ವ್ಯಾನ್ ಮತ್ತು ಸ್ಕೂಟಿ ನಡುವೆ ಅಪಘಾತ : ಸ್ಕೂಟಿ ಸವಾರ ಮೃತ್ಯು

Spread the love

ವ್ಯಾನ್ ಮತ್ತು ಸ್ಕೂಟಿ ನಡುವೆ ಅಪಘಾತ : ಸ್ಕೂಟಿ ಸವಾರ ಮೃತ್ಯು

ಸುಳ್ಯ : ರಸ್ತೆಯಲ್ಲಿ ವ್ಯಾನ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ.ಗಂಭೀರ ಗಾಯಗೊಂಡ ಸ್ಕೂಟಿ ಸವಾರ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಬೆಳ್ಳಾರೆ ಸಮೀಪದ ಕಾವಿನಮೂಲೆಯಲ್ಲಿ ನಡೆದಿದೆ.

ಮೃತಪಟ್ಟ ಸ್ಕೂಟಿ ಸವಾರರನ್ನು ಕೊಲ್ಲಮೊಗ್ರ ಚಾಂತಳದ ಚಿದಾನಂದ (40) ಎಂದು ತಿಳಿದು ಬಂದಿದೆ.

ಕನಕಮಜಲಿನಲ್ಲಿ ತನ್ನ ಸಂಬಂಧಿಕರ ಮನೆಯ ಗೃಹಪ್ರವೇಶ ಪೂರ್ವ ಕಾರ್ಯಕ್ರಮಕ್ಕೆ ಸೋಮವಾರ ಹೋದವರು ಇಂದು ವಾಪಾಸು ಮನೆಗೆ ತೆರಳುತ್ತಿದ್ದಾಗ ಕಾವಿನಮೂಲೆಯಲ್ಲಿ ಆಗ ಈ ಘಟನೆ ನಡೆದಿದೆ.

ವ್ಯಾನ್ ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿತ್ತು. ಹಾಗೂ ಚಿದಾನಂದ ಅವರು ಸೋಣಂಗೇರಿ ಕಡೆಯಿಂದ ಬೆಳ್ಳಾರೆಗೆ ಹೋಗುತ್ತಿದ್ದರು. ಢಿಕ್ಕಿಯ ಪರಿಣಾಮ ಸ್ಕೂಟಿ ಸವಾರ ಚಿದಾನಂದ ಅವರ ತಲೆಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.

ಸ್ಕೂಟಿಯ ಹಿಂಬದಿಯಲ್ಲಿ ಕುಳಿತಿದ್ದ ವಿನೀತ್ ಎಂಬವರು ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love