ಬೆಳ್ತಂಗಡಿ | ಮಾಲಾಡಿಯಲ್ಲಿ ಮನೆಗಳ್ಳತನ : ಆರೋಪಿಯ ಬಂಧನ
ಬೆಳ್ತಂಗಡಿ : ಮಾಲಾಡಿಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿಕಳ್ಳತನ ಮಾಡುವ ಪ್ರಯತ್ನ ನಡೆಸಿದ ಕುಖ್ಯಾತ ಆರೋಪಿಯನ್ನು ಸ್ಥಳೀಯರು ಹಿಡಿದು ಪೂಂಜಾಲಕಟ್ಟೆ ಪೊಲೀಸರಿಗೆ ಒಪ್ಪಿಸಿದ್ದು, ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಯು ಕೇರಳ ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ 13 ಪ್ರಕರಣಗಳಲ್ಲಿ ಆರೋಪಿಯಾಗಿರುವ ತಲಪಾಡಿ ನಿವಾಸಿ ಕಿರಣ್ ಎಂದು ಗುರುತಿಸಲಾಗಿದೆ.
ಮಾಲಾಡಿಯ ನಿವಾಸಿ ಪ್ರೇಮಾ ಶೆಟ್ಟಿ ಎಂಬವರು ಕಳೆದ ಕೆಲ ಸಮಯದಿಂದ ವಿದೇಶದಲ್ಲಿ ಇದ್ದು ಮನೆಯಲ್ಲಿ ಯಾರೂ ಇರದ ಕಾರಣ ಮನೆಗೆ ಬೀಗ ಹಾಕಲಾಗಿತ್ತು. ಮನೆಗೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ನ.9ರಂದು ಬೆಳಗ್ಗೆ ಪ್ರಮಾಶೆಟ್ಟಿ ಅವರ ಮಗಳು ಸಿಸಿಕ್ಯಾಮೆರಾದಲ್ಲಿ ಗಮನಿಸಿದಾಗ ಯಾರೋ ಅಪರಿಚಿತ ವ್ಯಕ್ತಿ ಕಳ್ಳತನಕ್ಕೆ ಪ್ರಯತ್ನಿಸುತ್ತಿರುವುದು ಕಂಡಿದ್ದು, ಕೂಡಲೇ ನೆರೆಮನೆಯ ಪ್ರಕಾಶ್ ಶೆಟ್ಟಿ ಎಂಬವರಿಗೆ ಕರೆ ಮಾಡಿ ಹೇಳಿದ್ದಾರೆ. ಪ್ರಕಾಶ್ ಶೆಟ್ಟಿ ಅವರು ಸ್ಥಳಕ್ಕೆ ತೆರಳಿ ನೋಡಿದಾಗ ಕಬ್ಬಿಣದ ರಾಡ್ ಹಿಡಿದು ವ್ಯಕ್ತಿಯೊರ್ವ ನಿಂತಿರುವುದು ಕಂಡಿದ್ದು, ಪ್ರಕಾಶ್ ಶೆಟ್ಟಿ ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಈ ವೇಳೆ ಸ್ಥಳೀಯರು ಸೇರಿ ಅಪರಿಚಿತ ವ್ಯಕ್ತಿಯನ್ನು ಹಿಡಿದು ಪೂಂಜಾಲಕಟ್ಟೆ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಈತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯನ್ನು ವಿಚಾರಣೆ ನಡೆಸಿದಾಗ ಈತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದು ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.













