ಮನಗೂಳಿ ಕೆನರಾ ಬ್ಯಾಂಕ್ ದರೋಡೆ: ಸಂಚಿನ ರೋಚಕ ಕಥೆ ಹೇಳಿದ ಎಸ್ಪಿ ಲಕ್ಷ್ಮಣ ನಿಂಬರಗಿ

Spread the love

ಮನಗೂಳಿ ಕೆನರಾ ಬ್ಯಾಂಕ್ ದರೋಡೆ: ಸಂಚಿನ ರೋಚಕ ಕಥೆ ಹೇಳಿದ ಎಸ್ಪಿ ಲಕ್ಷ್ಮಣ ನಿಂಬರಗಿ

ವಿಜಯಪುರ: ರಾಜ್ಯದಲ್ಲಿ ನಡೆದ ಅತಿ ದೊಡ್ಡ ಮೊತ್ತದ ಬ್ಯಾಂಕ್ ಕಳವು ಪ್ರಕರಣ ಎಂದೇ ಗಮನ ಸೆಳೆದಿದ್ದ ಮನಗೂಳಿ ಕೆನರಾ ಬ್ಯಾಂಕ್ ಕಳವು ಪ್ರಕರಣದ ಹಿಂದಿನ ಹಲವು ರೋಚಕ ಅಂಶಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಮನಗೂಳಿ ಕೆನರಾ ಬ್ಯಾಂಕಿನ ಸೇಫ್ ಲಾಕರ್ನಲ್ಲಿದ್ದ ₹53.26 ಕೋಟಿ ಮೌಲ್ಯದ 58.97 ಕೆ.ಜಿ ಚಿನ್ನಾಭರಣ ಮತ್ತು ₹5.20 ಕೋಟಿ ನಗದು ಕಳವಿಗೆ ಅದೇ ಬ್ಯಾಂಕಿನ ಹಿಂದಿನ ವ್ಯವಸ್ಥಾಪಕನಾಗಿದ್ದ ವಿಜಯಕುಮಾರ್ ಮಿರಿಯಾಲ ಮತ್ತು ಸಹಚರ ಆರೋಪಿಗಳು ಮೂರು ತಿಂಗಳ ಮೊದಲೇ ಕಳವಿಗೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ’ ಎಂದು ಹೇಳಿದರು.

‘ಮೇ 9ರವರೆಗೂ ಮನಗೂಳಿ ಕೆನರಾ ಬ್ಯಾಂಕಿನ ವ್ಯವಸ್ಥಾಪಕನಾಗಿದ್ದ ವಿಜಯಕುಮಾರ್ ಮಿರಿಯಾಲ, ಬಳಿಕ ಕೊಲ್ದಾರ ತಾಲ್ಲೂಕಿನ ರೋಣಿಹಾಳ ಕೆನರಾ ಬ್ಯಾಂಕ್ ಶಾಖೆಗೆ ವರ್ಗಾವಣೆಯಾಗಿರುತ್ತಾನೆ. ಅದಕ್ಕೂ ಮೊದಲೇ ಅಂದರೆ ಮಾರ್ಚ್ ಮತ್ತು ಏಪ್ರಿಲ್ನಲ್ಲೇ ಬ್ಯಾಂಕಿನ ಸೇಫ್ ಲಾಕರ್ ಕೀಗಳನ್ನು ತನ್ನ ಸಹಚರ ಆರೋಪಿಗಳಿಗೆ ಕೊಟ್ಟು ನಕಲಿ ಕೀ ಮಾಡಿಸಿರುತ್ತಾನೆ. ಅಲ್ಲದೇ, ನಕಲಿ ಕೀಗಳು ಸರಿಯಾಗಿ ಕೆಲಸ ಮಾಡುತ್ತವೆಯೋ, ಇಲ್ಲವೋ ಎಂದು ಹಲವಾರು ಬಾರಿ ಬಳಸಿ (ಟೆಸ್ಟ್ ಅಂಡ್ ಟ್ರಯಲ್) ಖಚಿತ ಮಾಡಿಕೊಂಡಿರುತ್ತಾನೆ’ ಎಂದರು.

