ವಿಚಾರವಾದಿಗಳ ಕೊಲೆಯಿಂದ ವಿಚಾರದ ಕೊಲೆ ಸಾಧ್ಯವೆ?

Spread the love

ವಿಚಾರವಾದಿಗಳ ಕೊಲೆಯಿಂದ ವಿಚಾರದ ಕೊಲೆ ಸಾಧ್ಯವೆ?

ಮಂಗಳೂರಿನಲ್ಲಿ ಸೆಪ್ಟೆಂಬರ್ 16ರಂದು ನಡೆದ ಸಂವಾದ

ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರ ಆಯೋಜಿಸಿ, ಸೆಪ್ಟೆಂಬರ್ 16ರ ಸಂಜೆ ಡಾನ್ ಬಾಸ್ಕೋ ಮಿನಿ ಹಾಲ್‍ನಲ್ಲಿ ವಿಚಾರವಾದಿಗಳ ಕೊಲೆಯಿಂದ ವಿಚಾರದ ಕೊಲೆ ಸಾಧ್ಯವೆ ಎಂಬ ತುಳು ಸಂವಾದ ಕಾರ್ಯಕ್ರಮ ನಡೆಯಿತು.

ಸಂಚಾಲಕ ಪೇರೂರು ಜಾರು ಮಾತನಾಡಿ, ಗ್ರೀಕ್ ವಿಚಾರವಾದಿ ಸಾಕ್ರೆಟಿಸರಿಗೆ ವಿಷ ಕುಡಿಯುವ ಕೊಲೆ ಶಿಕ್ಷೆ ನೀಡಿತು ಅಲ್ಲಿನ ಆಡಳಿತ. ರಾಮನು ಬ್ರಾಹ್ಮಣರಿಗಾಗಿ ಶಂಭೂಕನನ್ನು ಕೊಂದುದು, ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ್ದು, ಪೈಗಂಬರರು ಮದೀನಾಕ್ಕೆ ಹೋಗಬೇಕಾಗಿ ಬಂದುದು ಇವು ಯಾವುದರಿಂದಲೂ ವಿಚಾರ ಸಾಯಲೇ ಇಲ್ಲ. ಭಾರತದಲ್ಲಿ ಚಾರ್ವಾಕರಿಗೆ ದೊರಕಿದ್ದು ಪ್ರತಿವಾದಕಿಂತ ಕೊಲೆಗಳ ಸರಣಿಯೆ. ಕೊಲೆಗಳು ಕ್ಷುಲ್ಲಕ ಕಾರಣದಿಂದ ಅತಿ ಗಹನ ವಿಷಯಗಳವರೆಗೆ ನಡೆಯುತ್ತದೆ. ಅಮೆರಿಕದ ಅಧ್ಯಕ್ಷರಾಗಿದ್ದ ಲಿಂಕನ್, ಕೆನಡಿಯವರನ್ನು ಜನಪರ ನಿಲುವನ್ನು ಅಳಿಸಲೆಂದೇ ಕೊಲೆ ಮಾಡಲಾಯಿತು. ಇಂದಿರಾ, ರಾಜೀವರದು ಭಾರತದಲ್ಲಿ ರಾಜಕೀಯ ಪ್ರೇರಿತ ಉಗ್ರರಿಂದಾದ ಕೊಲೆ. ಇಂಥ ಕೊಲೆ ಪಟ್ಟಿ ಬಹಳ ದೊಡ್ದದು.

ಇತ್ತೀಚಿನ ವರುಷಗಳಲ್ಲಿ ಪನ್ಸಾರೆ, ದಾಬೋಲ್ಕರ್, ಕಲಬುರ್ಗಿ ಮತ್ತು ಇತ್ತೀಚೆಗೆ ನಡೆದ ಗೌರಿ ಲಂಕೇಶ್‍ರ ಕೊಲೆಯು ಭಾರತದ ಕುತ್ಸಿತ ಕೋಮುವಾದಿಗಳು ನಡೆಸಿದ ಕೊಲೆಗಳೆಂಬುದು ಮೇಲುನೋಟಕ್ಕೇ ತಿಳಿಯುವುದಾಗಿದೆ. ಈ ನಾಲ್ಕೂ ಕೊಲೆಗಳು ಹೆಚ್ಚು ಕಡಿಮೆ ಒಂದೇ ಬಗೆಯಲ್ಲಿ ನಡೆದಿವೆ ಮತ್ತು ಸತ್ಯದ ಬಾಯಿ ಮುಚ್ಚಿಸಲು ಹಿಂದೂ ಪರ ಶಕ್ತಿಗಳು ಇದರ ಹಿಂದಿವೆ ಎನ್ನುವುದೂ ಬಹುಪಾಲು ಖಚಿತವಾಗಿದೆ. ಆದರೆ ಯಾರ ಕೊಲೆಯಿಂದಲೂ ಸತ್ಯದ ಇಲ್ಲವೇ ವಿಚಾರದ ಕೊಲೆ ಸಾಧ್ಯವಿಲ್ಲ. ಸೂರ್ಯನಿಗೆ ಮೋಡ ತುಸು ಮರೆಯೇ ಹೊರತು ನಿರಂತರ ಅಲ್ಲ. ಇಂಥ ಕೊಲೆಗಳು ವಿಚಾರವಾದಕ್ಕೆ ಮತ್ತಷ್ಟು ಸಾಣೆ ಹಿಡಿದು ಪ್ರಖರಗೊಳಿಸುವುದು ಖಚಿತ. ವಿಚಾರಗಳು ಕೊಲೆಯಾಗುವವಲ್ಲ ಆ ನಿಟ್ಟಿನಲ್ಲಿ ಕೊಲೆಗಳನ್ನು ಖಂಡಿಸುವುದರ ಜೊತೆಗೆ ಅಹಿಂಸೆಯ ಬೆಳಕು ತೋರುವತ್ತ ಹೆಜ್ಜೆಯಿಡುವುದು ನಮ್ಮೆಲ್ಲರ ಅಗತ್ಯ ಎಂದು ಅವರು ಹೇಳೀದರು.

ಪ್ರವೀಣ್ ಶೆಟ್ಟಿ, ರವಿ ಪುತ್ತೂರ, ನವೀನ್ ಸನಿಲ್, ಮೂಲ್ಕಿ ನವೀನ್ ಮೊದಲಾದವರು ತಮ್ಮ ಅಭಿಪ್ರಾಯ ಮಂಡಿಸಿದರು.


Spread the love