ಯಶ್ಪಾಲ್ ಸುವರ್ಣ ತೇಜೋವಧೆಗೆ ಯುವ ಕಾಂಗ್ರೆಸ್ ವಿಫಲ ಯತ್ನ – ಬಿಜೆಪಿ ನಗರ ಯುವ ಮೋರ್ಚಾ

Spread the love

ಯಶ್ಪಾಲ್ ಸುವರ್ಣ ತೇಜೋವಧೆಗೆ ಯುವ ಕಾಂಗ್ರೆಸ್ ವಿಫಲ ಯತ್ನ – ಬಿಜೆಪಿ ನಗರ ಯುವ ಮೋರ್ಚಾ

ಉಡುಪಿ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣರ ತೇಜೋವಧೆ ನಡೆಸಲು ಯುವ ಕಾಂಗ್ರೆಸ್ ವಿಫಲ ಯತ್ನ ನಡೆಸುತ್ತಿದೆ ಎಂದು ನಗರ ಬಿಜೆಪಿ ಯುವಮೋರ್ಚಾ ಅದ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಅವರ ಮೇಲೆ ಉಡುಪಿ ಯೂಥ್ ಕಾಂಗ್ರೆಸ್ ಕಪೋಲಕಲ್ಪಿತ ಅರೋಪ ಹೊರಿಸಿ ಪತ್ರಿಕಾಗೋಷ್ಟಿ ನಡೆಸಿ ತನ್ನ ಕೀಳು ಮಟ್ಟದ ರಾಜಕೀಯ ಚಾಳಿಯನ್ನು ಮುಂದುವರೆಸಿದೆ. ನಿಜಕ್ಕೂ ಮೀನುಗಾರಿಕಾ ಫೆಡರೇಶನಿನಲ್ಲಿ ಅವ್ಯವಹರಗಳು ನಡೆದಿದ್ದರೆ ಸೂಕ್ತ ದಾಖಲೆಯಜೊತೆ ಸಂಬಂಧಪಟ್ಟ ಇಲಾಖೆಗಳ ವಿರುದ್ಧ ಕಾನೂನು ಹೋರಾಟ ನಡೆಸಲಿ. ಮಾದ್ಯಮಗಳ ಮುಂದೆ ಸುಳ್ಳು ದಾಖಲೆಗಳನ್ನು ಇಟ್ಟು ಜನರನ್ನು ದಾರಿ ತಪ್ಪಿಸುವಪ್ರಯತ್ನ ಖಂಡನೀಯ.

