‘ಲಾಕ್ಡೌನ್ ಸಮಯದಲ್ಲಿ ವಿಜ್ಞಾನ’ – ಕೋವಿದ್ 19 ಸಂದರ್ಭದಲ್ಲಿ ಭಾರತದಲ್ಲಿ ಹೊಸ ಜಿಗಿಯುವ ಜೇಡ ಪತ್ತೆ

Spread the love

‘ಲಾಕ್ಡೌನ್ ಸಮಯದಲ್ಲಿ ವಿಜ್ಞಾನ’ – ಕೋವಿದ್ 19 ಸಂದರ್ಭದಲ್ಲಿ ಭಾರತದಲ್ಲಿ ಹೊಸ ಜಿಗಿಯುವ ಜೇಡ ಪತ್ತೆ

ಮಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಪ್ರಪಂಚದಾದ್ಯಂತ ವ್ಯಾಪಕವಾದ ಲಾಕ್‍ಡೌನ್ ಇದ್ದರೂ ಕೂಡ ಮುಂಬಯಿ, ಈಶಾನ್ಯ ಭಾರತ ಮತ್ತು ಯುಎಸ್‍ಎ ಮೂಲದ ಸಂಶೋಧಕರು ಭಾರತದ ಹೊಸ ಜಿಗಿಯುವ ಜೇಡ (ಜಂಪ್ಪಿಂಗ್ ಸ್ಪೈಡರ್) ಪತ್ತೆ ಆಗಿರುವುದನ್ನು ವರದಿ ಮಾಡಿದ್ದಾರೆ.

ಥಿಯಾನಿಯಾ ಸಿಎಫ್. ಸಬೊಪ್ರೆಸಾ ಜಾತಿಯ ಜೇಡರ ಪತ್ತೆ ಬಗ್ಗೆ ಪ್ರಖ್ಯಾತ ಅಂತರರಾಷ್ಟ್ರೀಯ ವಿಜ್ಞಾನ ಜರ್ನಲ್ ‘ಪೆಕ್ಹಾಮಿಯಾ’ದಲ್ಲಿ ಪ್ರಕಟವಾಗಿದೆ. ‘ಪೆಕ್ಹಾಮಿಯಾ’ ಜಂಪಿಂಗ್ ಜೇಡಗಳ ಅಧ್ಯಯನಕ್ಕೆ ಮಾತ್ರ ಮೀಸಲಾಗಿರುವ ವಿಶ್ವದ ಏಕೈಕ ವಿಜ್ಞಾನ ಜರ್ನಲ್ ಮತ್ತು ಈ ವಿಜ್ಞಾನ ಪ್ರಕಾಶನದಲ್ಲಿ ಅದ್ಭುತ ಜೇಡ ಪ್ರಭೇದಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ಸಂಶೋಧನೆಗಳನ್ನು ಪ್ರಕಟಿಸುತ್ತದೆ.

ಈ ಪ್ರಭೇದವನ್ನು ಮೊದಲು ತ್ರಿಪುರ ಸರಕಾರದ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಅಟನು ಚಕ್ರವರ್ತಿ ಅವರು ನಗರ ವನ್ಯಜೀವಿ ತೋಟದಲ್ಲಿ ಗಮನಿಸಿ ಛಾಯಾಚಿತ್ರಗಳನ್ನು ತೆಗೆದಿದ್ದರು. ಅನಂತರ ಮುಂಬಯಿ ಮೂಲದ ನೈಸರ್ಗಿಕವಾದಿ ಮತ್ತು ಅರಾಕ್ನಾಲಜಿಸ್ಟ್ ಜಾವೇದ್ ಅಹ್ಮದ್ ಮತ್ತು ಜಂಪಿಂಗ್ ಜೇಡಗಳ ಅಧ್ಯಯನದಲ್ಲಿ ಪರಿಣತಿ ಹೊಂದಿರುವ ಯುಎಸ್ ಮೂಲದ ಅರಾಕ್ನಾಲಜಿಸ್ಟ್ ಡಾ. ಡೇವಿಡ್ ಇ. ಹಿಲ್ ಅವರೊಂದಿಗೆ ಸಂಶೋಧನಾ ವರದಿ ತಯಾರಿಸಲು ಅರಣ್ಯಾಧಿಕಾರಿ ಕೈಜೋಡಿಸಿದರು.

