ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಗುರಿ ಹೊಂದಿರುವ ಬಜೆಟ್ – ರಮೇಶ್ ಕಾಂಚನ್

Spread the love

ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಗುರಿ ಹೊಂದಿರುವ ಬಜೆಟ್ – ರಮೇಶ್ ಕಾಂಚನ್

ಉಡುಪಿ: ಭಾರತದ ಇತಿಹಾಸದಲ್ಲೇ ದಾಖಲೆಯ 15ನೇ ಬಜೆಟ್ ಮಂಡಿಸಿರುವ ಕರ್ನಾಟಕ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಜನಪರ 5 ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸುವುದರ ಜೊತೆಗೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡುವ ಗುರಿಯನ್ನು ಹೊಂದಿರುವ ಹೊಸ ಯೋಜನೆಗಳನ್ನು ನೀಡಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ, ಅನಾರೋಗ್ಯಕ್ಕೆ ತುತ್ತಾದ ಮೀನುಗಾರರ ರಕ್ಷಣೆಗೆ 7 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಪ್ರಪ್ರಥಮ ಸಮುದ್ರ ಆಂಬುಲೆನ್ಸ್ ಖರೀದಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ.

ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಮೀನುಗಾರರಿಗೆ ನೀಡುವ ಪರಿಹಾರ ಮೊತ್ತದ ರಾಜ್ಯದ ಪಾಲನ್ನು ₹1500 ರಿಂದ ₹3000ಕ್ಕೆ ಹೆಚ್ಚಳ.
ಅಂಗನವಾಡಿ ಕಾರ್ಯಕರ್ತೆಯರಿಗೆ 90 ಕೋಟಿ ರೂಪಾಯಿ ವೆಚ್ಚದಲ್ಲಿ 75.938 ಸ್ಮಾರ್ಟ್ಫೋನ್ ಹಾಗೂ 20,000 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ತರಬೇತಿ ಕಾರ್ಯಾಗಾರ ಪ್ರಾರಂಭಿಸಲು ತೀರ್ಮಾನ.
‘ಅನ್ನ–ಸುವಿಧಾ’ ಎಂಬ ಹೊಸ ಯೋಜನೆಯಡಿಯಲ್ಲಿ ಹೋಮ್ ಡೆಲಿವೆರಿ ಆಪ್ ಮೂಲಕ 80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ವ್ಯವಸ್ಥೆ ಜಾರಿ.
ಶಿಕ್ಷಣ ಕ್ಷೇತ್ರಕ್ಕೆ ಹಿಂದಿನ ಅವಧಿಗಿಂತ ದುಪ್ಪಟ್ಟು ಹಣ ನೀಡಿರುವ ಕ್ರಮ ಅಭೂತಪೂರ್ವ ನಿರ್ಧಾರವಾಗಿದೆ. ಸಮಾಜ ಕಲ್ಯಾಣ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಮೀಸಲಿಟ್ಟಿರುವುದು ಅಭಿನಂದನಾರ್ಹ. ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ, ಬಸವಣ್ಣ ಜನಿಸಿದ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ವಚನ ಪ್ರಚಾರ ಕಾರ್ಯ ಸರ್ಕಾರದ ಬಸವಣ್ಣನ ವಿಚಾರಗಳೆಡೆಗೆ ಇರುವ ಬದ್ಧತೆಯನ್ನು ಪ್ರದರ್ಶಿಸಿದೆ. ಜೊತೆಗೆ ಇ-ಆಡಳಿತ, ಆಡಳಿತ ಸುಧಾರಣೆ, ವೇತನ ಪರಿಷ್ಕರಣೆ, ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡಾ ಕ್ಷೇತ್ರಗಳ ಹೆಚ್ಚಿನ ಉತ್ತೇಜನಕ್ಕೆ ನೀಡಲಾಗಿದೆ.
ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ, ರಾಮಮನೋಹರ ಲೋಹಿಯಾ, ಬಾಬು ಜಗಜೀವನ್ ರಾಮ್ ಅವರ ಕೃತಿಗಳ ಕನ್ನಡ ಅನುವಾದಗಳನ್ನು ಮಾಡಲು ಉದ್ದೇಶಿಸಿರುವುದು ಕನ್ನಡಿಗರನ್ನು ಸೈದ್ಧಾಂತಿಕವಾಗಿ ಗಟ್ಟಿಗೊಳಿಸುವ ಪ್ರಯತ್ನವಾಗಿದೆ.
ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದ್ದು, ಬಜೆಟ್ ನಲ್ಲಿ ಇದನ್ನು ಉಲ್ಲೇಖಿಸಿ, ಅಗತ್ಯ ಕ್ರಮಕೈಗೊಂಡಿರುವುದು ಕನ್ನಡದ ಅಭಿವೃದ್ಧಿಯೆಡೆಗೆ ಕಾಂಗ್ರೆಸ್ ಸರ್ಕಾರದ ಬದ್ಧತೆಯ ಪ್ರತೀಕವಾಗಿದೆ.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಪಾಸ್ ಸೇರಿದಂತೆ ವಿವಿಧ ಯೋಜನೆಗಳನ್ನು ನೀಡುವ ಮೂಲಕ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಸರ್ಕಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ಅನುದಾನ ಮೀಸಲಿಡಲಾಗಿದೆ. ಕುಡಿಯುವ ನೀರು, ಕೃಷಿ ಹಾಗೂ ಕೈಗಾರಿಕೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆ. ಪ್ರಸಕ್ತ ಸಾಲಿನಲ್ಲಿ ₹200 ಕೋಟಿ ಅಂದಾಜು ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ, ಚೆಕ್ ಡ್ಯಾಂ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಂತಹ 115 ಕಾಮಗಾರಿಗಳು ಪ್ರಾರಂಭಿಸಲು ತೀರ್ಮಾನ. ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರು. 46,829 ಶಾಲೆಗಳು 1,234 ಪಿಯು ಕಾಲೇಜುಗಳಿಗೆ ಉಪಯೋಗ. ಸಮಾಜದ ಎಲ್ಲಾ ವರ್ಗದ ಜನರಿಗೆ ಸಹಕಾರಿಯಾಗಲಿರುವ ಬಜೆಟ್ ಇದಾಗಿದ್ದು ಇಂತಹ ಜನಪರ ಬಜೆಟ್ ಮಂಡಿಸಿದ ಸನ್ಮಾನ್ಯ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.


Spread the love