ಮಾ. 29, 30 ಹೈನುಗಾರರಿಂದ  ದಕ್ಷಿಣ ಕನ್ನಡ ಹಾಲು ಒಕ್ಕೂಟದ ಡೈರಿಗಳಲ್ಲಿ ಹಾಲು ಸ್ವೀಕೃತಿ ಇಲ್ಲ

Spread the love

ಮಾ. 29, 30 ಹೈನುಗಾರರಿಂದ  ದಕ್ಷಿಣ ಕನ್ನಡ ಹಾಲು ಒಕ್ಕೂಟದ ಡೈರಿಗಳಲ್ಲಿ ಹಾಲು ಸ್ವೀಕೃತಿ ಇಲ್ಲ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋವಿಡ್ 19 ವೈರಾಣು ಸಮಸ್ಯೆಯಿಂದ ಜನರು ಜೀವ ಭಯದಿಂದ ದಿನ ದೂಡುವಂತಾಗಿದೆ.  ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕೂಡ ನಮ್ಮ ನಂದಿನಿ ಬಳಗದ  ಎಲ್ಲರೂ ಕೂಡ ಜೀವ ಭಯ ತೊರೆದು ಗ್ರಾಹಕರಿಗೆ ಹಾಲು ಪೂರೈಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದೇವೆ.  ದಿನಾಂಕ 27-03-2020 ರ ರಾತ್ರಿ  ಟಿವಿ ಮಾಧ್ಯಮಗಳಲ್ಲಿ ಅಗತ್ಯ ಸೇವೆ ಒಳಗೊಂಡು ದಕ್ಷಿಣ ಕನ್ನಡ ಜಿಲ್ಲೆಯು ಸಂಪೂರ್ಣ ಬಂದ್ ಎಂದು ವರದಿ ಬಿತ್ತರವಾದ ಹಾಗೂ ಪೋಲಿಸ್ ಇಲಾಖೆಯಿಂದ ಅಂಗಡಿ ಮುಂಗಟ್ಟುಗಳನ್ನು ಕಟ್ಟುನಿಟ್ಟಾಗಿ ತೆರೆಯದಂತೆ ಆದೇಶಿಸಿದ ಹಿನ್ನೆಲೆಯಲ್ಲಿ ನಮ್ಮ ಡೀಲರುಗಳ ಹಾಲು ಮಾರಾಟಕ್ಕೆ ತೊಂದರೆಯಾಗಿ ದಿನಾಂಕ 28-03-2020ರ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸಂಪೂರ್ಣ ಸ್ಥಗಿತಗೊಂಡಿರುತ್ತದೆ.

ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತವನ್ನು ಒಕ್ಕೂಟದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸಂಪರ್ಕಿಸಿ ಪರಿಸ್ಥಿತಿ ವಿವರಿಸಲಾಗಿ, ದಿನಾಂಕ 29-03-2020 ರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಿಗದಿತ ಸಮಯದಲ್ಲಿ ಮಾರಾಟ ಮಾಡಲು  ಅವಕಾಶ ಕಲ್ಪಿಸಿರುತ್ತಾರೆ.  ಆದುದರಿಂದ  ಒಕ್ಕೂಟದ ಆಡಳಿತ ಮಂಡಲಿ ಹಾಗೂ ಸಮಸ್ತ ಹೈನು ಬಾಂಧವರ ಪರವಾಗಿ ಅಧ್ಯಕ್ಷರು ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮತ್ತು ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿರುತ್ತಾರೆ.

ದಿನಾಂಕ 22-03-2020 ರಿಂದ ಅವಿಭಜಿತ ಜಿಲ್ಲೆಯಲ್ಲಿ ಕಫ್ರ್ಯೂ ಇರುವುದರಿಂದ ಪ್ರತಿ ನಿತ್ಯ 1.0 ಲಕ್ಷ ಲೀಟರ್ ಹಾಲು ಮಾರಾಟ ಕಡಿಮೆಯಾಗಿದೆ.  ಹಾಲನ್ನು ಪರಿವರ್ತನಾ ಘಟಕಗಳಿಗೆ ಕಳುಹಿಸಿದ್ದು, ಅಲ್ಲಿಯೂ ಸಹಾ ಸಾಮಥ್ರ್ಯ ಮೀರಿ ಹಾಲಿನ ದಾಸ್ತಾನು ಇರುವುದರಿಂದ ತಕ್ಷಣ ಪರಿವರ್ತನೆ ಮಾಡಲು ಸಾಧ್ಯವಾಗಿರುವುದಿಲ್ಲ.   ಆದುದರಿಂದ ಒಕ್ಕೂಟವು ಸಂಘಗಳಿಂದ ಹಾಲನ್ನು ಸ್ವೀಕರಿಸಿ ದಾಸ್ತಾನಿಡಲು ಸಾಧ್ಯವಾಗುತ್ತಿಲ್ಲ.

ಪ್ರಸ್ತುತದ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಅನಿವಾರ್ಯವಾಗಿ ದಿನಾಂಕ 29-03-2020 ಮತ್ತು 30-03-2020ರ ಎರಡೂ ಸರದಿಯಲ್ಲಿ ಹಾಲು ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ನಿತ್ಯದಂತೆ ಮುಂದುವರಿಯಲಿದೆ. ದಿನಾಂಕ 31-03-2020 ರ ಬೆಳಗ್ಗಿನ ಸರದಿಯಿಂದ ಗುಣಮಟ್ಟದ ಹಾಲು ಸಂಗ್ರಹಣೆ ಪುನ:ರಾರಂಭಗೊಳ್ಳಲಿದೆ. ಈ ಬಗ್ಗೆ ಹೈನು ಬಾಂಧವರು ಸಹಕರಿಸುವಂತೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ. ರವಿರಾಜ ಹೆಗ್ಡೆಯವರು   ಪ್ರಕಟಣೆ ಮೂಲಕ ಕೋರಿರುತ್ತಾರೆ.


Spread the love