ಶಾಸಕ ಸುನೀಲ್ ಕುಮಾರ್ ದೊಣ್ಣೆ ನಾಯಕ ಅಲ್ಲ ಎಂಬ ಅರಿವು ಮಹೇಶ್ ಠಾಕೂರ್ ಗೆ ಇರಲಿ: ರಮೇಶ್ ಕಾಂಚನ್ 

Spread the love

ಶಾಸಕ ಸುನೀಲ್ ಕುಮಾರ್ ದೊಣ್ಣೆ ನಾಯಕ ಅಲ್ಲ ಎಂಬ ಅರಿವು ಮಹೇಶ್ ಠಾಕೂರ್ ಗೆ ಇರಲಿ: ರಮೇಶ್ ಕಾಂಚನ್ 

ಉಡುಪಿ: ನಾನು ಅನ್ಯಾಯದ ವಿರುದ್ಧ ಹೋರಾಟದ ಮೂಲಕ ಈ ಹಂತಕ್ಕೆ ಬಂದಿದ್ದೇನೆ. ಯಾವುದೇ ಜನಪರ ಹೋರಾಟದಲ್ಲಿ ಯಾವತ್ತೂ ಭಾಗಿ ಆಗದ ಮಹೇಶ್ ಠಾಕೂರ್ ಅವರ ಹೇಳಿಕೆಗಳಿಂದ ನನ್ನ ಹೋರಾಟ ಮನೋಭಾವವನ್ನು ಹತ್ತಿಕ್ಕಲು ಸಾಧ್ಯ ಇಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ನಗರ ಅಧ್ಯಕ್ಷ ಮಹೇಶ್ ಠಾಕೂರ್ ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕಾಂಚನ್ ಅವರು ಪ್ರಜಾಪ್ರಭುತ್ವದಲ್ಲಿ ನಡೆಯುವ ಸಭೆಯಲ್ಲಿ ಶಿಸ್ತು, ಘನತೆ ಈ ಎರಡನ್ನೂ ಉಲ್ಲಂಘಿಸಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ವರ್ತನೆ ಬಗ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದನ್ನು ತನ್ನ ಹಳೇ ಚಾಳಿ ಪ್ರಕಾರ ಲಾರಿ ಚಾಲಕರ ಹಾಗೂ ಕಾರ್ಮಿಕರ ವಿರುದ್ಧ ಎಂದು ತಿರುಚಿದ ಮಹೇಶ್ ಠಾಕೂರ್ ಅವರ ಹತಾಶೆಯನ್ನು ಖಂಡಿತವಾಗಿ ನಮ್ಮ ಜಿಲ್ಲೆಯ ಲಾರಿ ಚಾಲಕರು, ಕಾರ್ಮಿಕರು ಅರಿಯುತ್ತಾರೆ. ಮಹೇಶ್ ಠಾಕೂರ್ ಅವರು ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳ ವರ್ತನೆ ಹೇಗಿರಬೇಕೆಂದು ತನ್ನ ಪಕ್ಷದ ಹಿರಿಯರಿಂದ ಪಾಠ ಕಲಿತು ಮಾತಾಡಬೇಕು. ಅವರು ಕರ್ನಾಟಕದಲ್ಲಿ ಬಿಜೆಪಿ ಸೋತ ಹತಾಶೆಯಲ್ಲಿ ಈ ರೀತಿ ಮಾತಾಡುತ್ತಾ ಇದ್ದಾರೆ ಎಂದು ನನಗೆ ಅರ್ಥವಾಗುತ್ತದೆ.

