ಮಂಗಳೂರು | ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಕಾಂಗ್ರೆಸ್ ಪಕ್ಷದ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ ಮುಸ್ಲಿಂ ಮುಖಂಡರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕೊಳತ್ತಮಜಲುವಿನಲ್ಲಿ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮುಖಂಡರ ರಾಜೀನಾಮೆಗೆ ಆಗ್ರಹಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬೋಳಾರ್ನಲ್ಲಿರುವ ಶಾದಿ ಮಹಲ್ನಲ್ಲಿ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡುತ್ತಿದ್ದಾಗ ರೋಷಗೊಂಡ ಕಾರ್ಯಕರ್ತರು ಎದ್ದು ನಿಂತು ಈಗಲೇ ರಾಜೀನಾಮೆ ಬೇಕು ಎಂದು ಒತ್ತಾಯಿಸಿದರು.
ಅವರನ್ನು ಸಮಾಧಾನಪಡಿಸಲು ಪ್ರಯತ್ನ ನಡೆಸಿದಾಗ ವೇದಿಕೆಯತ್ತ ನುಗ್ಗಿ ಘೋಷಣೆಗಳನ್ನು ಕೂಗಿದರು.
ಮುಖಂಡರು ಪರಿಪರಿಯಾಗಿ ಬೇಡಿಕೊಂಡರೂ ಅಕ್ರೋಶಗೊಂಡವರಿಗೆ ಸಮಾಧಾನ ಆಗಲಿಲ್ಲ. ಅರ್ಧ ತಾಸಿಗೂ ಹೆಚ್ಚು ಕಾಲ ವಾಗ್ವಾದ, ಮಾತುಕತೆ ನಡೆಯಿತು.
ನಾವು ರಾಜೀನಾಮೆ ಸಲ್ಲಿಸಿ ಆಗಿದೆ. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖಂಡ ಅಬ್ದುಲ್ ರವೂಫ್ ಹೇಳಿ ಸಮಾಧಾನದಿಂದ ಕುಳಿತುಕೊಳ್ಳುವಂತೆ ಕೋರಿದರು. ಆದರೂ ಕಾರ್ಯಕರ್ತರ ಆಕ್ರೋಶ ತಣಿಯಲಿಲ್ಲ. ಕೊನೆಗೆ ಶಾಹುಲ್ ಹಮೀದ್ ಅವರು ‘ನಾವೆಲ್ಲರೂ ರಾಜೀನಾಮೆ ಸಲ್ಲಿಸಿದ್ದೇವೆ. ಸಾಮೂಹಿಕ ರಾಜೀನಾಮೆ ಪತ್ರವನ್ನು ಒಂದು ವಾರದ ಒಳಗೆ ಕೆಪಿಸಿಸಿಗೆ ಕಳುಹಿಸಲಾಗುವುದು’ ಎಂದು ಹೇಳಿ ಹೊರಟರು.