ಯಶಪಾಲ್ ಸುವರ್ಣ ಅವಧಿಯಲ್ಲಿ ಮೀನುಗಾರಿಕಾ ಫೆಡರೇಶನ್ ದಾಖಲೆಯ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದೆ. ಸುಮಾರು 85 ಸಾವಿರ ಸದಸ್ಯರನ್ನುಹೊಂದಿರುವ ಈ ಸಂಸ್ಥೆ 250 ಕೋಟಿ ವಹಿವಾಟು ನಡೆಸುತ್ತಿದೆ. 5000 ಕುಟುಂಬಗಳಿಗೆ ಆರೋಗ್ಯ ವಿಮೆ, 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿ ವೇತನ, ಹಸಿಮೀನುಮಾರಾಟಗಾರ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಮೀನುಗಾರ ಮಹಿಳೆಯರ ಸ್ವಸಹಾಯ ಗುಂಪು ರಚನೆ, ಹೀಗೆ ಹತ್ತು ಹಲವು ಸಮಾಜಮುಖಿಕಾರ್ಯಗಳನ್ನು ಹಮ್ಮಿಕೊಂಡು ಕಾರ್ಯಾಚರಿಸುತ್ತಿದೆ. ಈ ಸಾಧನೆಗಾಗಿ ರಾಷ್ಠ್ರೀಯ ಅತ್ಯುತ್ತಮ ಮೀನುಗಾರಿಕಾ ಸಹಕಾರಿ ಸಂಸ್ಥೆ ಎಂಬ ಪ್ರಶಸ್ತಿಯೂ ಬಂದಿರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಫೆಡರೇಶನ್ ಗಳಿಸಿರುವ ಯಶಸ್ಸು ಕೆಲ ರಾಜಕೀಯ ವಿರೋಧಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ಮೀನುಗಾರಿಕಾ ಫೆಡರೇಶನ್ ಚುನಾವಣೆಯೂ ಹತ್ತಿರ ಬರುತ್ತಿದ್ದು ಪ್ರತೀ ಬಾರಿ ಚುನಾವಣೆ ನಡೆದಾಗಲೂ ಈ ಪೊಳ್ಳು ಆರೋಪವನ್ನು ವಿರೋಧಿಗಳು ಯಶ್ಪಾಲ್ ಸುವರ್ಣ ವಿರುದ್ಧ ಮಾಡುತ್ತಲೇ ಬಂದಿದ್ದಾರೆ. ಆದರೆ ಈವರೆಗೂ ಯಾರೂ ಕೂಡ ತಮ್ಮ ಆರೋಪಗಳಿಗೆ ಸೂಕ್ತ ದಾಖಲೆ ಒದಗಿಸುವ ಪ್ರಯತ್ನ ಮಾಡಿಲ್ಲ. ಕಾನೂನು ಹೋರಾಟ ನಡೆಸಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಸಮ್ಮಿಶ್ರ ಸರಕಾರವಿದ್ದು ಅವ್ಯವಹಾರ ನಡೆದಿದೆ ಎನ್ನಲಾದ ಅವಧಿಯಲ್ಲಿ ನಿಮ್ಮದೇ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿತ್ತು. ಫೆಡರೇಶನ್ ಆಡಳಿತವನ್ನು ನೋಡಿಕೊಳ್ಳುವ ಅಧಿಕಾರಿಗಳು ಮೀನುಗಾರಿಕಾ ಇಲಾಖೆಯಿಂದಲೇ ನೇಮಕವಾಗಿರುತ್ತಾರೆ. ಫೆಡರೇಶನಿನ ಎಲ್ಲ ಕಾರ್ಯಾಭಾರಗಳನ್ನು ಈ ಅಧಿಕಾರಿಗಳೇ ನೋಡಿಕೊಳ್ಳುತ್ತಾರೆ. ಚುನಾಯಿತ ಅಧ್ಯಕ್ಷ ಮತ್ತು ಸದಸ್ಯರು ಯಾವುದೇ ರೀತಿಯಲ್ಲಿ ಅಧಿಕಾರಿಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿರುವುದಿಲ್ಲ.

ಕೇವಲ ಯಶಪಾಲ್ ಸುವರ್ಣ ಅವರ ತೇಜೋವಧೆ ಮಾಡುವ ಭರದಲ್ಲಿ ಯುವ ಕಾಂಗ್ರೆಸ್ ತನ್ನ ಸರಕಾರದ ಅಧಿಕಾರಿಗಳನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಹೊರಟಿದೆ. ಅವ್ಯವಹಾರ ನಡೆದಿರುವುದು ಹೌದಾದರೆ ಸರಕಾರ ತನ್ನ ಅಧಿಕಾರಿಗಳ ಮೇಲೆ ಯಾಕೆ ಈವರೆಗೂ ಕ್ರಮ ಕೈಗೊಂಡಿಲ್ಲ. ನಿಜಕ್ಕೂ ಕಾಂಗ್ರೆಸಿಗರಿಗೆ ಮೀನುಗಾರಿಕಾ ಫೆಡರೇಶನ್ ಮೇಲೆ ಕಾಳಜಿ ಇದ್ದರೆ ಅವರು ಚುನಾವಣೆಯವರೆಗೆ ಕಾದು ಪತ್ರಿಕಾಗೋಷ್ಟಿನಡೆಸುತ್ತಿರಲಿಲ್ಲ. ಇದರ ಹಿಂದೆ ರಾಜಕೀಯ ಸಂಚು ಅಡಗಿದ್ದು ನಮ್ಮ ನಾಯಕರ ಮೇಲೆ ಸುಳ್ಳು ಆರೋಪ ಹೊರಿಸಲು ಮುಂದಾದವರ ವಿರುದ್ಧ ಕಾನೂನಾತ್ಮಕಕ್ರಮ ಕೈಗೊಳ್ಳಿಲಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.

ಫೆಡರೇಶನ್ ಮೇಲೆ ಅವ್ಯವಹಾರದ ಆರೋಪ ಹೊರಿಸಿರುವ ಕೆಲವರು ಫೆಡರೇಶನಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದವರಾಗಿದ್ದು, ಇವರ ಭ್ರಷ್ಟಾಚಾರವನ್ನು ಮುಂದಿನ ದಿನಗಳಲ್ಲಿ ನಾವು ಬಹಿರಂಗಗೊಳಿಸಲಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love