ಮಂಗಳೂರು ವಿವಿಗೆ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಚಾಂಪಿಯನ್ ಸಮಗ್ರ ಪ್ರಶಸ್ತಿ

Spread the love

ಮಂಗಳೂರು ವಿವಿಗೆ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಚಾಂಪಿಯನ್ ಸಮಗ್ರ ಪ್ರಶಸ್ತಿ

ಮೂಡಬಿದಿರೆ: “ನಮ್ಮ ದೇಶದ ಯುವಕರಲ್ಲಿ ಕ್ರೀಡೆಯಲ್ಲಿ ಮಹತ್ತರವಾದದನ್ನು ಸಾಧಿಸುವ ಸಾಮಥ್ರ್ಯವಿದೆ. ಆದರೆ ಅದಕ್ಕೆ ಅಗತ್ಯವಿರುವ ಪ್ರೋತ್ಸಾಹ ಮತ್ತು ಬೆಂಬಲ ದೊರೆಯುತ್ತಿಲ್ಲವಷ್ಟೇ” ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ. ಯಶೋವರ್ಮ ಅಭಿಪ್ರಾಯಪಟ್ಟರು. ಮೂಡಬಿದಿರೆಯಲ್ಲಿ ಮಂಗಳೂರು ವಿವಿ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸಮಾಪ್ತಿಗೊಂಡ 79ನೇ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಮಾತನಾಡಿದರು.

“ಪ್ರತೀ ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಕ್ರೀಡಾ ಸಾಧನೆಯನ್ನು, ಇಲ್ಲಿನ ಜನಸಂಖ್ಯೆಯ ಆಧಾರದಲ್ಲಿ ವಿಶ್ಲೇಷಿಸಲಾಗುತ್ತದೆ. ಆದರೆ ಇದು ಸರಿಯಾದ ರೀತಿಯಲ್ಲ. ಕ್ರೀಡಾ ಪರಿಷ್ಕರಣೆ ಎಷ್ಟು ಮಂದಿ ಯುವಕರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಗಮನಿಸಿದಾಗ ನಾವು ಬೆಳೆಯಬೇಕಿರುವುದು ಸಾಕಷ್ಟಿದೆ” ಎಂದು ತಿಳಿಸಿದರು.

“ಡಾ. ಎಂ. ಮೋಹನ್ ಆಳ್ವ ಮಬ್ಬುಗಟ್ಟಿರುವ ನಮ್ಮ ಕ್ರೀಡೋತ್ಸಾಹದ ಮರುಭೂಮಿಯ ಒಯಾಸಿಸ್ ಇದ್ದಂತೆ. ಒಂದು ಕ್ರೀಡಾಕೂಟವನ್ನು ಇಷ್ಟು ಅಚ್ಚುಕಟ್ಟಾಗಿ ಆಯೋಜಿಸುವುದು ಸುಲಭವಲ್ಲ. ಆದರೆ ಆಳ್ವರು ಅದನ್ನು ಸಾಧಿಸಿ ತೋರಿಸಿದ್ದಾರೆ. ತಮ್ಮ ಸಂಸ್ಥೆಯಲ್ಲೂ ಸಹ ನೂರಾರು ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿಯನ್ನು ನೀಡುತ್ತಿರುವುದು ಶ್ಲಾಘನೀಯ ಸಂಗತಿ” ಎಂದು ತಿಳಿಸಿದರು.

