತ್ತಿದ್ದು ಇಂತಹ ಮಾನಸಿಕತೆಯಿರುವ ವ್ಯಕ್ತಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಆದರೆ ಯಾರೊಬ್ಬರನ್ನು ಬಂಧಿಸಲಾಗಿಲ್ಲ. ಕೂಡಲೇ ಇವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
- ಕಮಿಷನರೇಟ್ ವ್ಯಾಪ್ತಿ ಮತ್ತು ಜಿಲ್ಲಾ ಎಸ್ಪಿ ವ್ಯಾಪ್ತಿಯ ರೌಡಿಶೀಟರ್ ಗಳ ಮೇಲೆ ಪೊಲೀಸರು ವಿಶೇಷ ನಿಗಾಯಿರಿಸಬೇಕು. ತಿಂಗಳಿಗೆ ಒಂದು ಬಾರಿ ರೌಡಿಶೀಟರ್ ಪರೇಡ್ ಮಾಡಿಸಬೇಕು.
- ಕ್ರಿಮಿನಲ್ ಹಿನ್ನಲೆ ಇರುವ ಕೆಲವರಿಗೆ ಗನ್ ಪರವಾನಗಿ ನೀಡಲಾಗಿದ್ದು ಅದನ್ನು ಪುನರ್ ಪರಿಶೀಲನೆ ನಡೆಸಬೇಕು. ಕ್ರಿಮಿನಲ್ ಹಿನ್ನಲೆ ಇರುವ ಹಲವರು ಅಕ್ರಮವಾಗಿ ಗನ್ ಹೊಂದಿದ್ದು, ಗೂಢಚಾರಿಕೆ ಮೂಲಕ ಇದನ್ನು ಪತ್ತೆಹಚ್ಚಬೇಕು.
- ಕರಾವಳಿಯಲ್ಲಿ ಇಂಟೆಲಿಜೆನ್ಸ್ ಮತ್ತಷ್ಟು ಬಲಪಡಿಸಬೇಕು.
- ಡ್ರಗ್ ಸೇರಿದಂತೆ ಮಾದಕ ವ್ಯವಹಾರವನ್ನು ಮಟ್ಟಹಾಕಲು ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಬೇಕು.
- ಕರಾವಳಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ದೊಡ್ಡ ದಂಧೆಯಾಗಿದೆ. ಈ ದುಷ್ಕೃತ್ಯದಲ್ಲಿ ಭಾಗಿಯಸಗುವ ಬಹುತೇಕ ಮಂದಿ ಅಕ್ರಮ ದಂಧೆಯ ಹಿಂದೆ ಇರುವವರು, ಅಕ್ರಮ ಚಟುವಟಿಕೆಗಳಿಂದ ಆರ್ಥಿಕ ಸಂಪತ್ತು ಗಳಿಸುತಿದ್ದು ಅದೇ ಹಣದಿಂದ ಸಮಾಜಘಾತುಕ ಕೆಲಸಗಳಿಗೆ ಬಳಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳನ್ನು ನಿಷೇದಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು.
- ಕೋಮುವಾದಿ ಸಂಘಟನೆಗಳ ಮುಖಂಡರ ಮೇಲೆ ಅವರ ಪ್ರತಿ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ಸದಾ ಕಣ್ಣಾವಲಿರಿಸಬೇಕು.
- ಸರ್ಕಾರದಿಂದ ಅನುಮತಿ ನೀಡದಿದ್ದರು ಸಭೆಗಳು ಮತ್ತು ಮೆರವಣಿಗೆಗಳು ನಡೆಸುವವರ ಹಾಗೂ ನಂತರ ನಡೆಯುವ ಯಾವುದೇ ಅಹಿತಕರ ಘಟನೆಗಗೆ ಆಯೋಜಕರನ್ನೇ ಹೊಣೆಗಾರಿಕೆ ಮಾಡಿ ಅವರವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
- ದಕ್ಷಿಣ ಕನ್ನಡ ಜಿಲ್ಲೆಗೆ ಕೊಡುಗೆ ನೀಡಿದ ಪ್ರತಿಷ್ಠಿತ ಉದ್ಯಮಿಗಳನ್ನೆಲ್ಲ ಒಟ್ಟು ಸೇರಿಸಿ ಮಾನ್ಯ ಗೃಹಸಚಿವರು ಅಥವಾ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇನ್ ಕ್ಯಾಮೆರಾ ಗಂಭೀರ ಚರ್ಚೆ ನಡೆಸಿ, ಕೋಮು ಸಂಘರ್ಷ ನಿಯಂತ್ರಿಸುವ ನಿಟ್ಟಿನಲ್ಲಿ ಸಲಹೆಗಳನ್ನು ಪಡೆದುಕೊಳ್ಳಬೇಕು.
- ಜಿಲ್ಲಾ ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯಲ್ಲಿ ಸಮಗ್ರ ಬದಲಾವಣೆಯನ್ನು ತಂದು ಜಿಲ್ಲೆಯ ಜನತೆಯಲ್ಲಿ ವಿಶ್ವಾಸ ಮೂಡಿಸಬೇಕಾಗಿದೆ
- ಉದ್ದೇಶ ಪೂರ್ವಕವಾಗಿ ಪೊಲೀಸ್ ಇಲಾಖೆಯ ವೈಫಲ್ಯ ಕಂಡಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ತಾರತಮ್ಯ ನೀತಿ ಮರುಕಳಿಸದಂತೆ ನಿಗಾವಹಿಸುವುದು
- ಸುಳ್ಳು ಸುದ್ದಿ ಹರಡುವ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಮತ್ತು ಸುಳ್ಳು ಸುದ್ದಿ ಸಂದೇಶಗಳಿಗೆ ಕಡಿವಾಣ ಹಾಕಲು ವಿಶೇಷ ಕಾನೂನನ್ನು ಜಾರಿಗೊಳಿಸುವುದು
- ಕನಿಷ್ಠ ಮೂರು ತಿಂಗಳಿಗೊಮ್ಮೆ ಜಿಲ್ಲಾಮಟ್ಟದಲ್ಲಿ ಶಾಂತಿ ಸಭೆಗಳನ್ನು ನಡೆಸುತ್ತಿರಬೇಕು.
ಈ ರೀತಿಯ ಕಠಿಣ ಕ್ರಮಗಳು ಖಂಡಿತಾ ಜಿಲ್ಲೆಯಲ್ಲಿ ಸಂಚಲನ ಮೂಡಿಸಲು ಸಾಧ್ಯ ಮಾತ್ರವಲ್ಲದೆ ದುಷ್ಕೃತ್ಯ ತಡೆಯಲು ಸಾಧ್ಯವಾಗಲಿದೆ. ಮಾನ್ಯ ಮುಖ್ಯಮಂತ್ರಿಗಳು ಖಂಡಿತಾ ಇದನ್ನು ಪರಿಶೀಲಿಸಿ ಕಠಿಣ ಕ್ರಮಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.