‘ಮನಗೂಳಿ ಕೆನರಾ ಬ್ಯಾಂಕಿನಿಂದ ರೋಣಿಹಾಳ ಕೆನರಾ ಬ್ಯಾಂಕ್ ಶಾಖೆಗೆ ವರ್ಗಾವಣೆ ಆದ ಮೇಲೆ ಕಳ್ಳತನ ಮಾಡಲು ಯೋಜನೆ ರೂಪಿಸಿ, ಕಾಯುತ್ತಾನೆ. ಮೊದಲೇ ಮಾಡಿದರೆ ತನ್ನ ಮೇಲೆ ಸಂಶಯ ಬರುತ್ತದೆ ಎಂಬ ಕಾರಣಕ್ಕೆ ಸುಮ್ಮನಾಗಿರುತ್ತಾನೆ. ಬ್ಯಾಂಕಿನಲ್ಲಿ ತನ್ನ ಸ್ಥಾನಕ್ಕೆ ಹೊಸ ವ್ಯವಸ್ಥಾಪಕ, ಸಿಬ್ಬಂದಿ ಸೇರಿದಂತೆ ಹೊಸ ವ್ಯವಸ್ಥೆ ಬಂದ ಬಳಿಕವೇ ಕಳವು ಮಾಡಿದರೆ ಅವರ ಮೇಲೆ ಸಂಶಯ ಬರುತ್ತದೆ ಎಂದು ಯೋಚಿಸಿರುತ್ತಾನೆ’ ಎಂದರು.

‘ವಿಜಯಕುಮಾರ್ ತಾನು ರೋಣಿಹಾಳಕ್ಕೆ ವರ್ಗಾವಣೆಯಾಗಿ ಹೋದ ಬಳಿಕ ಇತರೆ ಆರೋಪಿಗಳ ಜೊತೆ ಸೇರಿ ಹಲವಾರು ಬಾರಿ ಮನಗೂಳಿ ಪಟ್ಟಣಕ್ಕೆ ಬಂದು, ಕಳವು ಹೇಗೆಲ್ಲ ಮಾಡಬೇಕು ಎಂದು ಸಂಚು ರೂಪಿಸುತ್ತಾರೆ. ಪಟ್ಟಣ ಮತ್ತು ಬ್ಯಾಂಕಿನಲ್ಲಿ ಎಲ್ಲೆಲ್ಲಿ ಸಿಸಿ ಟಿವಿಗಳಿವೆ, ಯಾವ ದಾರಿಯಲ್ಲಿ ಬರಬೇಕು. ಯಾವ ದಾರಿಯಲ್ಲಿ ಹೋಗಬೇಕು ಎಂಬುದನ್ನು ಮೊದಲೇ ನಿರ್ಧರಿಸುತ್ತಾರೆ’ ಎಂದರು.

‘ಆರಂಭದಲ್ಲಿ ಮೇ 23ರಂದು ಬ್ಯಾಂಕ್ ಕಳವಿಗೆ ಮುಹೂರ್ತ ನಿಗದಿ ಮಾಡಿರುತ್ತಾರೆ. ಅಂದು ಆರ್ಸಿಬಿ, ಸೈನ್ ರೈಸರ್ಸ್ ಹೈದರಾಬಾದ್ ನಡುವೆ ಐಪಿಎಲ್ ಪಂದ್ಯ ನಡೆದಿರುತ್ತದೆ. ಪಟ್ಟಣದ ಜನ ಪಂದ್ಯ ವೀಕ್ಷಣೆಯಲ್ಲಿ ಮಗ್ನರಾಗಿರುತ್ತಾರೆ. ಗೆದ್ದ ಬಳಿಕ ಯುವಕರು ಪಟಾಕಿ ಸಿಡಿಸುತ್ತಾರೆ. ಈ ಸಂದರ್ಭದಲ್ಲಿ ಪಟ್ಟಣದಲ್ಲಿ ಜನ ಸಂಚಾರ ಕಡಿಮೆ ಇರುತ್ತದೆ. ಆಗ ಕಳವು ಮಾಡುವುದು ಸುಲಭವಾಗುತ್ತದೆ ಎಂದು ಯೋಜನೆ ರೂಪಿಸಿರುತ್ತಾರೆ. ಆದರೆ, ಅವರು ಅಂದುಕೊಂಡಂತೆ ಅಂದು ಆಗುವುದಿಲ್ಲ. ಪಂದ್ಯದಲ್ಲಿ ಆರ್ಸಿಬಿ ಸೋಲುತ್ತದೆ, ಜೊತೆಗೆ ಮಳೆಯೂ ಬರುವುದಿಲ್ಲ. ಹೀಗಾಗಿ ಅಂದಿನ ಯೋಜನೆ ಕೈಬಿಡುತ್ತಾರೆ’ ಎಂದು ಹೇಳಿದರು.

‘ಬಳಿಕ ಮೇ 24ರಂದು ಶನಿವಾರವಾಗಿರುವುದರಿಂದ ಕಳವಿಗೆ ಮುಂದಾಗುತ್ತಾರೆ. ಅಂದು ಬ್ಯಾಂಕಿನ ಸುತ್ತಮುತ್ತಲ ಪ್ರದೇಶದಲ್ಲಿ ಆರೋಪಿಗಳು ಹಲವಾರು ಬಾರಿ ಸುತ್ತಾಡಿರುವ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳವಿಗೂ ಮುನ್ನಾ ಅಂದು ಬ್ಯಾಂಕಿನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಎನ್.ವಿ.ಆರ್ ತೆಗೆದುಕೊಂಡು ಹೋಗಿರುತ್ತಾರೆ. ಜೊತೆಗೆ ಜೊತೆಗೆ ಹೈಮಾಸ್ಟ್ ವಿದ್ಯುತ್ ದೀಪಗಳ ವೈರ್ ಕಟ್ ಮಾಡಿರುತ್ತಾರೆ’ ಎಂದರು.

