ಬ್ರಹ್ಮಾವರ: ಮನೆಕಳವು ಪ್ರಕರಣದ ಆರೋಪಿಯ ಬಂಧನ

Spread the love

ಬ್ರಹ್ಮಾವರ: ಮನೆಕಳವು ಪ್ರಕರಣದ ಆರೋಪಿಯ ಬಂಧನ

ಉಡುಪಿ: ಮನೆಗಳ್ಳತನಕ್ಕೆ ಸಂಬಧಿಸಿ ಬ್ರಹ್ಮಾವರ ಪೊಲೀಸರು ಅಗಸ್ಟ್ 19 ರಂದು ಮಂಗಳೂರಿನ ಜೈಲ್ ರೋಡ್ ಸಮೀಪ ಬಂಧಿಸಿದ್ದಾರೆ.

ಬಂಧಿತನನ್ನು ಕಳವಾರು ನಿವಾಸಿ ಮೊಹಮದ್ ಆಲಿ @ ಸುರೇಶ್ (45) ಎಂದು ಗುರುತಿಸಲಾಗಿದೆ.

ಅಗಸ್ಟ್ 3 ರಂದು ಬ್ರಹ್ಮಾವರ ಠಾಣಾ ಸರಹದ್ದಿನ ಹೆಗ್ಗುಂಜೆ ಗ್ರಾಮದ ಮೈರ್ಕೊಮೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ನಟರಾಜ್ ಹಂಜಾರ್ರವರ ಮನೆಯಲ್ಲಿನ ನಗದು ಹಾಗೂ ಚಿನ್ನಾಭರಣ ಕಳವು ನಡೆದಿದ್ದು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಿಶಾ ಜೇಮ್ಸ್ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರಚಂದ್ರ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಟಿ. ಜೈಶಂಕರ್ರವರ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ 38.75 ಗ್ರಾಂ ತೂಕದ ಚಿನ್ನಾಭರಣ (ಅಂದಾಜು ಮೌಲ್ಯ ರೂ 1,20,000/-), ನಗದು ರೂಪಾಯಿ 3,00,550/- ಹಾಗೂ ಕೃತ್ಯಕ್ಕೆ ಬಳಸಿದ ಕೆಎ19ಸಿ2992 ನಂಬ್ರದ ಆಟೋ ರಿಕ್ಷಾ ಅಂದಾಜು ಮೌಲ್ಯ ರೂಪಾಯಿ 25,000/-, ಕಳವು ಮಾಡಿದ ಹಣದಿಂದ ಖರೀದಿಸಿದ ಕೆಎ19ಎಂಎನ್7284 ನಂಬ್ರದ ಓಮಿನಿ ಕಾರು (ಅಂದಾಜು ಮೌಲ್ಯ ಒಂದು ಲಕ್ಷ ರೂಪಾಯಿ) ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 5,45,550/- ರೂಪಾಯಿ ಆಗಿರುತ್ತದೆ.

ಬ್ರಹ್ಮಾವರ ವೃತ್ತದ ಸಿ.ಪಿ.ಐ. ಶ್ರೀಕಾಂತ್ ಕೆ. ರವರ ನೇತೃತ್ವದ ಈ ತಂಡದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯ ಪಿ.ಎಸ್.ಐ. ರಾಘವೇಂದ್ರ ಸಿ, ಎಎಸ್ಐ ನಾರಾಯಣ, ಸಿಬ್ಬಂದಿಯವರಾದ ವೆಂಕಟ್ರಮಣ ದೇವಾಡಿಗ, ಪ್ರವೀಣ್ ಶೆಟ್ಟಿಗಾರ್, ರಾಘವೇಂದ್ರ ಕಾರ್ಕಡ, ಗಣೇಶ್ ದೇವಾಡಿಗ, ದಿಲೀಪ್ ಕುಮಾರ್, ಹರೀಶ್, ಪ್ರಸಾದ್, ಮತ್ತು ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿಯವರಾದ ಪ್ರದೀಪ್ ನಾಯಕ್, ಗಣೇಶ್, ವಿಕ್ರಮ್, ವಾಸುದೇವ ಪೂಜಾರಿ ಮತ್ತು ವಾಹನ ಚಾಲಕರಾದ ಶೇಖರ ಹಾಗೂ ಅಣ್ಣಪ್ಪ ಇವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.


Spread the love