ಮೆಡಿಕಲ್ ಶಾಪ್ ನಲ್ಲಿ ಯುವತಿಯ ಮೇಲೆ ಹಲ್ಲೆ – ಕಾಂಗ್ರೆಸ್ ಖಂಡನೆ
ಕುಂದಾಪುರ ತಾಲ್ಲೂಕು ಮಾವಿನಕಟ್ಟೆಯಲ್ಲಿ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುವ ಯುವತಿಗೆ ಚಿಲ್ಲರೆ ಕೇಳಿದಳು ಎನ್ನುವ ನೆಪದಲ್ಲಿ ಮಹಿಳೆಯೋರ್ವರು ನಿಂದಿಸಿ ಹಲ್ಲೆ ಮಾಡಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.
ದುಡಿಯುವ ಕೈಗಳಿಗೆ ಶಕ್ತಿ ಕೊಡಬೇಕಾದ ಈ ಕಾಲಘಟ್ಟದಲ್ಲಿ ಇದೊಂದು ದುಡಿಯುವ ಯುವತಿಯರ ಆತ್ಮಸ್ಥೈರ್ಯ ಕುಗ್ಗಿಸುವ ಕೃತ್ಯ. ಚಿಲ್ಲರೆ ಇಲ್ಲಾ ಎಂದು ಹೇಳಿ ತಾನೇ ಚಿಲ್ಲರೆ ತರಲು ತೆರಳಿದ ಯುವತಿಯ ಮೇಲೆ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವುದು ನಾಗರಿಕ ಸಮಾಜ ಒಪ್ಪುವ ಕೃತ್ಯವಲ್ಲಾ. ಸಂಬಳಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ಮಹಿಳೆಯರಿಗೆ ಅವರದ್ದೇ ಆದ ಹಲವು ಜವಾಬ್ದಾರಿ ಹಾಗೂ ಸಮಸ್ಯೆಗಳೂ ಸಹ ಇರುತ್ತದೆ, ಇಂತಹ ದುಡಿಯುವ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ನಾವು ಮಾಡಬೇಕು ವಿನಹ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು. ನಿನ್ನೆಯ ಘಟನೆಯನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಸಮಾಜದಲ್ಲಿ ಮುಂದೆ ಇಂತಹ ಘಟನೆ ಮರುಕಳಿಸದ ರೀತಿಯಲ್ಲಿ ಕ್ರಮವಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.