ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ಶಾರದಾ ಉತ್ಸವ ಸಮಾಪನ

Spread the love

ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ಶಾರದಾ ಉತ್ಸವ ಸಮಾಪನ

ಮಂಗಳೂರು : ಜಿಲ್ಲೆಯ ಹೆಸರಾಂತ ಉತ್ಸವಗಳಲ್ಲಿ ಅತೀ ಪ್ರಸಿದ್ದವಾದ ಸಾರ್ವಜನಿಕ ಮಂಗಳೂರು ಶಾರದಾ ಮಹೋತ್ಸವದ 97 ನೇ ವರ್ಷದ ಕಾರ್ಯಕ್ರಮಗಳನ್ನು ಎಂದಿನಂತೆ ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ಆಚಾರ್ಯ ಮಠ ದ ವಸಂತ ಮಂಟಪದಲ್ಲಿ ಸಕಲ ಸಾಂಸ್ಕ್ರತಿಕ ಮತ್ತು ಧಾರ್ಮಿಕ ಕಾರ್ಯಕ್ರಮದೊಂದಿಗೆ ಶುಕ್ರವಾರ ಶ್ರೀ ಶಾರದಾ ಮಾತೆಯ ವಿಗ್ರಹದ ಪ್ರತಿಷ್ಠಾಪನೆ ನೆರವೇರಿತು .

ಮೂಲಾ ನಕ್ಷತ್ರದ ಮೊದಲ ಪಾದದಲ್ಲಿ ಪ್ರತಿಷ್ಠಾಪನೆಗೊಂಡು 9 ದಿನಗಳ ಪರ್ಯಂತ ಶ್ರೀ ದೇವಳದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹಕ್ಕೆ ವಿವಿಧ ಅವತಾರಗಳ ಅಲಂಕಾರದೊಂದಿಗೆ ಅಲಂಕರಿಸಿ ಪೂಜಿಸಲಾಯಿತು . ಮಲ್ಲಿಗೆ ಜಡೆಯೊಂದಿಗೆ ಸರ್ವಾಭರಣ ಭೂಷಿತಳಾಗಿ ಸಾಕ್ಷಾತ್ ದೇವಿಯಂತೆ ಶೋಭಿಸಿ ಭಕ್ತರಿಗೆ ಭಾವುಕತೆ ಹಾಗೂ ಸಂತೋಷದ ಮೆರುಗನ್ನು ನೀಡುವ ವೈಶಿಷ್ಟ್ಯವನ್ನು ಕಾಣಬಹುದು . ಉತ್ಸವ ಸಾರ್ವಜನಿಕವಾಗಿ ಆರಂಭಗೊಂಡು ಪ್ರಸ್ತುತ 97 ನೇ ಶಾರದಾ ಉತ್ಸವ ವೈಭವ ವಾಗಿ ನಡೆಯುತ್ತಿದ್ದು ಮಂಗಳೂರಿನಲ್ಲಿ ಆರಂಭಗೊಂಡ ಪ್ರಥಮ ಶಾರದಾ ಉತ್ಸವ ಎಂಬ ಕೀರ್ತಿಯೂ ಇದೆ

ಮಂಗಳೂರು ಶಾರದೆಯ ಮತ್ತೊಂದು ವೈಶಿಷ್ಟ್ಯವೆಂದರೆ ಶಾರದಾ ಮಾತೆ ಯ ಶೋಭಾಯಾತ್ರೆ . ಶ್ರೀ ದೇವಿಯ ಉತ್ಸವ ಸ್ಥಾನದಿಂದ ಹೊರಟು ಶ್ರೀ ವೆಂಕಟರಮಣ ದೇವರ ಪ್ರದಕ್ಷಿಣೆ ನಂತರ ಪುಷ್ಪದಿಂದ ಅಲಂಕೃತ ಪಲ್ಲಕಿಯಲ್ಲಿ ವಿರಾಜಮಾನಳಾಗಿ ಭಕ್ತರು ಆ ಲಾಲಕಿಯನ್ನು ತಮ್ಮ ಭುಜದಲ್ಲಿರಿಸಿ ಶೋಭಾಯಾತ್ರೆ ಯುದ್ದಕ್ಕೂ ಕೊಂಡೊಯ್ಯುವ ದ್ರಶ್ಯ ಅತ್ಯಂತ ಮನೋಹರ , ಶೋಭಾಯಾತ್ರೆಯ ಸಾಗುವ ದಾರಿಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಿ , ಆಕರ್ಷಕ ಸುಡುಮದ್ದು ಪ್ರದರ್ಶನ , ವಿವಿಧ ಟ್ಯಾಬ್ಲೋ ಗಳು , ವಾದ್ಯ , ಆಕರ್ಷಕ ಶಾರದಾ ಹುಲಿಗಳ ಕುಣಿತ ನಡೆದವು . ಇಲ್ಲಿ ವೇಷ ಹಾಕಿದ ತಂಡಗಳಿಗೆ ವಿಶೇಷ ಮರ್ಯಾದೆ ನೀಡುವ ಸಂಪ್ರದಾಯ ಮಂಗಳೂರು ಶಾರದೆಯ ಆಕರ್ಷಣೆಯೇ ಹುಲಿವೇಷ . ಲಾಲಕಿಯಲ್ಲಿ ವಿರಾಜಮಾನಳಾದ ಶಾರದೆಯ ನ್ನು ವೀಕ್ಷಿಸಲು ಮೆರವಣಿಗೆ ಸಾಗುವ ರಸ್ತೆಯ ಎರಡು ಭಾಗಗಳಲ್ಲಿ ಸಹಸ್ರಾರು ಭಕ್ತಾದಿಗಳು ನೆರೆದಿದ್ದರು .

ಶೋಭಾಯಾತ್ರೆಯು ರಥಬೀದಿ , ಗದ್ದೆಕೇರಿ , ಡೊಂಗರಕೇರಿ , ನ್ಯೂಚಿತ್ರ ಜುಂಕ್ಷನ್ , ಚಾಮರಗಲ್ಲಿ , ಕೆಳ ರಥಬೀದಿ ಮುಖಾಂತರ ಮಹಾಮಾಯ ದೇವಳದ ಪುಷ್ಕರಣಿಯಲ್ಲಿ ಮಾತೆಯ ವಿಗ್ರಹವನ್ನು ಜಲ ಸ್ಥ ೦ಭನ ಗೊಳಿಸಲಾಯಿತು . ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ಡಾ . ಯು . ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಕೃಷ್ಣ ಶೆಣೈ , ಪಂಡಿತ್ ನರಸಿಂಹ ಆಚಾರ್ಯ , ದೇವಳದ ಮೊಕ್ತೇಸರರಾದ ಸಿ .ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಹಾಗೂ ನೂರಾರು ಗಣ್ಯರು ಉಪಸ್ಥಿತರಿದ್ದರು .


Spread the love