ಮಂಗಳೂರಿನಲ್ಲಿ ಗುಡ್ಡ ಕುಸಿತ, ಕೃತಕ ನೆರೆಗೆ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ: ಐವನ್ ಡಿಸೋಜಾ
ಮಂಗಳೂರು: ರಾಜ್ಯದಲ್ಲಿ 2019 ರಿಂದ 2023ರವರೆಗೆ ಬಿಜೆಪಿ ಸರಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ನಗರದ ಎಲ್ಲಾ ರಾಜಕಾಲುವೆಗಳು ಮತ್ತು ನೀರು ಹರಿಯುವ ತೋಡುಗಳ ಅಗಲ ಕಡಿಮೆಯಾಗಿ, ಕಳಪೆ ಮತ್ತು ಅವೈಜ್ಞಾನಿಕವಾಗಿ ಕಾಮಗಾರಿಗಳ ಅನುಷ್ಠಾನ ಇಂದಿನ ಕೃತಕ ನೆರೆ ಮತ್ತು ಭೂ ಕುಸಿತಕ್ಕೆ ಮುಖ್ಯ ಕಾರಣ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಆರೋಪಿಸಿದ್ದಾರೆ.
ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ರನ್ನು ಉದ್ದೇಶಿಸಿ ಈ ಆರೋಪ ಮಾಡಿರುವ ಐವನ್ ಡಿಸೋಜಾ, ನಗರದಲ್ಲಿ ನೆರ ಹಾವಳಿ ಬಾರದಂತೆ ಯಾವ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದೀರಿ ಎಂಬ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು. ಮಂಗಳೂರು ಮಹಾನಗರ ಪಾಲಿಕೆ ಮೂಲಕ ಎಲ್ಲಾ ಅನುದಾನವನ್ನು ಶಾಸಕರು ಯಾವ ಯಾವ ಕಾಮಗಾರಿಗಳಿಗೆ ವಿತರಿಸಿದ್ದಾರೆ ಎಂಬುದರ ಬಗ್ಗೆ ದಾಖಲೆಗಳನ್ನು ನೀಡಲಿ.
ತಮ್ಮ ಸರಕಾರದ ಅವಧಿಯಲ್ಲಿ 75 ಕೋಟಿ ವಿಶೇಷ ಅನುದಾನವನ್ನು ಅನುಷ್ಠಾನಗೊಳಿಸಿದ ಬಗ್ಗೆ ಮಂಗಳೂರಿನ ರಾಜಕಾಲುವೆಯಗಳು ಹಾಗೂ ಮಳೆಗಾಲದ ಕೃತಕ ನೀರು ಸರಿಯಾಗಿ ಹರಿದು ಹೋಗಲು ಯಾವ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿವರವಾದ ಚರ್ಚೆ ನಡೆಯಲಿ. ಮಂಗಳೂರು ನಗರದ ವಾರ್ಡ್ ನಂ. 25 ದೇರೆಬೈಲ್ ಪಶ್ಚಿಮ ಶೇಡಿಗುರಿ ಈರಿ ಪ್ರದೇಶದಲ್ಲಿ ನಿರ್ಮಿಸಿದ ರಾಜ ಕಾಲುವೆಯ ಸಣ್ಣ ಸೇತುವೆ ಕಾಮಗಾರಿಯೂ ಇಂದು ಏನಾಗಿದೆ ಹಾಗೂ ಇದಕ್ಕೆ ಶಾಸಕರಾದ ವೇದವ್ಯಾಸ್ ಕಾಮತ್ ರವರು ಈ ಬಗ್ಗೆ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಕಾಮಗಾರಿಗಳ ಬಗ್ಗೆ ವಿಶ್ಲೇಷಣೆ ಮಾಡಲಿ. ರಾಜ್ಯ ಸರಕಾರದಿಂದ ನಡೆಯುವ ಕಾಮಗಾರಿಗಳಲ್ಲಿ ಶಾಸಕರಾಗಿ ನೀವು ಸೂಚಿಸಿದ ಕಾಮಗಾರಿಗಳು ನೆರೆಹಾವಳಿಯನ್ನು ತಡೆಯುವ ಕಾಮಗಾರಿಗಳ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತನ್ನಿ. ರಾಜ್ಯ ಸರಕಾರ ಬಿಡುಕಾಸು ಬಿಡುಗಡೆ ಮಾಡಿಲ್ಲ ಎಂದು ಪತ್ರಿಕಾ ಹೇಳಿಕೆಯ ಮೂಲಕ ಸುಳ್ಳು ಆರೋಪ ಮಾಡಿದ್ದೀರಿ. ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆಗೆ ನಿಮ್ಮ ಪ್ರಯತ್ನವೇನು ಹಾಗೂ ತಮ್ಮ ಮಹಾನಗರ ಪಾಲಿಕೆ ಅಡಳಿತ ದಲ್ಲಿ ಮಳೆಗಾಲದ ಮುಂಜಾಗೃತಾ ಕ್ರಮವಾಗಿ ನೀವು ಈ ಕಾಮಗಾರಿಗಳನ್ನು ನಡೆಸಬಹುದಿತ್ತಲ್ಲವೇ ಎಂದು ಐವನ್ ಡಿಸೋಜಾ ಪ್ರಶ್ನಿಸಿದ್ದಾರೆ.
ಮಳೆಹಾನಿ ಕಾಮಗಾರಿಗೆ ದ.ಕ. ಜಿಲ್ಲೆಯಲ್ಲಿ 21ಕೋಟಿ ರೂ. ಹಣವು ಜಿಲ್ಲಾಧಿಕಾರಿ ಖಾತೆಯಲ್ಲಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿಯಮದಂತೆ ನರೆಹಾವಳಿಯಿಂದ ಉಂಟಾದ ಎಲ್ಲಾ ನಷ್ಟಗಳಿಗೆ ಪರಿಹಾರವನ್ನು ವಿತರಿಸಲು ಸಾಕಷ್ಟು ಹಣ ಸರಕಾರದ ಖಾತೆಯಲ್ಲಿ ಇದೆ. ಇನ್ನು ಮುಂದಕ್ಕೆ ಹಣದ ಅಗತ್ಯ ವಿದ್ದರೆ ಅದರ ಸಂಪೂರ್ಣ ಜವಬ್ದಾರಿಯನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತದೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ. ನಮ್ಮ ಸರಕಾರವು ಮಳೆಗಾಲದಲ್ಲಿ ಸಾರ್ವಜನಿಕರ ಜೀವಹಾನಿಯಾಗದಂತೆ ತಡೆಯಲು ಪ್ರಯತ್ನಿಸುತ್ತದೆ ಎಂದು ಐವನ್ ಡಿಞಸೋಜಾ ಹೇಳಿದ್ದಾರೆ.
ತಾವು ಶಾಸಕರಾಗಿ ಶಿಫಾರಸ್ಸು ಮಾಡಿದ ನಿಯಾಮಾವಳಿಗಳ ಪ್ರಕಾರ ಯಾವ ನಷ್ಟವನ್ನು ಪರಿಹಾರ ರೂಪದಲ್ಲಿ ನೀಡಿಲ್ಲ ಎಂಬ ಬಗ್ಗೆ ಶಾಸಕರು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಿಕೊ ಡುವುದು ಸೂಕ್ತ ಎಂದು ಐವನ್ ಡಿಸೋಜಾ ತಿಳಿಸಿದ್ದಾರೆ.