ನಮ್ಮ ಪಕ್ಷ ಸುಭದ್ರವಾಗಿದೆ, ಆಂತರಿಕ ಸಮಸ್ಯೆ ನಮ್ಮಲ್ಲೇ ಬಗೆಹರಿಸುತ್ತೇವೆ: ದಿನೇಶ್ ಗುಂಡೂರಾವ್
ಮಂಗಳೂರು: ಮೂರು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗುತ್ತೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅದು ತಿರುಕನ ಕನಸು, ಜನ ಅವರನ್ನು ಮನೆಗೆ ಕಳುಹಿಸಿದ್ದಾರೆ. ನಮ್ಮ ಪಕ್ಷ ಸುಭದ್ರವಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅವರ ಪಕ್ಷದಲ್ಲಿ ಏನು ಸರಿ ಇದೆ? ನಮ್ಮ ಬಟ್ಟಲಲ್ಲಿ ಸೊಳ್ಳೆ ಇದ್ರೆ ಅವರ ಬಟ್ಟಲಲ್ಲಿ ಹೆಗ್ಗಣ ಇದೆ. ಅವರನ್ನು ಅವರು ಉಳಿಸುವುದನ್ನು ನೋಡಿಕೊಳ್ಳಲಿ ಎಂದರು.
ಸುರ್ಜೆವಾಲ ಅವರು ರಾಜ್ಯದ ಎಲ್ಲಾ ಶಾಸಕರನ್ನು ಭೇಟಿಯಾಗಲಿದ್ದಾರೆ. ಅವರಲ್ಲಿರುವ ಅಭಿಪ್ರಾಯಗಳನ್ನು ಸಂಗ್ರಹಿಸಿ ನಂತರ ಮುಂದಿನ ಕ್ರಮ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ರಾಜಕೀಯದಲ್ಲಿ ಅತ್ಯಂತ ದೊಡ್ಡ ಪಕ್ಷ ಹಲವರ ಅಭಿಪ್ರಾಯಗಳು ಬೇರೆ ಬೇರೆಯಾಗಿರುತ್ತವೆ. ನಾನು ಅವರನ್ನು ಭೇಟಿಯಾಗುತ್ತೇನೆ, ನಮ್ಮ ಆಂತರಿಕ ಸಮಸ್ಯೆ ನಮ್ಮಲ್ಲೇ ಬಗೆಹರಿಸುತ್ತೇವೆ ಎಂದು ಹೇಳಿದರು.
ಮನೆಯ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ಆಗಿದ್ದರೆ ಅ ಬಗ್ಗೆ ಮಾಹಿತಿ ಕೊಡಲಿ. ಬಿ ಆರ್ ಪಾಟೀಲ್ ಅವರು ಹೇಳಿಕೆ ಕೊಟ್ಟಿದ್ದಾರೆ, ಸಿ ಎಂ ಅವರಲ್ಲೂ ಮಾತನಾಡಿದ್ದಾರೆ. ಇಡೀ ದೇಶದಲ್ಲಿಯೇ ಭ್ರಷ್ಟಾಚಾರ ಇದೆ. ಭ್ರಷ್ಟಾಚಾರ ಇಲ್ಲಾ ಅಂತ ಹೇಳಕ್ಕಾಗಲ್ಲ. ಇದನ್ನು ನಾವು ನಿರ್ಮೂಲನೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪು ಕಲ್ಲು ಕೊರತೆ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, ಅಕ್ರಮವಾಗಿ ನಡೆಯುತ್ತಿರುವ ಕೆಂಪು ಕಲ್ಲು ಹಾಗೂ ಮರಳು ಸಾಗಾಟ ಕಾನೂನು ಉಲ್ಲಂಘಿಸಿ ಮಾಡಲು ಸಾಧ್ಯವಿಲ್ಲ. ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯನ್ನು ಮಾಡುತ್ತೇವೆ. ಇಷ್ಟು ದಿನ ಯಾವ ರೀತಿಯಲ್ಲಿ ಇದನ್ನ ಮಾಡುತ್ತಿದ್ದರು? ಈ ಬಗ್ಗೆ ಹಿರಿಯ ಅಧಿಕಾರಿಗಳ ಬಗ್ಗೆ ಚರ್ಚಿಸಿ ಸಡಿಲ ಮಾಡುವ ಕ್ರಮವನ್ನು ಕೈಗೊಳ್ಳುವ ನಿರ್ಧಾರವನ್ನು ಮಾಡುತ್ತೇವೆ ಎಂದು ತಿಳಿಸಿದರು.