ಆವಿಷ್ಕಾರವು ಮಹತ್ವದ್ದಾಗಿದೆ ಏಕೆಂದರೆ ಇದನ್ನು ಕಾಡಿನ ಒಳಭಾಗದಲ್ಲಿ ಪತ್ತೆಯಾಗದೆ ನಗರ ವನ್ಯಜೀವಿ ಉದ್ಯಾನದಲ್ಲಿ ಕಂಡುಬಂದಿದೆ.

ನಿರಂತರವಾಗಿ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಕ್ಷಿಪ್ರ ನಗರೀಕರಣದ ನೇರ ಪರಿಣಾಮವಾಗಿ ನಗರ ವನ್ಯಜೀವಿಗಳ ವಿದ್ಯಮಾನವು ಜಾಗತಿಕವಾಗಿ ಉಷ್ಣವಲಯದ ದೈತ್ಯ ಚಿಟ್ಟೆಗಳು ಮತ್ತು ಅಳಿವಿನಂಚಿನಲ್ಲಿರುವ ಗಿಡುಗಗಳಿಂದ ಹಿಡಿದು ಚಿರತೆಗಳು ಮತ್ತು ಪರ್ವತ ಸಿಂಹಗಳು (ಪೂಮಾ) ವರೆಗಿನ ಹಲವಾರು ಪ್ರಭೇದಗಳ ಜೀವಿಗಳ ಮೇಲೆ ನೇರ ದುಷ್ಪರಿಣಾವಾಗುತ್ತಿದೆ.

‘ಜಾಗತಿಕ ಹವಾಮಾನ ಬದಲಾವಣೆ’ ಮತ್ತು ‘ಜೀವ ಸಂಕುಲ ನಾಶ’ ಎಂಬ ಚರ್ಚೆಯ ನಡುವೆಯು ನಮ್ಮ ನಗರಗಳಲ್ಲಿ ಮತ್ತು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನು ಕೂಡ ಇರುವ ನಗರ ಜೀವ ವೈವಿಧ್ಯಮಯ ಪ್ರದೇಶಗಳು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಹೆಚ್ಚು ಮಹತ್ವದ ಪಾತ್ರ ವಹಿಸಿದ್ದರೂ ಅವುಗಳ ಸಂರಕ್ಷಣೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಇಂತಹ ಜೀವವೈವಿಧ್ಯ ಪ್ರದೇಶಗಳಲ್ಲಿ ಇರುವ ಜಾಗತಿಕವಾಗಿ ಅಳಿವಿನ ಅಂಚಿಗೆ ಒಳಗಾಗಿರುವ ಭೂಮಂಡಲದ ಮಹತ್ವದ ಅಕಶೇರುಕಗಳು ಕಂಡುಬರುತ್ತಿದ್ದರೂ ಸಂರಕ್ಷಣೆ ಮತ್ತು ಸಂಶೋಧನಾ ಕಾರ್ಯಗಳು ಆಗುತ್ತಿಲ್ಲ.