ಕ್ರೀಡಾಕೂಟದ ಕಾರ್ಯಕಾರಿ ಅಧ್ಯಕ್ಷ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ “ನಮ್ಮದು ಯುವ ಪ್ರಧಾನ ರಾಷ್ಟ್ರ ಎಂದು ಹೇಳಿಕೊಳ್ಳಲಾಗುತ್ತದೆ. ಆದರೆ ಇಂಥಹ ಶ್ರೇಷ್ಠ ಯುವಶಕ್ತಿ ಎಷ್ಟರ ಮಟ್ಟಿಗೆ ಒಳ್ಳೆಯ ರೀತಿಯಲ್ಲಿ ಬಳಕೆಯಗಿತ್ತಿದೆ ಎಂಬುದು ಇಲ್ಲಿ ಮುಖ್ಯ. ನಮ್ಮ ದೇಶದ ಚುಕ್ಕಾಣಿ ಹಿಡಿದಿರುವವರು, ನಮ್ಮ ಯುವಶಕ್ತಿಯನ್ನು ಭಾವನಾತ್ಮಕವಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ಆದರೆ ನಾನಿಂದು ಹೇಳುತ್ತೇನೆ, ಅವರನ್ನು ಭಾವನಾತ್ಮಕವಾಗಿ ಅಲ್ಲ, ಬದಲಿಗೆ ಕ್ರಿಯಾತ್ಮಕ ರೀತಿಯಲ್ಲಿ ರೂಪಿಸಿ” ಎಂದು ತಿಳಿಸಿದರು.

“ನಮ್ಮ ದೇಶದ ಯುವಕರ ಸಂಖ್ಯೆ ಸುಮರು 20 ಕೋಟಿಯಷ್ಟಿದೆ. ಆದರೆ ಸಾಂಸ್ಕøತಿಕ, ಕ್ರೀಡೆ, ಎನ್ಸಿಸಿ, ಎನ್ಎಸ್ಎಸ್ ಈ ಎಲ್ಲಾ ಆಯಾಮಗಲ್ಲಿ ಚಿಂತಿಸಿದಾಗ ಸಾಮಥ್ರ್ಯವಿದ್ದರೂ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸೋಲುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮಲ್ಲಿನ ಪ್ರೋತ್ಸಾಹದ ಮನಸ್ಸುಗಳ ಕೊರತೆ ಮತ್ತು ಸರ್ಕಾರದ ನಿಷ್ಕಾಳಜಿ. ವೋಟಿಗಾಗಿ ಸಾಕಷ್ಟು ನಾಟಕ ಮಾಡುವ ನಮ್ಮ ರಾಜಕಾರಣಿಗಳು, ಅಧಿಕಾರ ಹಿಡಿದಾಗ ಯುವಕರ ಬೆಳವಣಿಗೆಗೆ ಶ್ರಮಿಸುವಿದಿಲ್ಲ. ಬದಲಿಗೆ ಅವರನ್ನು ದೂರುವ ಕೆಲಸದಲ್ಲಿ ತೊಡಗುತ್ತಾರೆ. ಇಂಥಹ ಸರ್ಕಾರಗಳಿಗೆ ಯುವಕರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ” ಎಂದು ಕಿಡಿಕಾರಿದರು.

“ಈ ಎಲ್ಲಾ ಆಯಾಮಗಳನ್ನು ಪರಿಗಣಿಸಿಯೇ ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಅವರಿಗೆ ಸೂಕ್ತ ರೀತಿಯ ಪ್ರೋತ್ಸಾಹ, ಮಾರ್ಗದರ್ಶನ ಖಂಡಿತ ದೊರೆಯಬೇಕು” ಎಂದು ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿಯ ದೈಹಿಕ ನಿರ್ದೇಶಕ ಡಾ ಕಿಶೋರ್ ಕುಮಾರ್ ವಂದಿಸಿದರು. ಮಾಜಿ ಕ್ರೀಡಾಪಟು ಸುಕುಮಾರನ್, ಅಖಿಲ ಭಾರತ ಕ್ರೀಡಾ ವೀಕ್ಷಕರಾದ ಎಸ್. ಆರ್.ಎಮ್ ವಿವಿಯ ಕ್ರೀಡಾ ನಿರ್ದೇಶಕ ಪ್ರೊ. ಕೆ. ವೈದ್ಯನಾಥನ್, ಮದ್ರಾಸ್ ವಿವಿಯ ಕ್ರೀಡಾ ನಿರ್ದೇಶಕ ಡಾ. ವಿ. ಮಹಾದೇವನ್ ಹಾಗೂ ಜೈಪುರದ ಮಣಿಪಾಲ ವಿವಿಯ ಕ್ರೀಡಾ ನಿರ್ದೇಶಕಿ ಡಾ. ರೀನಾ ಪೂನಿಯಾ ಉಪಸ್ಥಿತರಿದ್ದರು.

