ಫೇಸ್ ಬುಕ್ ನಲ್ಲಿ ಖಾದರ್ ವಿರುದ್ದ ಸುಳ್ಳು ಆರೋಪ: ಮುನೀರ್ ಕಾಟಿಪಳ್ಳ ವಿರುದ್ದ ದೂರು

Spread the love

ಫೇಸ್ ಬುಕ್ ನಲ್ಲಿ ಖಾದರ್ ವಿರುದ್ದ ಸುಳ್ಳು ಆರೋಪ: ಮುನೀರ್ ಕಾಟಿಪಳ್ಳ ವಿರುದ್ದ ದೂರು

ಮಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಖಾದರ್‌ ವಿರುದ್ದ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಡಿವೈಎಫ್ಐಮುಖಂಡ ಮುನೀರ್‌ ಕಾಟಿಪಳ್ಳ ವಿರುದ್ದ ಸಚಿವರ ಆಪ್ತ ಸಹಾಯಕ ಮುಹಮ್ಮದ್‌ ಲಿಬ್‌ ಝಿತ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ ಪ್ರಮುಖ ಆರೋಪಿ ನರೇಶ್‌ ಶೆಣೈ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸಚಿವರು ಬಂಧೀಖಾನೆಗೆ ದೂರವಾಣಿಯ ಮೂಲಕ ಆದೇಶ ನೀಡಿದ್ದರು ಎಂದು ಕಾಟಿಪಳ್ಳ ಅವರು ಫೇಸ್‌ಬುಕ್‌ನಲ್ಲಿ ಆರೋಪಿಸಿದ್ದರು. ಮುನೀರ್‌ ಕಾಟಿಪಳ್ಳ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಆರೋಪಿಸಿರುವಂತೆ “ಬಂಧಿತ ನರೇಶ್‌ ಶೆಣೈನನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ನಮ್ಮ ಕಡೆ ಯಿಂದ ಯಾರೂ ಹೇಳಿಲ್ಲ. ಈ ಬಗ್ಗೆ ಜೈಲರ್‌ನಲ್ಲಿ ವಿಚಾರಿಸಿದಾಗ ಯು.ಟಿ. ಖಾದರ್‌ ಕಡೆಯಿಂದ ಯಾವುದೇ ಕರೆ ಬಂದಿಲ್ಲ ಎಂದು ಜೈಲರ್‌ ಕೂಡಾ ತಿಳಿಸಿದ್ದಾರೆ.ಒಂದು ವೇಳೆ ನನ್ನ ಹೆಸರು ಹೇಳಿದ್ದರೆ ಅದಕ್ಕೆ ಮುನೀರ್‌ ಕಾಟಿಪಳ್ಳರೇ ಜವಾಬ್ದಾರರು. ಈ ಬಗ್ಗೆ ಮುನೀರ್‌ ಪುರಾವೆ ಸಂಗ್ರಹಿಸಲಿ ಎಂದು ಲಿಬ್‌ ಝಿತ್‌ ದೂರಿನಲ್ಲಿ ಹೇಳಿದ್ದಾರೆ.

ಈ ವಿಚಾರವಾಗಿ ಸಚಿವ ಖಾದರ್ ಮ್ಯಾಂಗಲೋರಿಯನ್ ಡಾಟ್ ಕಾಮ್ ಗೆ ಪ್ರತ್ರಿಕ್ರೀಯಿಸಿ ಕೆಲವೊಂದು ಸಮಾಜ ವಿರೋಧಿ ವ್ಯಕ್ತಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸಗಳನ್ನು ಮಾಡುತ್ತಿದ್ದು ನಾನಾಗಲೀ ಅಥವ ನನ್ನ ಆಪ್ತ ಸಹಾಯಕರಾಗಲಿ ಯಾವುದೇ ವಿಷಯವಾಗಿ ಜೈಲರಿಗೆ ಪೋನ್ ಮಾಡಿಲ್ಲ, ಈ ವಿಷಯ ನನ್ನ ಗಮನಕ್ಕೆ ಬಂದ ಬಳಿಕ ಖುದ್ದಾಗಿ ನಾನೇ ಜೈಲರಿಗೆ ಫೋನ್ ಮಾಡಿ ನನ್ನ ಸಹಾಯಕ ಫೋನ್ ಮಾಡಿದ್ದಾನೆಯೇ ಎಂದು ಸ್ಪಷ್ಟನೆ ಕೇಳಿದ್ದೆ ಅದಕ್ಕೆ ಅವರು ಅಂತಹ ಯಾವುದೇ ಕರೆ ಬಂದಿಲ್ಲ ಎಂದು ಹೇಳಿದ್ದರು.

ಮುನೀರ್ ಕಾಟಿಪಳ್ಳ ನನ್ನ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ನೀಡಿ ಮಾನ ಹಾನಿ ಮಾಡುತ್ತಾ ಬಂದಿದ್ದಾರೆ. ಕೆಲವು ಸಮಯದ ಹಿಂದೆ ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆ ಆರಂಭವಾದಾಗ ಕೂಡ ತಾನು ಅದರಲ್ಲಿ ಪಾಲುದಾರನಾಗಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದರು. ಈಗ ಪುನಃ ನನ್ನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಸಿದ್ದಾರೆ. ಆಟೋ ಚಾಲಕನ ಕೊಲೆಯಾದಾಗ ಕೂಡ ಅದರಲ್ಲಿ ಕೂಡ ಮುನೀರ್ ನನ್ನ ಹೆಸರನ್ನು ಎಳೆದು ತಂದಿದ್ದರು. ಈ ಕುರಿತು ಪೋಲಿಸರು ಸೂಕ್ತ ವಿಚಾರಣೆ ನಡೆಸಿ ಸತ್ಯ ತಿಳಿದು ಕೊಳ್ಳಲ್ಲಿ ಎಂದರು.


Spread the love