ಶೋಷಿತರ ಸ್ವಾಭಿಮಾನದ ಬದುಕಿಗೆ ದಾರಿದೀಪ ಕುದ್ಮುಲ್ ರಂಗರಾವ್- ವೇದವ್ಯಾಸ್ ಕಾಮತ್
ಮಂಗಳೂರು: ಮೇಲ್ವರ್ಗ-ಕೆಳವರ್ಗ ಎಂಬ ಭೇದದ ನಡುವೆ ಕುದ್ಮುಲ್ ರಂಗರಾವ್ ದಲಿತರ ಏಳಿಗೆಗೆ ಮತ್ತು ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಅಹರ್ನಿಶಿ ದುಡಿದು ಸಮಾಜಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ರಂಗರಾವ್ ಅವರ ದಲಿತ ಪರ ಅಭಿವೃದ್ಧಿ ಕಾರ್ಯಕ್ಕೆ ಸಾಕಷ್ಟು ವಿರೋಧಗಳಿದ್ದರೂ ಕೂಡ ಅದನ್ನು ಲೆಕ್ಕಿಸದೆ, ದಲಿತರಿಗೆ ಜಿಲ್ಲೆಯಲ್ಲಿ ಅನೇಕ ಶಾಲೆಗಳನ್ನು ತೆರೆದು, ಉದ್ಯೋಗಗಳನ್ನು ಒದಗಿಸಿ ಅವರ ಬದುಕಿಗೆ ಬೆಳಕಾದವರು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಅವರು ಸೋಮವಾರ ಮಂಗಳೂರು ಮಹಾನಗರಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ನಡೆದ ಕುದ್ಮುಲ್ ರಂಗರಾವ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅವರ ಆದರ್ಶ, ಸಮಾಜಮುಖಿ ಚಿಂತನೆಗಳನ್ನು ಮುಂದಿನ ಯುವ ತಲೆಮಾರುಗಳಿಗೆ ತಲುಪಿಸುವ ನಿಟ್ಟಿನಲ್ಲಿ, ನಗರದ ಬಾಬುಗುಡ್ಡೆಯಲ್ಲಿರುವ ರಂಗರಾವ್ ಅವರ ಸಮಾಧಿಯನ್ನು ಶೀಘ್ರವಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ ಕಾರ್ಯ ವಿಳಂಭವಾಗಬಾರದು. ಮಹಾನಗರಪಾಲಿಕೆ ವತಿಯಿಂದ ಪರಿಶಿಷ್ಟ ಜಾತಿಯ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವಂತಾಗಬೇಕು. ಅವರ ಆದರ್ಶ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಮಾತನಾಡಿ, ಅಸ್ಪøಶ್ಯತೆ ಮತ್ತು ಅಸಮಾನತೆಯ ವಿರುದ್ಧ ಹೋರಾಡುವ ದೀನದಲಿತರ ಅಭಿವೃದ್ಧಿಗಾಗಿ ರಂಗರಾಯರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಯುವಜನರ ಸಬಲೀಕರಣಕ್ಕೆ ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅವರು ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.
ಸಮಾಜದಲ್ಲಿ ಸುಧಾರಣೆ ತರಲು ಓರ್ವ ವ್ಯಕ್ತಿಯಿಂದಲೂ ಸಾಧ್ಯ ಎಂದು ಕುದ್ಮುಲ್ ರಂಗರಾವ್ ಅವರು ತೋರಿಸಿಕೊಟ್ಟಿದ್ದಾರೆ. ಜಾತಿ-ಬೇಧ ಎಂಬ ತಾರತಮ್ಯವಿಲ್ಲದೆ ಶೋಷಿತ ವರ್ಗದವರು ಶಿಕ್ಷಣ ಪಡೆದು ಸರಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬ ಅವರ ಚಿಂತನೆ ವಿಶೇಷ ಎಂದು ಅವರು ಹೇಳಿದರು.
ಗೋಕರ್ಣನಾಥ ಕಾಲೇಜು ಪ್ರಾಂಶುಪಾಲ ರಘುರಾಜ್ ಕದ್ರಿ ಉಪನ್ಯಾಸ ನೀಡಿ ಮಾತನಾಡಿ, 19 ನೇ ಶತಮಾನದಲ್ಲಿಯೇ ಶಾಲೆಗಳನ್ನು ತೆರೆದು ಶಾಲಾ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪ್ರೋತ್ಸಾಹಿಸಲು ಬಿಸಿಯೂಟದ ವ್ಯವಸ್ಥೆಯನ್ನು ಪ್ರಾರಂಭಿಸಿದ್ದರು. ದೀನ ದಲಿತರ ಉದ್ಧಾರವೇ ದೇಶದ ಉದ್ಧಾರ ಎಂಬ ಕಲ್ಪನೆಯನ್ನು ಮಾಡಿಕೊಂಡವರು ಕುದ್ಮುಲ್ ರಂಗರಾಯರು. ಸ್ಮಾರಕ ಅಭಿವೃದ್ಧಿಯಲ್ಲಿ ಯಾವುದೇ ಜಾತಿ-ಧರ್ಮ ಪಕ್ಷ ಬೇಧವಿಲ್ಲದೆ ಎಲ್ಲರೂ ಸಮಾನರಾಗಿ ಆಲೋಚಿಸಿದರೆ ಸ್ಮಾರಕ ಅಭಿವೃದ್ಧಿಯಾಗಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಮತ್ತಿತ್ತರರು ಉಪಸ್ಥಿತರಿದ್ದರು. ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸ್ವಾಗತಿಸಿದರು.