ಹ್ಯಾಟ್ರಿಕ್ ಸಾಧನೆ
ಮಂಗಳೂರು ವಿವಿ ಸತತ ಮೂರನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಜತೆಗೆ ಕಳೆದ ಬಾರಿಯ 179 ಅಂಕಗಳ ಸಾಧನೆಯನ್ನು, ಈ ಬಾರಿ 188 ಅಂಕ ಗಳಿಸುವ ಮೂಲಕ ಸರಿಗಟ್ಟಿತು. ಕೊಟ್ಟಾಯಮ್ನ ಮಹಾತ್ಮ ಗಾಂಧಿ ವಿವಿ 109 ಅಂಕಗಳೊಂದಿಗೆ ರನ್ನರ್ ಅಪ್ ಆಗಿ ಹೊರಹೊಮ್ಮಿತು.

ಪುರುಷ ಮತ್ತು ಮಹಳೆಯರ ವಿಭಾಗದಲ್ಲಿ ಮಂಗಳೂರು ವಿವಿ ಪ್ರಥಮ, ಕೊಟ್ಟಾಯಮ್ನ ಮಹಾತ್ಮ ಗಾಂಧಿ ವಿವಿ ದ್ವಿತೀಯ ಹಾಗೂ ಕ್ಯಾಲಿಕಟ್ ವಿವಿ ತೃತೀಯ ಸ್ಥಾನಕ್ಕೆ ಭಾಜನವಾಯಿತು. ತಿರುಚಿರಪಳ್ಳಿಯ ಭಾರತಿದಾಸ್ ವಿವಿಯ ಎಸ್. ಧನಲಕ್ಷ್ಮೀ ಶ್ರೇಷ್ಠ ಮಹಿಳಾ ಕ್ರೀಡಾಪಟುವಾದರೆ, ಮುಂಬೈ ವಿವಿ ಜೈ ಷಾ ಶ್ರೇಷ್ಠ ಪುರುಷ ಕ್ರೀಡಾಪಟುವಾಗಿ ಹೊರಹೊಮ್ಮಿದರು.

ಇದೇ ಸಂದರ್ಭದಲ್ಲಿ ಮಂಗಳೂರು ವಿವಿಯ ಹೆಮ್ಮೆಯ ಕ್ರೀಡಾಪಟುಗಳಾದ ಪ್ರವೀಣ್ ಚಿತ್ರವೇಲ್(1,00,000 ರೂ ನಗದು ಬಹುಮಾನ ಸಹಿತ), ಇಲಕ್ಯಾದಾಸನ, ಅಭಿನಯ ಶೆಟ್ಟಿ ಹಾಗೂ ಪ್ರಜ್ವಲ್ ಮಂದಣ್ಣರನ್ನು ಸನ್ಮಾನಿಸಲಾಯಿತು. ಇದೇ ವೇಳೆ ರೀಯೋ ಒಲಂಪಿಕ್ಸ್ನ 4*400 ಮೀ ರಿಲೇಯಲ್ಲಿ ಭಾಗಿಯಾಗಿದ್ದ ಕ್ಯಾಲಿಕಟ್ ವಿವಿಯ ಜಿಷ್ಣ ಮ್ಯಾಥಿವ್ರನ್ನು ಸಮ್ಮಾನಿಸಲಾಯಿತು.

ಮೋಹನ್ ಆಳ್ವರಿಗೆ ಗೌರವ
ಮಂಗಳೂರು ವಿವಿಯ ವತಿಯಿಂದ ಕ್ರೀಡಾಕೂಟಯ ಆಯೋಜನೆಯಲ್ಲಿ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ ಡಾ. ಎಂ. ಮೋಹನ್ ಆಳ್ವರನ್ನು ಸನ್ಮಾನಿಸಿ ಗೌರವಿಸಲಾಯಿತು.


Spread the love