ಮಂಗಳೂರು ಮೂಲದ ಶಸ್ತ್ರಚಿಕಿತ್ಸಕ ಡಾ.ಕೃಷ್ಣ ಮೋಹನ್ ಅವರು ಪರಿಣಿತ ನೈಸರ್ಗಿಕ ಕಾರ್ಯಕರ್ತ ಮತ್ತು ವನ್ಯಜೀವಿ ಸಂಶೋಧಕರಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಜತೆಗೆ ಅವರು ನುರಿತ ವನ್ಯಜೀವಿ ಛಾಯಾಗ್ರಾಹಕರಾಗಿಯು ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಅರಾಕ್ನಾಲಜಿಸ್ಟ್ ಜಾವೇದ್ ಅಹ್ಮದ್ ಅವರೊಂದಿಗೆ ದೇಶದ ಕೆಲವು ಮಹತ್ವದ ವನ್ಯಜೀವಿ ಆವಿಷ್ಕಾರಗಳ ಬಗ್ಗೆ ಸಹಕರಿಸಿದ್ದಾರೆ. ಅಪರೂಪದ ಜಿಗಿತದ ಜೇಡಗಳಾದ ಪೆÇರ್ಟಿಯಾ ಅಲ್ಬಿಮಾನಾ, ಬ್ರೆಟ್ಟಸ್ ಸಿಂಗ್ಯುಲಟಸ್ ಮತ್ತು ನಿಯೋಬ್ರೆಟಸ್ ಇತ್ಯಾದಿ ಅವುಗಳಲ್ಲಿ ಸೇರಿದೆ.

ಭಾರತವು ಜೀವವೈವಿಧ್ಯತೆಯ ಗಣಿಯಾಗಿದ್ದರೂ ಇನ್ನೂ ಕೂಡ ಹೆಚ್ಚಿನ ಪ್ರಮಾಣದ ದಾಖಲೀಕರಣ ನಡೆದಿಲ್ಲ. ದೇಶದ ಬಹುಪಾಲು ಜೇಡ ಪ್ರಬೇಧಗಳ ಸರಿಯಾದ ಅಧ್ಯಯನ ಮಾಡಲಾಗಿಲ್ಲ ಅಥವಾ ಜೀವವಿಜ್ಞಾನ ಪ್ರಪಂಚಕ್ಕೆ ತಿಳಿದುಬಂದಿಲ್ಲ.

ಅತ್ಯಂತ ಅಪಾಯಕಾರಿ ವೇಗದಲ್ಲಿ ನಮ್ಮ ಹಸಿರು ವಲಯಗಳನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ಇಂತಹ ಜೀವಗಳ ಆವಾಸಸ್ಥಾನಗಳು ಶಾಶ್ವತವಾಗಿ ನಾಶವಾಗಿ ಹೋಗುವ ಮೊದಲು, ನಮ್ಮ ಜೀವವೈವಿಧ್ಯತೆಯನ್ನು ನಾವು ಸಾಧ್ಯವಾದಷ್ಟು ದಾಖಲಿಸಲು ಮತ್ತು ವರದಿ ಮಾಡಲು ಪ್ರಯತ್ನಿಸುವುದು ಅನಿವಾರ್ಯವಾಗಿದೆ. ಪ್ರಪಂಚದಾದ್ಯಂತದ ಜನಸಂಖ್ಯೆ ಪ್ರಮಾಣ ಹೆಚ್ಚಳ, ಅತಿಯಾದ ನಗರೀಕರಣದ ವೇಗ ಇಂತಹ ಜೀವವೈವಿಧ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಕಾಡುಗಳಂತಹ ಸಂರಕ್ಷಿತ ಪ್ರದೇಶಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದ್ದು, ನಗರ ಪ್ರದೇಶಗಳಲ್ಲಿ ಇರುವ ಹಸಿರು ಪ್ರದೇಶಗಳಾದ ಉದ್ಯಾನವನಗಳು, ನಗರ ವನ್ಯಜೀವಿ ಪಾರ್ಕುಗಳು ಮಾತ್ರವಲ್ಲದೆ ಕೃಷಿ ಭೂಮಿ ರೂಪದಲ್ಲಿ ಇರುವ ಹಸಿರುವ ಪ್ರದೇಶಗಳಲ್ಲಿ ಕೂಡ ಜೀವವೈವಿಧ್ಯ ಸಂರಕ್ಷಣೆಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ಕಡೆಗಣಿಸಬಾರದು ಎಂದು ಅವರು ಹೇಳುತ್ತಾರೆ.


Spread the love