“ಆರೋಪಿಗಳು ಬ್ಯಾಂಕ್ ಕಳವು ಸಂಬಂಧ ಸಾಕಷ್ಟು ರೀತಿಯ ಇಂಗ್ಲಿಷ್, ಹಿಂದಿ ಚಲನಚಿತ್ರಗಳನ್ನು, ನೆಟ್ಪ್ಲಿಕ್ಸ್, ಅಮೆಜಾನ್ನಲ್ಲಿ ಬರುವ ಕ್ರೈಂ ಸ್ಟೋರಿಗಳನ್ನು ನೋಡಿ ಅಧ್ಯಯನ ಮಾಡಿರುತ್ತಾರೆ. ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಾಸ್ಕ್, ಹೆಲೈಟ್ ಧರಿಸಿ, ತಮ್ಮ ವೇಷಭೂಷಣಗಳನ್ನು ಬದಲಾಯಿಸಿಕೊಂಡು, ತಮ್ಮ ಕುರುಹು ಎಲ್ಲಿಯೂ ಸಿಗದಂತೆ ಮೊದಲೇ ಯೋಜಿಸಿರುತ್ತಾರೆ’ ಎಂದರು.

‘ಕಳವು ಮಾಡಲು ತಂದ ವಾಹನಗಳನ್ನು ಯಾವ ರೀತಿ ಬಳಸಬೇಕು ಎಂಬುದನ್ನು ಮೊದಲೇ ಯೋಜಿಸಿರುತ್ತಾರೆ. ತಮ್ಮನ್ನು ಯಾರೂ ಗುರುತಿಸದಂತೆ ಮಾಡಲು ಪಟ್ಟಣದಲ್ಲಿ ಬೈಕುಗಳಲ್ಲಿ ತಿರುಗಾಡುತ್ತಾರೆ. ಬಳಿಕ ಆ ಬೈಕುಗಳು ಎಲ್ಲಿ ಹೋದವು ಎಂಬುದು ತಿಳಿಯದಂತೆ ಮಾಡಲು ಟ್ರಕ್ಗಳ ಮೂಲಕ ಬೇರೆಡೆಗೆ ಸಾಗಿಸುತ್ತಾರೆ. ಈ ರೀತಿ ಸರಿಯಾದ ಯೋಜನೆ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಾರೆ’ ಎಂದು ಹೇಳಿದರು.

ವಾಮಾಚಾರ: ‘ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆದಂತ ಬ್ಯಾಂಕ್ ದರೋಡೆಗಳನ್ನು ಅಧ್ಯಯನ ಮಾಡಿರುತ್ತಾರೆ. ಬ್ಯಾಂಕ್ ಕಳವು ಮಾಡಿರುವವರು ತಮಿಳುನಾಡು, ಕೇರಳ ಕಡೆಯುವರು ಎಂದು ಪೊಲೀಸರು ತಿಳಿಯಲಿ ಎಂದು ದಿಕ್ಕು ತಪ್ಪಿಸಲು ಬ್ಯಾಂಕ್ ಆವರಣದಲ್ಲಿ ವಾಮಾಚಾರ ಮಾಡಿರುತ್ತಾರೆ’ ಎಂದರು.

‘ಪೊಲೀಸ್ ಶ್ವಾನದಳ, ಪೊಲೀಸ್ ಸ್ವಾಡ್ನ ದಿಕ್ಕು ತಪ್ಪಿಸಲು ಕೈಗಳಿಗೆ ಗೌಸ್ ಹಾಕಿಕೊಂಡು ಬೆರಳಚ್ಚು ಗುರುತು ಸಿಗದಂತೆಯೂ ಮಾಡಿರುತ್ತಾರೆ’ ಎಂದು ತಿಳಿಸಿದರು.

