ವರುಣ್ ಸಿನಿ ಕ್ರಿಯೇಷನ್ಸ್ ನಿರ್ಮಾಣದ ಕನ್ನಡ ಚಲನಚಿತ್ರ ‘ ನಿಮ್ಮೆಲ್ಲರ ಆಶೀರ್ವಾದ’ ಶಿರ್ಷಿಕೆ ಬಿಡುಗಡೆ

Spread the love

ವರುಣ್ ಸಿನಿ ಕ್ರಿಯೇಷನ್ಸ್ ನಿರ್ಮಾಣದ ಕನ್ನಡ ಚಲನಚಿತ್ರ ‘ ನಿಮ್ಮೆಲ್ಲರ ಆಶೀರ್ವಾದ’ ಶಿರ್ಷಿಕೆ ಬಿಡುಗಡೆ

ಉಡುಪಿ: ವರುಣ್ ಸಿನಿ ಕ್ರಿಯೇಷನ್ಸ್ ನಿರ್ಮಾಣದ ಮೊದಲ ಕನ್ನಡ ಚಲನಚಿತ್ರ ‘ ನಿಮ್ಮೆಲ್ಲರ ಆಶೀರ್ವಾದ’ ಶಿರ್ಷಿಕೆ ಬಿಡುಗಡೆ ಮತ್ತು ಚಿತ್ರ ತಂಡದ ಪರಿಚಯ ಕಾರ್ಯಕ್ರಮ ಉಡುಪಿಯ ಪ್ರೆಸ್ ಕ್ಲಬ್ಬಿನಲ್ಲಿ ಜರುಗಿತು.

ದಕ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ, ಬಡಗಬೆಟ್ಟು ಕೋ-ಅಪರೇಟಿವ್ ಸೊಸೈಟಿ ಇದರ ಜನರಲ್ ಮ್ಯಾನೇಜರ್ ಇಂದ್ರಾಳಿ ಜಯಕರ ಶೆಟ್ಟಿ, ಸರ್ವದಾ ಡಿಸ್ಟಿಲರಿ ಇದರ ಮ್ಹಾಲಕರಾದ ಶ್ರೀನಿವಾಸ್ ಅವರು ಟೈಟಲ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಚಿತ್ರದ ನಾಯಕ ನಟಿಯಾಗಿ ಭಿನ್ನ ಸಿನಿಮಾ ಖ್ಯಾತಿಯ ಪಾಯಲ್ ರಾಧಾಕೃಷ್ಣ ಅಭಿನಯಿಸಿದ್ದಾರೆ. ನಾಯಕ ನಟನಾಗಿ ಪ್ರತೀಕ್ ಶೆಟ್ಟಿ ಹೊಸ ಪರಿಚಯ ಆಗಲಿದ್ದಾರೆ. ಚಿತ್ರರಂಗದ ಹಿರಿಯ ಮತ್ತು ಅನುಭವಿ ನಟರುಗಳಾದ ಎಂ ಎನ್ ಲಕ್ಷ್ಮೀದೇವಿ, ಅರವಿಂದ ಬೋಳಾರ್, ಗೋವಿಂದೇಗೌಡ, ಸ್ವಾತಿ ಗುರುದತ್, ದಿನೇಶ್ ಮಂಗಳೂರು ಮತ್ತಿತರು ತಾರಾಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿಮ್ಮೆಲ್ಲರ ಆಶೀರ್ವಾದ ಚಲನಚಿತ್ರವು ಕೌಟಂಬಿಕ ಕಥಾಹಂದರ ಹೊಂದಿದ್ದು, ಪೊಲೀಸ್ ಅಧಿಕಾರಿ ಒಬ್ಬನ ವೃತ್ತಿ ಬದುಕು ಮತ್ತು ವೈಯುಕ್ತಿಕ ಬದುಕಿನ ದಿನಚರಿಯನ್ನು ವಿಭಿನ್ನವಾಗಿ ತೆರೆದಿಡುವಂತಿದೆ. ಸರಳ ಮತ್ತು ಸಹಜ ಜೀವನವನ್ನು ಕರಾವಳಿಯ ಹಿನ್ನಲೆಯಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.

ನಿರ್ಮಾಪಕ ವರುಣ್ ಹೆಗ್ಡೆ ‘ ನಿಮ್ಮೆಲ್ಲರ ಆಶೀರ್ವಾದ’ ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಯುವ ನಿರ್ದೇಶಕ ರವಿಕಿರಣ್ ಚಿತ್ರವನ್ನು ರಚಿಸಿ ನಿರ್ದೇಶಿಸಿದ್ದಾರೆ.

ಯುವ ನಿರ್ದೇಶಕ ರವಿಕಿರಣ್ ಮಾತನಾಡಿ ಚಿತ್ರಕ್ಕೆ ಸರವಣನ್ ಜಿ.ಎನ್. ಛಾಯಾಗ್ರಹಣ ಮಾಡಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ರೂಪೆಂದ್ರ ಆಚಾರ್ ಕಲಾ ನಿರ್ದೇಶನದ ಕೆಲಸ ಮಾಡಿದ್ದಾರೆ. ಸುನಾದ್ ಗೌತಮ್ ಸಂಗೀತ ಮತ್ತು ವಿವೇಕ್ ಚಕ್ರವರ್ತಿ ಹಿನ್ನಲೆ ಸಂಗೀತ ಚಿತ್ರದ ಜೊತೆಯಾಗಲಿದೆ. ರಾಜ್ಯ ಪ್ರಶಸ್ತಿ ವಿಜೇತ ಸಂಕಲನಕಾರ, ಸುರೇಶ್ ಅರುಮುಗಂ ಎಡಿಟಿಂಗ್ ಕೆಲಸ ಚಿತ್ರದ ಅಂದ ಹೆಚ್ಚಿಸಲಿದೆ.

ಲಾಕ್ ಡೌನ್ ಅವಧಿಗೂ ಮೊದಲು ಚಲನ ಚಿತ್ರದ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದವು. ಕರಾವಳಿಯ ವಿವಿಧ ಭಾಗಗಳ್ಲಲಿ ಚಿತ್ರದ ಶೂಟಿಂಗ್ ನಡೆಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸರ್ಕಾರದ ನಿಯಮಾನುಸಾರ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ನಿರ್ಮಾಪಕ ವರುಣ್ ಹೆಗ್ಡೆ ಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು.

 


Spread the love