ವಲಸೆ, ಕೂಲಿ ಕಾರ್ಮಿಕರನ್ನು ತವರಿಗೆ ಕಳುಹಿಸಿದ ಉಡುಪಿ ಜಿಲ್ಲಾಡಳಿತ

Spread the love

ವಲಸೆ ಕೂಲಿ ಕಾರ್ಮಿಕರನ್ನು ತವರಿಗೆ ಕಳುಹಿಸಿದ ಉಡುಪಿ ಜಿಲ್ಲಾಡಳಿತ

ಉಡುಪಿ: ರಾಜ್ಯದ ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ ಹಾಗೂ ಇತರ ಜಿಲ್ಲೆಗಳ ಸುಮಾರು 1000 ಕ್ಕೂ ಅಧಿಕ ವಲಸೆ ಕೂಲಿ/ ಕಟ್ಟಡ ಕಾರ್ಮಿಕರನ್ನು ಉಡುಪಿ ಜಿಲ್ಲಾಡಳಿತವು ಶನಿವಾರ ಅವರ ತವರಿಗೆ ಕೆಎಸ್ಆರ್ಟಿಸಿ ಬಸ್ ಮೂಲಕ ಕಳುಹಿಸಿಕೊಟ್ಟಿದೆ.

ಕೂಲಿಯನ್ನು ಅರಸಿ ಉಡುಪಿ ಜಿಲ್ಲೆಗೆ ಬಂದಿದ್ದ ಈ ಕೂಲಿ ಕಾರ್ಮಿಕರು ಕೋವಿಡ್-19ಲಾಕ್ಡೌನ್ ಹಿನ್ನೆಲೆಯಲ್ಲಿ ತಮ್ಮ ಮೂಲ ಸ್ಥಳಕ್ಕೆ ಕಾಲ್ನಡಿಗೆಯಲ್ಲೇ ಹೋಗುತ್ತಿರುವುದನ್ನು ಕಂಡ ಜಿಲ್ಲಾಡಳಿತ ಕಾರ್ಮಿಕರನ್ನೆಲ್ಲಾ ತನ್ನ ವಶಕ್ಕೆ ತೆಗೆದುಕೊಂಡು ನಗರದ ವಿವಿಧ ಕಡೆಯಲ್ಲಿ ಆಶ್ರಯ ನೀಡಿ ನಿರಾಶ್ರಿತರಿಗೆ ಊಟ, ವಸತಿ ಸೌಲಭ್ಯವನ್ನು ಕಲ್ಪಿಸಿತ್ತು.

ಶುಕ್ರವಾರ ವಲಸೆ ಕಾರ್ಮಿಕರನ್ನು ಹಾಗೂ ಕೂಲಿ ಕಾರ್ಮಿಕರನ್ನು ರಾಜ್ಯದೊಳಗೆ ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ. ಸ್ಟಾಂಡರ್ಡ್ ಆಪರೇಂಟಿಂಗ್ ಪ್ರೋಟೋಕಾಲ್ ಅನ್ವಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ನೀಡಿದ್ದರು.

ಅದರಂತೆ ಜಿಲ್ಲೆಯ ವಿವಿಧ ನಿರಾಶ್ರಿತ ಶಿಬಿರಗಳಲ್ಲಿ ದ್ದ ಕಾರ್ಮಿಕರನ್ನು ಸರ್ಕಾರಿ ಬಸ್ಸುಗಳ ಮೂಲಕ ಅವರವರ ಜಿಲ್ಲೆಗೆ ಜಿಲ್ಲಾಡಳಿತ ಕಳುಹಿಸಿಕೊಟ್ಟಿದೆ. ಕಾರ್ಮಿಕರಿಗೆ ಜಿಲ್ಲಾಡಳಿ ಸ್ಯಾನಿಟೈಸರ್, ಮಾಸ್ಕ್, ಫುಡ್ ಕಿಟ್ ನೀಡಿ ಬೀಳ್ಕೊಟ್ಟಿದ್ದು ತಮ್ಮ ಊರುಗಳಿಗೆ ತೆರಳುವ ವಲಸಿಗರ ಮೊಗದಲ್ಲಿ ಮಂದಹಾಸ ಮೂಡಿತ್ತು.

ಈವರೆಗೆ ಮೂರು ಹೊತ್ತು ಊಟೋಪಚಾರ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತ ಶ್ರಮ ನೆನೆದು ಭಾವುಕರಾದ ಕಾರ್ಮಿಕರು ಜಿಲ್ಲಾಡಳತದ ಸೇವೆಗೆ ಧನ್ಯವಾದ ಸಮರ್ಪಿಸಿದರು.


Spread the love