‘ಮಂಗಳೂರು ದಸರಾ’ಕ್ಕೆ ಕೊರೊನಾ ವಾರಿಯರ್ ಆರತಿ ಕೃಷ್ಣ ವೈಭವದ ಚಾಲನೆ

Spread the love

‘ಮಂಗಳೂರು ದಸರಾ’ಕ್ಕೆ ಕೊರೊನಾ ವಾರಿಯರ್ ಆರತಿ ಕೃಷ್ಣ ವೈಭವದ ಚಾಲನೆ

ಮಂಗಳೂರು: ಪ್ರಸಿದ್ಧ ಮಂಗಳೂರು ದಸರಾ ಮಹೋತ್ಸವಕ್ಕೆ ಶನಿವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಅಲಂಕೃತ ನವ ದುರ್ಗೆಯ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರತಿಷ್ಠಾಪನೆ ಮಾಡಲಾಯಿತು.

ನಗರದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನವು ಚಿನ್ನದ ಬಣ್ಣ, ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದ್ದು, ಭಕ್ತರು ನವ ದುರ್ಗೆಯರ ದರ್ಶನ ಪಡೆದರು. ಒಂಬತ್ತು ದಿನ ನಡೆಯಲಿರುವ ದಸರಾಕ್ಕೆ ಕೊರೊನಾ ವಾರಿಯರ್‌, ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕುದ್ರೋಳಿಯಲ್ಲಿ ಮಂಗಳೂರು ದಸರಾ ಉದ್ಘಾಟನೆ ಮಾಡಿರುವುದು ನನಗೆ ಗೌರವದ ವಿಷಯ. ಗೋಕರ್ನಾಥೇಶ್ವರ ದೇವಸ್ಥಾನವು ದೇಶದಾದ್ಯಂತ ಭಕ್ತರು ಭೇಟಿ ನೀಡುವ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದ್ದು, ಇದಕ್ಕೆ ಹಿರಿಯರಾದ ಜನಾರ್ದನ ಪೂಜಾರಿ ಅವರೇ ಕಾರಣ. ಈ ದೇವಾಲಯವು ಮಹಿಳೆಯರು ಮತ್ತು ವಿಧವೆಯರಿಗೆ ಪ್ರಾಮುಖ್ಯತೆ ನೀಡುವ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ’ ಎಂದು ಹೇಳಿದರು.

‘ಕೋವಿಡ್‌–19 ಸಾಂಕ್ರಾಮಿಕದ ಈ ಸಮಯದಲ್ಲಿ, ವಿದೇಶದಿಂದ ಜನರನ್ನು ಭಾರತಕ್ಕೆ ಕರೆತರಲು ನಾನು ಶ್ರಮಿಸಿದೆ. ಈಗ ಕೆಲವರು ತಮ್ಮ ಕೆಲಸವನ್ನು ಪುನರಾರಂಭಿಸಲು ವಿದೇಶಕ್ಕೆ ಹೋಗಲು ಸಿದ್ಧರಿದ್ದಾರೆ. ವೀಸಾಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿದ್ದು, ನಾಗರಿಕ ವಿಮಾನಯಾನ ಸಚಿವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ’ ಎಂದು ತಿಳಿಸಿದರು.

ಶಾರದಾ ಮೂರ್ತಿಯ ಪ್ರತಿಷ್ಠಾಪನೆಗೂ ಮೊದಲು ದೇವಾಲಯದ ಆವರಣದಲ್ಲಿ ಹುಲಿ ಕುಣಿತದ ತಂಡ ವಿವಿಧ ಕಲಾತಂಡಗಳ ಭವ್ಯ ಮೆರವಣಿಗೆ ನಡೆಸಲಾಯಿತು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್, ದೇವಾಲಯದ ಅಧ್ಯಕ್ಷ ಎಚ್. ಎಸ್. ಸಾಯಿರಾಂ, ಖಜಾಂಚಿ ಆರ್‌.ಪದ್ಮರಾಜ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love