ಮೂವರು ಕಳ್ಳರು ಹುಬ್ಬಳ್ಳಿಯವರು
ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಕೆನರಾ ಬ್ಯಾಂಕಿನ ಕಳವು ಪ್ರಕರಣದ ಮುಖ್ಯ ಆರೋಪಿ ವಿಜಯಕುಮಾರ್ ಮಿರಿಯಾಲ(41) ಚಂದ್ರಶೇಖರ ನೆರೆಲ್ಲಾ(38) ಮತ್ತು ಸುನೀಲ ಮೋಕಾ(40) ಮೂವರೂ ಹುಬ್ಬಳ್ಳಿ ಮೂಲದವರು. ಮುಖ್ಯ ಆರೋಪಿ ವಿಜಯಕುಮಾರ್ ಮಿರಿಯಾಲ ಸದ್ಯ ಕೊಲ್ಲಾರ ತಾಲ್ಲೂಕಿನ ರೋಣಿಹಾಳ ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು. ಈತನ ಸಹಚರ ಆರೋಪಿಗಳಾದ ಚಂದ್ರಶೇಖರ ನೆರೆಲ್ಲಾ ಹುಬ್ಬಳ್ಳಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡಿರುತ್ತಾನೆ. ಜೊತೆಗೆ ಹುಬ್ಬಳ್ಳಿ ಕೇಶ್ವಾಪುರದಲ್ಲಿ ಸೇಂಟ್ ಆದ್ರೂಸ್ ಸ್ಕೂಲ್ ನಡೆಸುತ್ತಿದ್ದಾನೆ. ಗುತ್ತಿಗೆದಾರ ಕ್ಯಾಸಿನೋ ನಡೆಸುವುದು ಆಡುವುದು ಇವನ ಹವ್ಯಾಸವಾಗಿದೆ. ಒಮ್ಮೆ ಶ್ರೀಲಂಕಾದ ಕೊಲೊಂಬೊಕ್ಕೆ ಹೋಗಿ ಅಲ್ಲಿಯೂ ಕ್ಯಾಸಿನೊ ಆಡಿ ಬಂದಿರುತ್ತಾನೆ. ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡಿ ಗೋಲ್ಮಾಲ್ ಮಾಡಿ ಅಮಾನತು ಆಗಿದ್ದಾನೆ. ಇನ್ನೊಬ್ಬ ಆರೋಪಿ ಸುನೀಲ್ ಮೋಕಾ ಆರೋಪಿ ಚಂದ್ರಶೇಖರ ನೆರೆಲ್ಲಾನ ಅಪ್ತನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ಇಬ್ಬರೂ ಒಟ್ಟಿಗೆ ಹಲವಾರು ದಂಧೆ ಮಾಡಿಕೊಂಡು ಬಂದಿರುತ್ತಾರೆ.

‘ಮನಗೂಳಿ ಭಾಗ -2 ಶೀಘ್ರ’

‘ಮನಗೂಳಿ ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಹೇಳಿರುವುದು ಭಾಗ- 1 ಮಾತ್ರವಾಗಿದ್ದು ಶೀಘ್ರದಲ್ಲೇ ಪ್ರಕರಣದ ತನಿಖೆ ಪೂರ್ಣಗೊಳಿಸಿ ಇನ್ನುಳಿದ ಆರೋಪಿಗಳನ್ನು ಪತ್ತೆ ಹಚ್ಚಿ ಅವರ ಬಳಿ ಇರುವ ಚಿನ್ನಾಭರಣವನ್ನು ಜಪ್ತಿ ಮಾಡಿದ ಬಳಿಕ ಮನಗೂಳಿ ಭಾಗ -2 ಅನ್ನು ಬಹಿರಂಗಗೊಳಿಸಲಾಗುವುದು’ ಎಂದು ಎಸ್ಪಿ ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿಎಸ್ಪಿ ಟಿ.ಎಸ್.ಸುಲ್ಸಿ, ಸುನೀಲ ಕಾಂಬಳೆ, ಬಲ್ಲಪ್ಪ ನಂದಗಾವಿ, ಸಿಪಿಐ ರಮೇಶ ಅವಜಿ, ಬಸವರಾಜ ಯಲಿಗಾರ, ಗುರುಶಾಂತ ದಾಶ್ಯಾಳ, ಅಶೋಕ ಚವ್ಹಾಣ, ಪಿಎಸ್ಐ ಶ್ರೀಕಾಂತ ಕಾಂಬಳೆ, ಅಶೋಕ ನಾಯಕ, ದೇವರಾಜ ಉಳ್ಳಾಗಡ್ಡಿ, ಬಸವರಾಜ ತಿಪ್ಪರೆಡ್ಡಿ, ರಾಕೇಶ ಬಗಲಿ, ಸೊಮೇಶ ಗೆಜ್ಜಿ, ವಿನೋದ ದೊಡಮನಿ, ವಿನೋದ ಪೂಜಾರಿ, ಶಿವಾನಂದ ಪಾಟೀಲ, ಯತೀಶ ಕೆ. ನಾಗರತ್ನ ಉಪ್ಪಲದಿನ್ನಿ ಇದ್ದರು.


Spread the love
Subscribe
Notify of

0 Comments
Inline Feedbacks
View all comments