ಎಸ್.ಪಿ ಡಾ. ಅರುಣ್ ಕುಮಾರ್ ಅವರು ಕಾನೂನು ಪ್ರಕಾರ ಎಲ್ಲಾ ಪ್ರತಿಭಟನೆಗೆ ಅವಕಾಶ ನೀಡುತ್ತಾ ಇದ್ದಾರೆ. ಈ ಹಿಂದೆ ಭಾರತ್ ಬಂದ್ ಸಂದರ್ಭದಲ್ಲಿ ಆಗಿನ ಎಸ್.ಪಿ ಅವರು ಲಾಟಿ ಏಟನ್ನು ನನಗೆ ನೀಡಿದ್ದ ವಿಚಾರವನ್ನು ಮಹೇಶ್ ಠಾಕೂರ್ ನೆನಪಿಸಿದ್ದಾರೆ. ನಾನು ಅನ್ಯಾಯದ ವಿರುದ್ಧ ಹೋರಾಟದ ಮೂಲಕ ಈ ಹಂತಕ್ಕೆ ಬಂದಿದ್ದೇನೆ. ಯಾವುದೇ ಜನಪರ ಹೋರಾಟದಲ್ಲಿ ಯಾವತ್ತೂ ಭಾಗಿ ಆಗದ ಮಹೇಶ್ ಠಾಕೂರ್ ಅವರ ಹೇಳಿಕೆಗಳಿಂದ ನನ್ನ ಹೋರಾಟ ಮನೋಭಾವವನ್ನು ಹತ್ತಿಕ್ಕಲು ಸಾಧ್ಯ ಇಲ್ಲ.

ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಲಾಭ ಇವತ್ತು ಕರಾವಳಿ ಸೇರಿದಂತೆ ರಾಜ್ಯದಾದ್ಯಂತ ಜನ ಪಕ್ಷಾತೀತವಾಗಿ ಪಡೆಯುತ್ತಾ ಇದ್ದಾರೆ. ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುವುದನ್ನು ಬಿಟ್ಟು ಸುಳ್ಳು ಹೇಳಿ ಜನರನ್ನು ಎತ್ತಿ ಕಟ್ಟುವ ಕೆಲಸ ಮುಂದುವರೆಸಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸಿಂಗಲ್ ಡಿಜಿಟ್ಗೆ ಬರಲಿದೆ.

ಸುನೀಲ್ ಕುಮಾರ್ ಶಾಸಕ ಆಗಿರಬಹುದು ಆದರೆ ಕೆ.ಡಿ.ಪಿ ಸಭೆಯಲ್ಲಿ ಅವರು ಸಭ್ಯತೆಯಿಂದ ನಡೆದುಕೊಳ್ಳದೆ ಅನಾಗರಿಕವಾಗಿ ಓರ್ವ ದೊಣ್ಣೆ ನಾಯಕನ ಹಾಗೆ ಸರ್ವಾಧಿಕಾರಿ ಮನೋಭಾವದಿಂದ ನಡೆದರೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾಗಿ ಪ್ರತಿಭಟಿಸಲಿದೆ. ಮಹೇಶ್ ಠಾಕೂರ್ ಅವರನ್ನೇ ಸೋಲಿಸಿ ನಗರಸಭೆಗೆ ಜನಪ್ರತಿನಿಧಿ ಆಗಿ ಬಂದವನು ನಾನು. ಮಹೇಶ್ ಠಾಕೂರ್ ನೇತೃತ್ವದ ಬಿಜೆಪಿಯ ಕಮೀಷನ್ ಹಾಗೂ ವಸೂಲಿ ಧಂಧೆ ಬಗ್ಗೆಯೂ ನನ್ನ ಗಮನಕ್ಕೆ ಬರುತ್ತಾ ಇದೆ. ಮುಂದಿನ ದಿನಗಳಲ್ಲಿ ಅವರ ಈ ಮುಂತಾದ ಅವ್ಯವಹಾರಗಳ ವಿರುದ್ದ ಕೂಡ ಕಾಂಗ್ರೆಸ್ ಪಕ್ಷದಿಂದ ಹೋರಾಟ ಮಾಡಲಾಗುತ್ತದೆ. ವಸೂಲಿ ಗಿರಾಕಿಗಳಿಂದ ನನಗೆ ಪಾಠದ ಅಗತ್ಯ ಇಲ್ಲ. ಉಡುಪಿ ನಗರದಲ್ಲಿ ಮುಂದಿನ ದಿನಗಳಲ್ಲಿ ಸರಕಾರದ ಜನಪರ ಯೋಜನೆಗಳನ್ನು ಮನೆಮನೆಗೆ ತಲುಪಿಸಿ ಬಿಜೆಪಿಯನ್ನು ಸೋಲಿಸುವುದು ಖಚಿತ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love