ನನ್ನ ಶಾಸಕತ್ವ ಅವಧಿಯಲ್ಲಿ ಆರಂಭಿಸಿ ಕಾಲೇಜನ್ನು ತನ್ನ ಸಾಧನೆ ಪುಸ್ತಕದಲ್ಲಿ ಸೇರಿಸಿದ ಶೋಭಾ – ಪ್ರಮೋದ್

Spread the love

ನನ್ನ ಶಾಸಕತ್ವ ಅವಧಿಯಲ್ಲಿ ಆರಂಭಿಸಿ ಕಾಲೇಜನ್ನು ತನ್ನ ಸಾಧನೆ ಪುಸ್ತಕದಲ್ಲಿ ಸೇರಿಸಿದ ಶೋಭಾ – ಪ್ರಮೋದ್

ಚಿಕ್ಕಮಗಳೂರು: ನನ್ನ ಶಾಸಕತ್ವದ ಅವಧಿಯಲ್ಲಿ ಆರಂಭವಾದ ಕಾಲೇಜನ್ನು ಶೋಭಾ ಕರಂದ್ಲಾಜೆಯವರು ತಮ್ಮ ಸಾಧನೆ ಎಂದು ಸಾಧನೆಯ ಪುಸ್ತಕದಲ್ಲಿ ಸೇರಿಸಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆರೋಪಿಸಿದರು.

ಅವರು ಶುಕ್ರವಾರ ಪಟ್ಟಣದ ಅತಿಶಯ ಕ್ಷೇತ್ರವಾದ ಸಿಂಹನಗದ್ದೆ ಬಸ್ತಿಮಠಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಅಭಿನವ ಲಕ್ಷಿ ಭೀಮಸೇನ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ತಾವು ಗೆದ್ದರೆ ಚಿಕ್ಕಮಗಳೂರಿನಲ್ಲಿ ಒಂದು ಮನೆ ಮಾಡಿ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತೇನೆ ಎಂದು ಮೈತ್ರಿ ಪಕ್ಷ ದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತಿಳಿಸಿದರು. ಅವರು ಬಸ್ತಿಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 15 ಲಕ್ಷ ಮತದಾರರಿದ್ದು ಇವರಲ್ಲಿ ಮಹಿಳಾ ಮತದಾರರೇ ಜಾಸ್ತಿ ಇದ್ದಾರೆ. ಈಗಾಗಲೇ ಎಲ್ಲ ವಿಧಾನಸಭೆ ಕ್ಷೇತ್ರಕ್ಕೂ ಭೇಟಿ ನೀಡಿದ್ದೇನೆ. ಜನರು ಬದಲಾವಣೆ ಬಯಸಿದ್ದಾರೆ. ಕೆಲಸ ಮಾಡುವ ಲೋಕಸಭೆ ಸದಸ್ಯರು ಬೇಕು ಎಂದು ಜನರು ಹೇಳುತ್ತಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಜನರ ಸಮಸ್ಯೆಗಳ ಬಗ್ಗೆ ಗಮನ ನೀಡುವುದಕ್ಕಿಂತ ಬಿಜೆಪಿ ಕೆಲಸವನ್ನೇ ಜಾಸ್ತಿ ಮಾಡಿದ್ದಾರೆ ಎಂದು ಮತದಾರರೇ ಆರೋಪಿಸುತ್ತಿದ್ದಾರೆ. ಆದರೆ, ಅವರು ತಮ್ಮ ಸಾಧನೆಯ ಕೈಪಿಡಿಯಲ್ಲಿ ಹಲವು ಸುಳ್ಳುಗಳನ್ನು ಹೇಳಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದಲ್ಲಿ ಒಂದು ಕಾಲೇಜು ಪ್ರಾರಂಭವಾಗಿದ್ದು ಆ ಕಾಲೇಜಿಗೆ ಈ ಹಿಂದೆ ನಾನು ಹಾಗೂ ಜಯಪ್ರಕಾಶ್ ಹೆಗ್ಡೆ ಅನುದಾನ ತಂದಿದ್ದೆವು. ಅದನ್ನು ಸಹ ಶೋಭಾ ಕರಂದ್ಲಾಜೆ ತಮ್ಮ ಸಾಧನೆಯಲ್ಲಿ ಸೇರಿಸಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಶ್ರೀ ಲಕ್ಷಿ ್ಮೕಸೇನ ಭಟ್ಟಾರಕ ಸ್ವಾಮೀಜಿ ಪ್ರಮೋದ್ ಅವರಿಗೆ ಆಶೀರ್ವದಿಸಿ, ನಿಮ್ಮ ಸಂಕಲ್ಪ ಸಿದ್ಧಿಯಾಗಲಿ, ಜ್ವಾಲಾಮಾಲಿನಿ ದೇವಿಯು ನಿಮಗೆ ಮತ್ತಷ್ಟು ಜನಸೇವೆ ಮಾಡುವ ಅವಕಾಶವನ್ನು ಕಲ್ಪಿಸುತ್ತಾಳೆ. ದೇವಿಯ ಆಶೀರ್ವಾದದಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದರು.

ವರ್ಷದ ಹಿಂದೆ ಶಾಸಕ ಟಿ.ಡಿ.ರಾಜೇಗೌಡರು ಕುಟುಂಬ ಸಮೇತ ಸಿಂಹನಗದ್ದೆ ಬಸ್ತಿಮಠಕ್ಕೆ ಆಗಮಿಸಿ ಸಂಕಲ್ಪ ಮಾಡಿ ಶ್ರೀ ದೇವಿಯ ಆಶೀರ್ವಾದ ಪಡೆದಿದ್ದರು. ಅವರು ಶಾಸಕರಾಗಿ ಗೆದ್ದ ನಂತರ ಬಸ್ತಿಮಠಕ್ಕೆ 50 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿಸಿ ರಸ್ತೆ ಮಾಡಿಸಿಕೊಟ್ಟಿದ್ದಾರೆ. 1978ರ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಬಸ್ತಿಮಠಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಬಸ್ತಿಮಠಕ್ಕೆ ಆಗಮಿಸಿದ್ದ ಶ್ರೀ ವಿದ್ಯಾನಂದ ಮುನಿಗಳಿಂದ ಆಶೀರ್ವಾದ ಪಡೆದಿದ್ದರು. ಮುನಿಗಳ ಆಶೀರ್ವಾದದ ನಂತರವೇ ಇಂದಿರಾ ಗಾಂಧಿ ಅವರು ಹಸ್ತದ ಚಿಹ್ನೆ ಪಡೆದಿದ್ದರು ಎಂದು ಸ್ಮರಿಸಿದರು.

ನಂತರ ಶ್ರೀಗಳು ಪ್ರಮೋದ್ ಮಧ್ವರಾಜ್ ಅವರಿಗೆ ಫಲ ನೀಡಿ, ಶಾಲು ಹೊದಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಸದಾಶಿವ, ಕಾಂಗ್ರೆಸ್ ಮುಖಂಡರಾದ ಬಿ.ವಿ.ಉಪೇಂದ್ರ, ಕೆ.ಎಂ.ಸುಂದರೇಶ್, ಎಚ್.ಬಿ.ರಘುವೀರ್, ಕೆ.ಎ.ಅಬೂಬಕರ್, ಜಾನ್ಸನ್ ಇದ್ದರು.


Spread the love