ಮಂಗಳೂರು ವನ್‍ಗೆ ಇಂಟಕ್ ಜಿಲ್ಲಾಧ್ಯಕ್ಷರ ಭೇಟಿ; ಕನಿಷ್ಟ ವೇತನ ,ಇಎಸ್ ಐ ,ಪಿ ಎಫ್ ನೀಡದ ಸಂಸ್ಥೆಯ ವಿರುದ್ದ ತರಾಟೆ

Spread the love

ಮಂಗಳೂರು ವನ್‍ಗೆ ಇಂಟಕ್ ಜಿಲ್ಲಾಧ್ಯಕ್ಷರ ಭೇಟಿ; ಕನಿಷ್ಟ ವೇತನ, ಇಎಸ್ ಐ, ಪಿ ಎಫ್ ನೀಡದ ಸಂಸ್ಥೆಯ ವಿರುದ್ದ ತರಾಟೆ

ಮಂಗಳೂರು : ಮಲ್ಲಿಕಟ್ಟೆಯಲ್ಲಿರುವ ಮಂಗಳೂರು ವನ್ ಸಹಿತ ವಿವಿಧ ಶಾಖೆಗಳಲ್ಲಿ ಕೇಂದ್ರದಲ್ಲಿ ಸಿಬಂದಿಗಳಿಗೆ ಸೂಕ್ತ ಸೌಲಭ್ಯ ನೀಡದೆ ಸತಾಯಿಸುತ್ತಿದ್ದು ಗುರುವಾರ ಇಂಟಕ್ ಸಂಘಟನೆ ಪದಾಧಿಕಾರಿಗಳು ಸಂಸ್ಥೆಯ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದಕೊಂಡರು.

ಈ ಸಂದರ್ಭ ಮಾತನಾಡಿದ ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ  ಎಂಟು ವರ್ಷಗಳಿಂದ ಕೆಲಸ ಮಾಡುವ ಸಿಬಂದಿಗಳಿಗೆ ನೀಡುವ ಕನಿಷ್ಟ ಸೌಲಭ್ಯ ನೀಡಿಲ್ಲ. ನಿಮ್ಮ ಎಲ್ಲಾ ಶಾಖೆಗಳಲ್ಲೂ ಈ ಸಮಸ್ಯೆಯಿದೆ.ಸರಕಾರ ಕಾನೂನಿನಂತೆ ಕನಿಷ್ಟ ವೇತನ ನಿಗದಿ ಪಡಿಸಿದ್ದು ಅದನ್ನು ನೀಡ ಬೇಕು. ಇಎಸ್‍ಐ , ಪಿಎಫ್ ಸೌಲಭ್ಯ ಒದಗಿಸ ಬೇಕು .ಇದು ಸಿಬಂದಿಗಳ ಜೀವನಾಧಾರದ ಪ್ರಶ್ನೆ. ಈ ಹಿಂದೆ ವೇತನ ನೀಡದೆ ಹಲವು ಸಿಬಂದಿಗಳನ್ನು ಮನೆಗೆ ಕಳಿಸಲಾಗಿದೆ. ಹಾಗಾದರೆ ಸಿಬಂದಿಗಳಿಗೆ ಉದ್ಯೋಗ ಭದ್ರತೆ ನೀಡುವರರಾರು ಎಂದು ಪ್ರಶ್ನಿಸಿದರು.

ಈ ಸಂದರ್ಭ ಇಂಟಕ್ ಪದಾಧಿಕಾರಿಗಳು ಹಾಗೂ ಮಂಗಳೂರು ವನ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದ ಬಳಿಕ ಸಿಬಂದಿಗಳಿಗೆ ಕನಿಷ್ಟ ವೇತನ, ಮತ್ತಿತರ ಸೌಲಭ್ಯ ನೀಡುವ ಕುರಿತಂತೆ ಮೇಲಾಧಿಕಾರಿಗಳ ಜತೆ ಚರ್ಚಿಸುವ ಭರವಸೆ ನೀಡಿದರು.

ಇಂಟಕ್‍ನ ದಿನಕರ ಶೆಟ್ಟಿ, ವಿನೋದ್ ರಾಜ್ ಪಣಂಬೂರು ಮತ್ತಿತರರು ಉಪಸ್ಥಿತರಿದ್ದರು.


Spread the love